Lucknow bench of Allahabad High Court
Lucknow bench of Allahabad High Court 
ಸುದ್ದಿಗಳು

ಹುದ್ದೆ ದುರ್ಬಳಕೆ ಮಾಡಿ ಇಸ್ಲಾಂಗೆ ಜನರ ಮತಾಂತರ: ಕೇಂದ್ರ ನೌಕರನಿಗೆ ಜಾಮೀನು ನಿರಾಕರಿಸಿದ ಅಲಾಹಾಬಾದ್ ಹೈಕೋರ್ಟ್

Bar & Bench

ಹುದ್ದೆ ದುರುಪಯೋಗಪಡಿಸಿಕೊಂಡು ಇಸ್ಲಾಂಗೆ ಜನರ ಮತಾಂತರ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರನಿಗೆ ಜಾಮೀನು ನಿರಾಕರಿಸುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ [ಇರ್ಫಾನ್‌ ಶೇಖ್‌ ಅಲಿಯಾಸ್‌ ಇರ್ಫಾನ್‌ ಖಾನ್‌ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

2016ರಿಂದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಬರುವ ದೆಹಲಿಯ ಭಾರತೀಯ ಸಂಕೇತ ಭಾಷಾ ತರಬೇತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ವ್ಯಾಖ್ಯಾನಕಾರನಾಗಿ ಸೇವೆ ಸಲ್ಲಿಸುತ್ತಿದ್ದ ಮೇಲ್ಮನವಿದಾರ ಇರ್ಫಾನ್ ಶೇಖ್. ಆತ ಹಾಗೂ ಸಹ-ಆರೋಪಿಗಳು ಮತಾಂತರದಂತಹ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ತನಿಖಾಧಿಕಾರಿಯ ಸಾಕ್ಷ್ಯವನ್ನು ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ಬ್ರಿಜ್ ರಾಜ್ ಸಿಂಗ್ ಅವರಿದ್ದ ಪೀಠ ಗಣನೆಗೆ ತೆಗೆದುಕೊಂಡಿತು.

ಮತಾಂತರದ ಉದ್ದೇಶಕ್ಕಾಗಿ ಉಮರ್ ಗೌತಮ್ ಎಂಬ ಮತಾಂತರಿತ ಮುಸ್ಲಿಂ ಮತ್ತು ಆತನ ಸಹಚರರು ನಡೆಸುತ್ತಿರುವ ಇಸ್ಲಾಮಿಕ್ ದಾವಾ ಸೆಂಟರ್ ಎಂಬ ಸಂಘಟನೆಯ ಭಾಗವಾಗಿ ಇರ್ಫಾನ್‌ ಕೆಲಸ ಮಾಡುತ್ತಿದ್ದ. ಈ ಸಂಘಟನೆಗೆ ವಿದೇಶ ಸೇರಿದಂತೆ ವಿವಿಧ ಮೂಲಗಳಿಂದ ಹಣ ಹರಿದುಬರುತ್ತಿತ್ತು ಎಂದು ಆರೋಪಿಸಲಾಗಿತ್ತು. ಕಿವುಡ ಮತ್ತು ಮೂಕ ಶಾಲೆಯ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಇರ್ಫಾನ್‌ ಮತಾಂತರ ಮಾಡುತ್ತಿದ್ದ ಎಂದೂ ದೂರಲಾಗಿತ್ತು. ವಿಚಾರಣಾ ನ್ಯಾಯಾಲಯ ತನ್ನ ಜಾಮೀನು ಅರ್ಜಿ ತಿರಸ್ಕರಿಸಿದ ಬಳಿಕ ಇರ್ಫಾನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದ.

ತಾನು ಯಾವುದೇ ಸಂಘಟನೆಯ ಭಾಗವಲ್ಲ ಹಾಗೂ ಯಾವುದೇ ಅಪರಾಧ ಮಾಡಿಲ್ಲ ಎಂಬ ಇರ್ಫಾನ್‌ ವಾದಕ್ಕೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಆತ ಅಪರಾಧದಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ದೃಢಪಟ್ಟಿದೆ ಎಂದು ಅದು ಪ್ರತಿಪಾದಿಸಿತು. ವಾದ ಆಲಿಸಿದ ನ್ಯಾಯಾಲಯ ಜಾಮೀನು ನೀಡಲು ಯಾವುದೇ ಸೂಕ್ತ ಆಧಾರಗಳಿಲ್ಲ ಎಂದು ತಿಳಿಸಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ದೃಢಪಡಿಸಿತು.