Karnataka High Court 
ಸುದ್ದಿಗಳು

ಸಿಹಿ ಹಂಚಿ ರಾಷ್ಟ್ರಧ್ವಜಕ್ಕೆ ಕೈ ಒರೆಸಿದ ಆರೋಪ: ಕೃಷ್ಣಪ್ಪ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವುದಕ್ಕೆ ಹೈಕೋರ್ಟ್‌ ತಡೆ‌

ಕೃಷ್ಣಪ್ಪಗೆ ರಾಷ್ಟ್ರಧ್ವಜಕ್ಕೆ ಅಪಮಾನ ಉಂಟು ಮಾಡುವಂತಹ ಯಾವುದೇ ಉದ್ದೇಶ ಇರಲಿಲ್ಲ. ಭಾರತೀಯ ಸೇನೆಯು ಯಶಸ್ಸು ಸಾಧಿಸಿದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸಿಹಿ ಹಂಚಲಾಗಿತ್ತು. ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಈ ಘಟನೆ ನಡೆದಿದೆ ಎಂದ ವಿವೇಕ್.

Bar & Bench

ಸಿಹಿ ಹಂಚಿದ ನಂತರ ಕೈಯನ್ನು ರಾಷ್ಟ್ರಧ್ವಜದಿಂದ ಒರೆಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಎ ಕೃಷ್ಣಪ್ಪ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವ ನ್ಯಾಯಿಕ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮಧ್ಯಂತರ ತಡೆ ನೀಡಿದೆ.

ಬೆಂಗಳೂರಿನ ತಿಲಕನಗರ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಎ ಕೃಷ್ಣಪ್ಪ ಬಿನ್‌ ಅಣ್ಣಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಅವರು “ಅರ್ಜಿದಾರರಿಗೆ ರಾಷ್ಟ್ರಧ್ವಜಕ್ಕೆ ಅಪಮಾನ ಉಂಟು ಮಾಡುವಂತಹ ಯಾವುದೇ ಉದ್ದೇಶ ಇರಲಿಲ್ಲ. ಭಾರತೀಯ ಸೇನೆಯು, ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಯಶಸ್ಸು ಸಾಧಿಸಿದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸಿಹಿ ಹಂಚಲಾಗಿತ್ತು. ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಈ ಘಟನೆ ನಡೆದಿದೆ” ಎಂದು ಪೀಠಕ್ಕೆ ವಿವರಿಸಿದರು.

ಇದನ್ನು ಪರಿಗಣಿಸಿದ ಪೀಠವು ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವ ಪ್ರಕ್ರಿಯೆಗೆ ತಡೆ ನೀಡಿತು. ಅಂತೆಯೇ, ಅರ್ಜಿಗೆ ಸಂಬಂಧಿಸಿದಂತೆ ತಿಲಕನಗರ ಠಾಣಾಧಿಕಾರಿ ಮತ್ತು ಪ್ರಕರಣದ ದೂರುದಾರ ಪೊಲೀಸ್‌ ಅಧಿಕಾರಿ ಮಂಜುನಾಥ್‌ ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಯಶಸ್ವಿ ದಾಳಿ ಕೈಗೊಂಡ ಹಿನ್ನೆಲೆಯಲ್ಲಿ ಜಯನಗರದ 4ನೇ ಹಂತದಲ್ಲಿರುವ ವಿನಾಯಕ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ಕನ್ನಡಭಿಮಾನ ಸಂಘವು ಇದೇ 8ರಂದು ಸಿಹಿ ಹಂಚಿಕೆ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಸಿಹಿ ಹಂಚಿದ ನಂತರ ಕೃಷ್ಣಪ್ಪ ತಮ್ಮ ಕೈಯನ್ನು ರಾಷ್ಟ್ರಧ್ವಜಕ್ಕೆ ಒರೆಸಿದ್ದಾರೆ. ಆ ಮೂಲಕ ರಾಷ್ಟ್ರಧ್ವಜದ ಘನತೆ ಮತ್ತು ಗೌರವಕ್ಕೆ ಅವಮಾನ ಎಸಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ಮಂಜುನಾಥ್‌ ತಿಲನಗರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೃಷ್ಣಪ್ಪ ವಿರುದ್ಧ, ರಾಷ್ಟ್ರೀಯ ಗೌರವಗಳಿಗೆ ಅಪಮಾನ ತಡೆ ಕಾಯಿದೆ-1971ರ ಸೆಕ್ಷನ್‌ 2ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.