Yuva Rajkumar and Sridevi Yuva Twitter
ಸುದ್ದಿಗಳು

ಪತ್ನಿ ಶ್ರೀದೇವಿಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ ನಟ ಯುವ ರಾಜ್‌ಕುಮಾರ್‌

Bar & Bench

ವರನಟ ಡಾ. ರಾಜ್‌ಕುಮಾರ್‌ ಮೊಮ್ಮಗ ನಟ ಯುವ ರಾಜ್‌ಕುಮಾರ್ ತಮ್ಮ ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ನಟ ರಾಘವೇಂದ್ರ ರಾಜಕುಮಾರ್ ಪುತ್ರ ಯುವ ಮತ್ತು ಶ್ರೀದೇವಿ ಪ್ರೀತಿಸಿ 2019ರ ಮೇ 25ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು. ವಿಚ್ಛೇದನ ಪಡೆಯುವ ವಿಚಾರವಾಗಿ ಪತ್ನಿಗೆ ಯುವ ರಾಜ್‌ಕುಮಾರ್‌ ಲೀಗಲ್‌ ನೋಟಿಸ್ ನೀಡಿದ್ದರು. ಅದಕ್ಕೆ ಶ್ರೀದೇವಿ ಉತ್ತರ ನೀಡಿದ್ದರು.

ಈಗ ವಿವಾಹ ರದ್ದತಿ ಕೋರಿ ಹಿಂದೂ ವಿವಾಹ ಕಾಯಿದೆ ಸೆಕ್ಷನ್‌ 13(1)(ಐಎ) ಅಡಿಯಲ್ಲಿ ಯುವ ರಾಜ್‌ಕುಮಾರ್‌ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ 2024ರ ಜೂನ್‌ 6ರಂದು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಬೆಂಗಳೂರಿನ 1ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಎಂ ಎಸ್‌ ಕಲ್ಪನಾ ಅವರು ಶ್ರೀದೇವಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಶ್ರೀದೇವಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿರುವ ನ್ಯಾಯಾಲಯವು ವಿಚಾರಣೆಯನ್ನು 2024ರ ಜುಲೈ 4ಕ್ಕೆ ಮುಂದೂಡಿದೆ.