CBI, ED, 2G
CBI, ED, 2G 
ಸುದ್ದಿಗಳು

2ಜಿ ಹಗರಣ ಖುಲಾಸೆ ಪ್ರಕರಣ: ಶೀಘ್ರ ವಿಚಾರಣಾ ಮನವಿ ಕುರಿತು ಆದೇಶ ಕಾಯ್ದಿರಿಸಿದ ದೆಹಲಿ ಹೈಕೋರ್ಟ್

Bar & Bench

ಡಿಎಂಕೆ ನಾಯಕರು ಭಾಗಿಯಾಗಿದ್ದ 2ಜಿ ತರಂಗಾಂತರ ಹಗರಣದ ಆರೋಪಿಗಳ ಖುಲಾಸೆ ಪ್ರಶ್ನಿಸಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಅರ್ಜಿಯನ್ನು ಶೀಘ್ರ ವಿಚಾರಣೆ ನಡೆಸುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದ ತೀರ್ಪನ್ನು ಮಂಗಳವಾರ ದೆಹಲಿ ಹೈಕೋರ್ಟ್ ಕಾಯ್ದಿರಿಸಿದೆ (ಇ.ಡಿ ವರ್ಸಸ್ ಎ ರಾಜಾ).

ಉಭಯ ವಾದಗಳನ್ನು ಆಲಿಸಿದ ನ್ಯಾ. ಬ್ರಿಜೇಶ್ ಸೇಥಿ ಅವರಿದ್ದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇ.ಡಿ ತುರ್ತಾಗಿ ವರ್ಚುವಲ್ ವಿಚಾರಣೆ ನಡೆಸುವಂತೆ ಕೋರಿದ್ದು, ಇದೇ ವರ್ಷದ ನವೆಂಬರ್‌ನಲ್ಲಿ ನ್ಯಾ. ಸೇಥಿ ಅವರು ನಿವೃತ್ತರಾಗಲಿರುವುದರಿಂದ ಪ್ರಕರಣದ ವಿಚಾರಣೆಯ ಮೇಲ್ಮನವಿ ಸಲ್ಲಿಸಲು ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ಮತ್ತು ನ್ಯಾಯಾಲಯದ ಸಮಯವನ್ನು ಉಳಿಸುವ ಉದ್ದೇಶದಿಂದ ಅಕ್ಟೋಬರ್ 12ಕ್ಕೆ ನಿಗದಿಗೊಳಿಸಲಾಗಿರುವ ವಿಚಾರಣೆಯನ್ನು ಬೇಗ ನಡೆಸಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಮನವಿ ಮಾಡಿದ್ದಾರೆ.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತೆರನಾದ ತುರ್ತು ಇಲ್ಲ. ಆದ್ದರಿಂದ ತುರ್ತು ವಿಚಾರಣೆ ಅಗತ್ಯವಿಲ್ಲ ಎಂದು ಖುಲಾಸೆಗೊಂಡಿರುವ ಆರೋಪಿಗಳಾದ ಎ ರಾಜಾ ಮತ್ತು ಕೆ ಕನಿಮೋಳಿ ಹೇಳಿದ್ದಾರೆ.

ಈಗಾಗಲೇ ನಿರ್ಧಾರವಾಗಿರುವ ವಿಚಾರಣೆ ದಿನಾಂಕವನ್ನು ನ್ಯಾಯಮೂರ್ತಿಗಳು ನಿವೃತ್ತರಾಗುತ್ತಾರೆ ಎಂಬ ಕಾರಣಕ್ಕೆ ಶೀಘ್ರವಾಗಿ ನಡೆಸಲಾಗದು ಎಂದು ವಕೀಲರು ಹೇಳಿದ್ದಾರೆ. 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಇತರೆ ಹಲವು ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದರೂ ಸದರಿ ಪ್ರಕರಣದಲ್ಲಿ ತೋರುತ್ತಿರುವ ಆಸಕ್ತಿಯನ್ನು ಅವುಗಳ ಬಗ್ಗೆ ತನಿಖಾ ಸಂಸ್ಥೆಗಳು ತೋರುತ್ತಿಲ್ಲ ಎಂದೂ ವಾದಿಸಲಾಗಿದೆ.

“ನೈಜ ಪ್ರಯತ್ನ ಮಾಡುವುದರೊಂದಿಗೆ ವಕೀಲರು ಅಗತ್ಯ ಸಹಾಯ ಮಾಡಿದರೆ ಅರೆಬರೆಯಾಗಿರುವ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಬಹುದು. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯನ್ನು ತುರ್ತಿನೊಂದಿಗೆ ಜೋಡಿಸಬೇಕಿದೆ. ಭಾಗಶಃ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸುವುದರಲ್ಲಿ ತುರ್ತು ಅಡಗಿದೆ” ಎಂದು ಸಂಜಯ್ ಜೈನ್ ಹೇಳಿದ್ದಾರೆ.

ನ್ಯಾಯಮೂರ್ತಿಗಳ ಮುಂದೆ ಬಾಕಿ ಇರುವ ಪ್ರಕರಣಗಳ ವಿಚಾರಣೆಗೆ ತಡೆಯೊಡ್ಡಲು ಯಾವುದೇ ಆಡಳಿತಾತ್ಮಕ ಸುತ್ತೋಲೆಗೂ ಸಾಧ್ಯವಿಲ್ಲ ಎಂದು ಸಂಜಯ್ ಜೈನ್ ಹೇಳಿದ್ದಾರೆ. 2017ರ ಡಿಸೆಂಬರ್‌ನಲ್ಲಿ ಸಿಬಿಐ ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ಖುಲಾಸೆಗಳಿಸಿದ ಬಳಿಕ 2018ರ ಮಾರ್ಚ್‌ನಲ್ಲಿ ಸಿಬಿಐ ಮತ್ತು ಇ ಡಿ ಗಳು ಹೈಕೋರ್ಟ್‌ನಲ್ಲಿ ತೀರ್ಪು ಮರುಪರಿಶೀಲನಾ ಮನವಿ ಸಲ್ಲಿಸಿವೆ.