High Court of Karnataka 
ಸುದ್ದಿಗಳು

ವಿಷಾಹಾರ ಸೇವನೆಯಿಂದ ಭಕ್ತರ ಸಾವು: ಆರೋಪಿ ಇಮ್ಮಡಿ ಸ್ವಾಮಿಗೆ ಒಂದು ವರ್ಷ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

“ಅರ್ಜಿದಾರರಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ" ಎಂಬ ಹಿನ್ನೆಲೆಯಲ್ಲಿ ಒಂದು ವರ್ಷದ ಅವಧಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌.

Bar & Bench

ಚಾಮರಾಜನಗರ ಜಿಲ್ಲೆ ಹನೂರ ತಾಲ್ಲೂಕಿನ ಸುಲ್ವಡಿ ಗ್ರಾಮದ ಕಿಚ್ಚಗುತ್ತಿ ಮಾರಮ್ಮ ದೇಗುಲ ಕಟ್ಟಡದ ಶಂಕುಸ್ಥಾಪನೆ ವೇಳೆ ವಿನಿಯೋಗಿಸಿದ್ದ ಪ್ರಸಾದ ಸೇವಿಸಿ 17 ಭಕ್ತರು ಮೃತಪಟ್ಟು 119 ಜನ ಅಸ್ವಸ್ಥಗೊಂಡ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಲೂರು ಮಠದ ಅಂದಿನ ಪೀಠಾಧ್ಯಕ್ಷ ಇಮ್ಮಡಿ ಮಹಾದೇವ ಸ್ವಾಮಿ ಅವರಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಇಮ್ಮಡಿ ಮಹದೇವ ಸ್ವಾಮಿ ಅಲಿಯಾಸ್ ದೇವಣ್ಣ ಬುದ್ಧಿ ಅಲಿಯಾಸ್ ದೇವಣ್ಣ ಸ್ವಾಮೀಜಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಹಿರಿಯ ವಕೀಲ ಸಿ ಎಚ್ ಹನುಮಂತರಾಯ ಹಾಗೂ ಸಿದ್ದೇಶ್ವರ ಅವರು ಮಂಡಿಸಿದ ವಾದ ಮನ್ನಿಸಿದ ಪೀಠವು “ಅರ್ಜಿದಾರರಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ" ಎಂಬ ಹಿನ್ನೆಲೆಯಲ್ಲಿ ಒಂದು ವರ್ಷದ ಅವಧಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

ಪ್ರಕರಣದ ಹಿನ್ನೆಲೆ:

ಚಾಮರಾಜನಗರ ಜಿಲ್ಲೆ ಹನೂರ ತಾಲ್ಲೂಕಿನ ಸುಲ್ವಡಿ ಗ್ರಾಮದ ಕಿಚ್ಚಗುತ್ತಿ ಮಾರಮ್ಮ ದೇಗುಲ ಕಟ್ಟಡದ ಶಂಕುಸ್ಥಾಪನೆ ವೇಳೆ ವಿನಿಯೋಗಿಸಿದ್ದ ಪ್ರಸಾದ ಸೇವಿಸಿ 17 ಭಕ್ತರು ಮೃತಪಟ್ಟು 119 ಜನ ಅಸ್ವಸ್ಥಗೊಂಡಿದ್ದರು. ಘಟನೆಯ ಕುರಿತು 2018ರ ಡಿಸೆಂಬರ್ 14ರಂದು ರಾಜಮ್ಮ ಎಂಬುವರ ದೂರನ್ನು ಆಧರಿಸಿ ಚಾಮರಾಜನಗರ ಜಿಲ್ಲೆಯ ರಾಂಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.

ತನಿಖೆ ನಡೆಸಿದ್ದ ಪೊಲೀಸರು  ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 118, 120 ಬಿ, 326, 307, 302 ಮತ್ತು 34 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯಿದೆಯ ಸೆಕ್ಷನ್‌ 3 (1)(2) (ವಿ) (ವಿಎ) ಅಡಿಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹಾದೇವ ಸ್ವಾಮೀಜಿಯವರನ್ನು 2018ರ ಡಿಸೆಂಬರ್ 19ರಂದು ಬಂಧಿಸಲಾಗಿತ್ತು.