Lawyers, social media
Lawyers, social media 
ಸುದ್ದಿಗಳು

ವಕೀಲರು ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಲಯದ ಚರ್ಚೆಗಳನ್ನು ಬಹಿರಂಗಪಡಿಸಬಾರದು: ಕರ್ನಾಟಕ ಹೈಕೋರ್ಟ್

Bar & Bench

ಪ್ರಕರಣಗಳಿಗೆ ಹಾಜರಾಗುವ ವಕೀಲರು ಮತ್ತು ಖುದ್ದು ಹಾಜರಿರಬೇಕಾದ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಲಯದ ಚರ್ಚೆಗಳನ್ನು ಬಹಿರಂಗಪಡಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಮೌಖಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿತು.

ನ್ಯಾಯಗಳಲ್ಲಿ ಚರ್ಚಿಸಿದ ವಿಚಾರಗಳನ್ನು ಕೆಲ ವಕೀಲರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ ಎಂದು ಬಿಬಿಎಂಪಿ ಪರವಾಗಿ ಹಾಜರಾದ ವಕೀಲ ಶ್ರೀನಿಧಿ ಅವರು ಗಮನಕ್ಕೆ ತಂದ ಬಳಿಕ ನ್ಯಾಯಾಲಯ ಈ ಅಭಿಪ್ರಾಯವ್ಯಕ್ತಪಡಿಸಿತು.

“ಪ್ರಕರಣಗಳು ತೀರ್ಮಾನವಾಗುವವರೆಗೆ ಪ್ರಕರಣಗಳ ಕುರಿತು ವಕೀಲರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡಬಾರದು. ಈ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಭಾವಿಸುತ್ತೇವೆ” ಎಂಬುದಾಗಿ ಪೀಠ ಹೇಳಿತು.

ಇಂತಹ ಘಟನೆಗಳಲ್ಲಿ ದುರುದ್ದೇಶದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಏನನ್ನೂ ಹೇಳಿಲ್ಲ ಎಂದು ಆಪಾದನೆಯನ್ನು ಎದುರಿಸಿದ ವಕೀಲರು ಹೇಳಿದರು.

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ನಿರ್ವಹಣೆ ಕುರಿತಂತೆ ಬರೆಯಲಾಗಿರುವ ಎರಡು ಪತ್ರಗಳನ್ನು ಆಧರಿಸಿ ನ್ಯಾಯಾಲಯ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಈ ವಿಚಾರ ಪ್ರಸ್ತಾಪವಾಯಿತು. ಇದೇ ವೇಳೆ ನ್ಯಾಯಾಲಯ ಕೋವಿಡ್‌ ಲಸಿಕೆ ಆಘಾತಕಾರಿ ಎಂಬಷ್ಟು ಕಡಿಮೆ ಪ್ರಮಾಣದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿತ್ತು. ಪ್ರಕರಣದ ಮುಂದಿನ ವಿಚಾರಣೆ ಮೇ 11ಕ್ಕೆ ನಿಗದಿಯಾಗಿದೆ.