Anil Deshmukh, Bombay High Court
Anil Deshmukh, Bombay High Court 
ಸುದ್ದಿಗಳು

ವಾಜೆ ಹೇಳಿಕೆ ನಂಬಲರ್ಹವಲ್ಲ, ಅನಿಲ್‌ ದೇಶಮುಖ್‌ ಶಿಕ್ಷೆಗೆ ಒಳಪಡದೆ ಇರಬಹುದು: ಬಾಂಬೆ ಹೈಕೋರ್ಟ್

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರಿಗೆ ಜಾಮೀನು ನೀಡುವ ವೇಳೆ ಬಾಂಬೆ ಹೈಕೋರ್ಟ್, ಈ ಪ್ರಕರಣದಲ್ಲಿ ದೇಶ್‌ಮುಖ್‌ಗೆ ಶಿಕ್ಷೆಯಾಗದಿರುವ ಸಾಧ್ಯತೆಯಿದೆ ಎಂದು ತನ್ನ ಮುಂದಿಡಲಾದ ಸಾಕ್ಷ್ಯ ಗಮನಿಸಿ ಹೇಳಿದೆ.

ಪ್ರಕರಣದ ಸಹ ಆರೋಪಿ ವಜಾಗೊಂಡಿರುವ ಮುಂಬೈ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಹೇಳಿಕೆಯನ್ನು ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯ (ಇ ಡಿ) ಮುಖ್ಯವಾಗಿ ಅವಲಂಬಿಸಿದೆ ಎಂದು ನ್ಯಾಯಮೂರ್ತಿ ಎನ್‌ ಜೆ ಜಮಾದಾರ್ ಹೇಳಿದರು.

ಬಾರ್‌ ಮಾಲೀಕರಿಂದ ₹ 1.71 ಕೋಟಿ ಮೊತ್ತ ಸುಲಿಗೆ ಮಾಡಿ ದೇಶಮುಖ್ ಅವರ ಆಪ್ತ ಸಹಾಯಕ ಕುಂದನ್ ಶಿಂಧೆ ಅವರಿಗೆ ಹಸ್ತಾಂತರಿಸಲಾಗಿತ್ತು ಎಂಬ ವಾಜೆ ಅವರ ಹೇಳಿಕೆಗೆ ಖಚಿತತೆ ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ತೀರ್ಪಿನ ಪ್ರಮುಖಾಂಶಗಳು

  • ವಾಜೆ ಅವರ ಹೇಳಿಕೆಗಳಲ್ಲಿ ಹಣದ ಮೂಲ, ಸಮಯ ಹಾಗೂ ಸ್ಥಳದ ಬಗ್ಗೆ ಖಚಿತತೆ ಇಲ್ಲ. ಅವು ಮೇಲ್ನೋಟಕ್ಕೆ ವದಂತಿಯನ್ನು ಆಧರಿಸಿರುವಂತೆ ತೋರುತ್ತಿದೆ.

  • ದೇಶಮುಖ್‌ ಯಾವ ನಿಖರ ಕ್ರಿಮಿನಲ್‌ ಕೃತ್ಯ ಎಸಗಿದ್ದಾರೆ ಅದು ಹೇಗೆ ಅಪರಾಧಕ್ಕೆ ಕುಮ್ಮಕ್ಕು ನೀಡಿತು ಎಂಬುದನ್ನು ತಿಳಿಸಲು ಇ ಡಿ ಸಂಗ್ರಹಿಸಿರುವ ಸಾಕ್ಷ್ಯ ವಿಫಲವಾಗಿದೆ.

  • ವಿಸ್ತೃತ ಅಪರಾಧವೊಂದರ ಭಾಗವಾಗಿರುವ ಈ ಕೃತ್ಯದಿಂದಲೇ ಅಪರಾಧದ ಗಳಿಕೆಯನ್ನು ಪಡೆಯಲಾಗಿದೆ ಎನ್ನುವ ಆರೋಪವನ್ನು ವಾಜೆ ಹೇಳಿಕೆ ನಿರೂಪಿಸಲಾಗದು.

  • ಪೋಲೀಸ್ ಅಧಿಕಾರಿಯಾಗಿ ವಾಜೆ ಅವರ ಅಧಿಕಾರಾವಧಿ  ವಿವಾದಾಸ್ಪದವಾಗಿದೆ.

  • ಅಲ್ಲದೆ ಮಾಜಿ ಐಪಿಎಸ್‌ ಅಧಿಕಾರಿ ಪರಮ್ ಬೀರ್ ಸಿಂಗ್ ಅವರ ಹೇಳಿಕೆಗಳೊಂದಿಗೆ ವಾಜೆ ಅವರು ನೀಡಿದ ಹೇಳಿಕೆಗಳು ಹಣ ಕೈ ಬದಲಾದದ್ದನ್ನು ತಿಳಿದ ನಂತರ ನೀಡಿದ ಹೇಳಿಕೆಗಳಾಗಿವೆ.

  • ರಂಜಿತ್‌ಸಿಂಗ್ ಶರ್ಮಾ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಅವಲಂಬಿಸಿದಾಗ ಅದು ದೇಶಮುಖ್‌ ಅಂತಿಮವಾಗಿ ಅಪರಾಧಿಯಲ್ಲ ಎಂದು ಪರಿಗಣಿಸುವಂತೆ ನ್ಯಾಯಾಲಯದ ಮನವೊಲಿಸಬಹುದು.

  • ದೇಶಮುಖ್‌ ಅವರ ವಿರುದ್ಧ ಸಿಬಿಐ ದಾಖಲಿಸಿದ್ದ ಭ್ರಷ್ಟಾಚಾರ ಪ್ರಕರಣದಲ್ಲಿ ವಾಜೆ ಅಪ್ರೂವರ್‌ ಆಗಿದ್ದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಪ್ರೂವರ್‌ ಆಗಲು ಜಾರಿ ನಿರ್ದೇಶನಾಲಯ ಎನ್‌ಒಸಿ ನೀಡಿದೆ.

  • ಇಲ್ಲಿಯವರೆಗೆ ವಾಜೆ ಅವರು ಸಹ ಆರೋಪಿ ಸ್ಥಾನದಲ್ಲಿದ್ದರು. ಪ್ರಾಸಿಕ್ಯೂಷನ್‌ ಆಧರಿಸಿರುವ ವಾಜೆ ಅವರ ಹೇಳಿಕೆಗಳು ಸಹ ಆರೋಪಿಯೊಬ್ಬರು ನೀಡಿದ ಹೇಳಿಕೆಗಳಾಗಿವೆ. ಈ ಹಂತದಲ್ಲಿ ಕೂಡ ಸಹ ಆರೋಪಿಯೊಬ್ಬರ ಹೇಳಿಕೆಗಳನ್ನು ಇನ್ನೊಬ್ಬರ ವಿರುದ್ಧ ಎಷ್ಟರ ಮಟ್ಟಿಗೆ ಬಳಸಬಹುದು ಎಂಬುದನ್ನು ಎಚ್ಚರಿಕೆಯಿಂದ ಪರಿಗಣಿಸಬೇಕಾಗುತ್ತದೆ.

  • ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮತ್ತು ನಿಯುಕ್ತಿಗೆ ಸಂಬಂಧಿಸಿದಂತೆ ಅನುಚಿತ ಪ್ರಭಾವ ಬೀರುವುದಕ್ಕಾಗಿ ಅಪರಾಧಕ್ಕೆ ಕುಮ್ಮಕ್ಕು ನೀಡಲಾಗಿದೆ ಎಂಬ ಕುರಿತು ಯಾವುದೇ ಸ್ಪಷ್ಟ ಆರೋಪವಿಲ್ಲ.

  • ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡಲು ಪಿಎಂಎಲ್‌ಎ ಕಾಯಿದೆಯ ಸೆಕ್ಷನ್ 45 ನ್ಯಾಯಾಲಯಕ್ಕೆ ವಿವೇಚನಾಧಿಕಾರ ಒದಗಿಸಿರುವುದರಿಂದ ದೇಶಮುಖ್‌ ಜಾಮೀನಿಗೆ ಅರ್ಹರು.

ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ:

Anil_Vasantrao_Deshmukh_v__State_of_Maharashtra_through_ED.pdf
Preview