Rahul Gandhi, Allahabad High Court (Lucknow)  facebook
ಸುದ್ದಿಗಳು

ಭಾರತೀಯ ಸೇನೆಯ ವಿರುದ್ಧ ಹೇಳಿಕೆ: ರಾಹುಲ್‌ಗೆ ಜಾರಿ ಮಾಡಿರುವ ಸಮನ್ಸ್‌ಗೆ ತಡೆ ನೀಡಲು ಅಲಾಹಾಬಾದ್‌ ಹೈಕೋರ್ಟ್‌ ನಕಾರ

ಮಾನಹಾನಿ ಪ್ರಕರಣದಲ್ಲಿ ಮಾರ್ಚ್‌ 24ರಂದು ವಿಚಾರಣೆಗೆ ಹಾಜರಾಗುವಂತೆ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಅಲೋಕ್‌ ವರ್ಮಾ ಅವರು ರಾಹುಲ್‌ ಗಾಂಧಿಗೆ ನಿರ್ದೇಶಿಸಿದ್ದರು.

Bar & Bench

ಭಾರತ್‌ ಜೋಡೊ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ವಿರುದ್ಧ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಮಾನಹಾನಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದ್ದ ಲಖನೌ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ಅಲಾಹಾಬಾದ್‌ ಹೈಕೋರ್ಟ್‌ ವಜಾಗೊಳಿಸಿದೆ.

ಅರ್ಹತೆಯ ಆಧಾರದ ಮೇಲೆ ನ್ಯಾಯಮೂರ್ತಿ ಸುಭಾಷ್‌ ವಿದ್ಯಾರ್ಥಿ ಅವರು ಅರ್ಜಿ ವಜಾಗೊಳಿಸಿದರು.

ಮಾನಹಾನಿ ಪ್ರಕರಣದಲ್ಲಿ ಮಾರ್ಚ್‌ 24ರಂದು ವಿಚಾರಣೆಗೆ ಹಾಜರಾಗುವಂತೆ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಅಲೋಕ್‌ ವರ್ಮಾ ಅವರು ರಾಹುಲ್‌ ಗಾಂಧಿಗೆ ನಿರ್ದೇಶಿಸಿದ್ದರು.

ಸೇನೆಯ ಕರ್ನಲ್‌ ಹುದ್ದೆಗೆ ಸಮನಾದ ಗಡಿ ರಸ್ತೆಗಳ ಸಂಸ್ಥೆಯ ನಿರ್ದೇಶಕರ ಹುದ್ದೆಯಲ್ಲಿದ್ದ ಉದಯ್‌ ಶಂಕರ್‌ ಶ್ರೀವಾಸ್ತವ ಪರವಾಗಿ ವಕೀಲ ವಿವೇಕ್‌ ತಿವಾರಿ ದೂರು ದಾಖಲಿಸಿದ್ದಾರೆ. ಪ್ರಸ್ತುತ ಉದಯ್‌ ಅವರು ನಿವೃತ್ತರಾಗಿದ್ದಾರೆ. 2022ರ ಡಿಸೆಂಬರ್‌ 9ರಂದು ಭಾರತೀಯ ಮತ್ತು ಚೀನಾ ಸೇನೆಗಳ ನಡುವಿನ ಘರ್ಷಣೆ ಸಂಬಂಧ 2022ರ ಡಿಸೆಂಬರ್‌ 16ರಂದು ರಾಹುಲ್‌ ಗಾಂಧಿ ಅವರು ಭಾರತೀಯ ಸೇನಾ ಪಡೆಯ ಕುರಿತು ಆಕ್ಷೇಪಾರ್ಹ ಮತ್ತು ಮಾನಹಾನಿ ಹೇಳಿಕೆ ನೀಡಿದ್ದರು ಎಂದು ವಕೀಲ ತಿವಾರಿ ಆರೋಪಿಸಿದ್ದಾರೆ.

“ಅರುಣಾಚಲ ಪ್ರದೇಶದಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ” ಎನ್ನುವ ಮೂಲಕ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾ ಕಾರ್ಯಾಚರಣೆಯ ಕುರಿತು ಕೇಂದ್ರ ಸರ್ಕಾರವು ಕಠಿಣ ನಿಲುವು ತಳೆಯುತ್ತಿಲ್ಲ ಎಂದು ರಾಹಲ್ ಗಾಂಧಿ ಟೀಕಿಸಿದ್ದರು.

ಭಾರತದ ವಿವಿಧ ನ್ಯಾಯಾಲಯಗಳಲ್ಲಿ ರಾಹುಲ್‌ ಗಾಂಧಿ ವಿರುದ್ಧ ಅವರ ರಾಜಕೀಯ ವಿರೋಧಿಗಳು ಅನೇಕ ಮಾನಹಾನಿ ಪ್ರಕರಣಗಳನ್ನು ಹೂಡಿದ್ದಾರೆ. ಅಮಿತ್‌ ಶಾ ಅವರನ್ನು ಕೊಲೆಗಾರ ಎಂದಿದ್ದಾರೆ ಎಂದು ಆರೋಪಿಸಿದ್ದ ಪ್ರಕರಣ, ಹಿಂದುತ್ವವಾದಿ ಮುಖಂಡ ಸಾವರ್ಕರ್‌ ಅವರನ್ನು ಬ್ರಿಟಿಷರ ಸಹಯೋಗಿ ಎಂದು ಹೇಳಿದ್ದಾರೆ ಎನ್ನಲಾದ ಪ್ರಕರಣಗಳನ್ನು ಇಲ್ಲಿ ನೆನೆಯಬಹುದು.