Justice M Nagaprasanna 
ಸುದ್ದಿಗಳು

ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಶಿಕ್ಷಕರ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

Bar & Bench

“ವಿದ್ಯಾರ್ಥಿ ಬದುಕು ಅತ್ಯಂತ ಅಮೂಲ್ಯ, ಶಿಕ್ಷಕರು ಶಿಸ್ತು ಕಲಿಸುವ ನೆಪದಲ್ಲಿ ಜೀವಕ್ಕೆ ಹಾನಿಯಾಗುವಂಥ ಕೆಲಸ ಮಾಡಬಾರದು” ಎಂದು ಈಚೆಗೆ ಅಭಿಪ್ರಾಯ ಪಟ್ಟಿರುವ ಕರ್ನಾಟಕ ಹೈಕೋರ್ಟ್, ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ ಆತ್ಮಹತ್ಯೆಗೆ ಕಾರಣವಾದ ಆರೋಪಕ್ಕೆ ಗುರಿಯಾಗಿರುವ ಶಿಕ್ಷಕರ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.

ಸಹಪಾಠಿಯೊಬ್ಬರನ್ನು ಚುಂಬಿಸುವ ವಿಡಿಯೊವನ್ನು ಪ್ರಸಾರ ಮಾಡುವುದಾಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕುವ ಮೂಲಕ ಆಕೆಯ ಸಾವಿಗೆ ಕಾರಣವಾಗಿದ್ದ ಆರೋಪದಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಧರ್ಮಸ್ಥಳದ ಎಸ್‌ಡಿಎಂ ಪ್ರೌಢಶಾಲೆ ಶಿಕ್ಷಕರಾದ ರೂಪೇಶ್ ಮತ್ತು ಸದಾನಂದ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ. ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ಘಟನೆ ಕುರಿತು ವಿಚಾರಣೆ ನಡೆಸಬೇಕಾದ ಅಗತ್ಯವಿದೆ ಎಂದಿದೆ.

ಹದಿಹರೆಯದ ಮಕ್ಕಳಿಗೆ ಶಿಕ್ಷಕರು ಬೋಧನೆ ಮಾಡುವ ಸಂದರ್ಭದಲ್ಲಿ ಅವರ ಮಾನಸಿಕ ಸ್ಥಿತಿಗತಿ ಗಮನದಲ್ಲಿಟ್ಟುಕೊಳ್ಳಬೇಕು ಬದಲಿಗೆ ಮಕ್ಕಳನ್ನು ನಿರ್ಜೀವಿಗಳಂತೆ ನೋಡಬಾರದು ಎಂದಿದೆ.

ಶಿಕ್ಷಕರು ಮತ್ತು ಬೋಧಕರ ನಡುವೆ ಸೌರ್ಹಾದ ಸಂಬಂಧವಿರಬೇಕು. ಮಕ್ಕಳ ವಿಚಾರದಲ್ಲಿ ಶಿಕ್ಷಕರಲ್ಲಿನ ಸಂಕುಚಿತ ದೃಷ್ಟಿಕೋನ ಬದಲಾಗಬೇಕು. ವಿದ್ಯಾರ್ಥಿಗಳ ಜೀವನ ಅತ್ಯಂತ ಅಮೂಲ್ಯವಾಗಿದ್ದು, ಶಿಕ್ಷಕರು ಶಿಸ್ತು ಕಲಿಸುವ ನೆಪದಲ್ಲಿ ಕ್ಷಮಿಸಲಾಗದ ಕೃತ್ಯಗಳನ್ನು ಮಾಡುವ ಮೂಲಕ ಮಕ್ಕಳು ಆಕಸ್ಮಿಕವಾಗಿ ಜೀವ ಕಳೆದುಕೊಳ್ಳುವಂತೆ ಮಾಡಬಾರದು ಎಂದು ಪೀಠ ಹೇಳಿದೆ.

ಶಿಕ್ಷಕ ಸದಾನಂದ ಎಂಬುವರು, ನೀನು (ಮೃತ ವಿದ್ಯಾರ್ಥಿನಿ) ಮತ್ತೊಬ್ಬ ಯುವಕನನ್ನು ಚುಂಬಿಸುತ್ತಿರುವ ವಿಡಿಯೋ ತನ್ನ ಬಳಿ ಇದೆ. ಅದನ್ನು ಎಲ್ಲರಿಗೂ ತಿಳಿಯುವಂತೆ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂಬುದಾಗಿ ಮೃತ ವಿದ್ಯಾರ್ಥಿನಿ ಮರಣಪೂರ್ವ ಹೇಳಿಕೆ ನೀಡಿದ್ದಾರೆ. ಆದರೆ, ಶಿಕ್ಷಕರಾಗಿರುವ ಅರ್ಜಿದಾರರು ವಿದ್ಯಾರ್ಥಿನಿ ಅಶಿಸ್ತಿನಿಂದ ನಡೆದುಕೊಂಡಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿನಿ ಯುವಕನನ್ನು ಮಾತನಾಡಿಸುವುದು ಅಶಿಸ್ತು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ವಿವರಿಸಿದೆ.

ಮೃತ ವಿದ್ಯಾರ್ಥಿನಿ 14 ವರ್ಷದವರಾಗಿದ್ದು, ದೈಹಿಕ ಮತ್ತು ಮಾನಸಿಕವಾಗಿ ಬದಲಾಗುವ ಹಂತದಲ್ಲಿದ್ದರು. ಅಂತಹ ಮಕ್ಕಳ ಜೊತೆ ಸಹಾನುಭೂತಿಯಿಂದ ವ್ಯವಹರಿಸಬೇಕು. ಕಾಲ ಬದಲಾಗಿದ್ದು, ಅದಕ್ಕೆ ಅನುಗುಣವಾಗಿ ನಾವು ಬದಲಾಗಬೇಕು ಎಂಬ ಅಂಶವನ್ನು ಶಿಕ್ಷಕರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಎಸ್‌ಡಿಎಂ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಮೃತ ಬಾಲಕಿ, ಅದೇ ಶಾಲೆಯಲ್ಲಿನ ಯುವಕರೊಬ್ಬರೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದರು. ಈ ಸಂಬಂಧ ಶಿಕ್ಷಕರು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿಧ್ಯಾರ್ಥಿನಿ ತಾಯಿಯ ಗಮನಕ್ಕೆ ತಂದಿದ್ದರು. ಈ ವಿಚಾರದ ಸಂಬಂಧ ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿ ತಾಯಿ, ತನ್ನ ಮಗಳ ಬಗ್ಗೆ ಏನೇ ಆರೋಪವಿದ್ದರೂ, ಅದನ್ನು ಇತರೆ ಮಕ್ಕಳ ಮುಂದೆ ಬಹಿರಂಗಪಡಿಸಿ ಅವಮಾನಿಸದೆ ತನ್ನ ಗಮನಕ್ಕೆ ತರಬೇಕು. ಯಾವುದೇ ಕಾರಣಕ್ಕೂ ತನ್ನ ಮಗಳ ಘನೆತೆಗೆ ಮಸಿ ಬಳಿಯುವಂತಾಗಬಾರದು ಎಂದು ಶಿಕ್ಷಕರಿಗೆ ಕೋರಿದ್ದರು.

ಇದಾದ ಬಳಿಕವೂ ವಿದ್ಯಾರ್ಥಿನಿ ಆ ಯುವಕನೊಂದಿಗೆ ಮಾತನಾಡುವುದು ಮುಂದುವರಿದಿತ್ತು.  ಈ ವಿಚಾರವನ್ನು ಅರ್ಜಿದಾರ ರೂಪೇಶ್ ಇತರೆ ವಿದ್ಯಾರ್ಥಿಗಳಿಗೆ ತಿಳಿಸಿ ಅವಮಾನಿಸಿದ್ದರು. ಇದರಿಂದ ಬಾಲಕಿಯು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಪ್ರಕರಣ ಸಂಬಂಧ ಅದೇ ಶಾಲೆಯ ಚಿತ್ರಕಲಾ ಶಿಕ್ಷಕ ರೂಪೇಶ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಸದಾನಂದ ವಿರುದ್ಧ ವಿದ್ಯಾರ್ಥಿನಿ ತಾಯಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಧರ್ಮಸ್ಥಳ ಪೊಲೀಸರು ಆರಂಭದಲ್ಲಿ ಐಪಿಸಿಯ ವಿವಿಧ ಸೆಕ್ಷನ್‌ಗಳು, ಪೋಕ್ಸೊ ಮತ್ತು ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ ಅಡಿ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ವಿದ್ಯಾರ್ಥಿನಿಯ ಸಾವಿನ ನಂತರ, ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆಗಾಗಿ ಐಪಿಸಿ ಸೆಕ್ಷನ್ 305 ಅನ್ನು ಸೇರಿಸಿ ಎಫ್‌ಐಆರ್ ದಾಖಲಿಸಿ ವಿಚಾರಣೆ ಮುಂದುವರೆಸಿದ್ದರು. ಇದನ್ನು ರದ್ದುಗೊಳಿಸಲು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

Roopesha and other Vs State of Karnataka.pdf
Preview