Justice S R Krishna Kumar and Karnataka HC (Dharwad bench)
Justice S R Krishna Kumar and Karnataka HC (Dharwad bench) 
ಸುದ್ದಿಗಳು

ವಿಕಲ ಚೇತನರ ವಿರುದ್ಧದ ಅಪರಾಧಗಳಿಗೆ ಅಂಗವಿಕಲ ವ್ಯಕ್ತಿಗಳ ಹಕ್ಕು ಕಾಯಿದೆ ಸೆಕ್ಷನ್‌ 92 ಅನ್ವಯ: ಹೈಕೋರ್ಟ್‌

Bar & Bench

ವಿಶೇಷ ಚೇತನರ ವಿರುದ್ಧ ಎಸಗಿರುವ ಅಪರಾಧಗಳಿಗೆ ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕು ಕಾಯಿದೆ ಸೆಕ್ಷನ್‌ 92 ಅನ್ವಯಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಹೇಳಿದ್ದು, ಧಾರವಾಡದ ಬಸವಾನಂದ ಸ್ವಾಮಿಗಳು ನೀಡಿದ ದೂರನ್ನು ಆಧರಿಸಿ, ಎಫ್‌ಐಆರ್‌ ದಾಖಲಿಸಿ ಮುಂದುವರಿಯುವಂತೆ ಸೈಬರ್‌ (ಸೆನ್‌) ಪೊಲೀಸರಿಗೆ ಆದೇಶಿಸಿದೆ.

2022ರ ಸೆಪ್ಟೆಂಬರ್‌ 15ರಂದು ದೂರುದಾರು ನೀಡಿದ್ದನ್ನು ತಿರಸ್ಕರಿಸಿ 2022ರ ಅಕ್ಟೋಬರ್‌ 19ರಂದು ಧಾರವಾಡದ ಸೈಬರ್‌ ಪೊಲೀಸರು ನೀಡಿದ್ದ ಹಿಂಬರಹ ವಜಾ ಮಾಡುವಂತೆ ಕೋರಿ ಧಾರವಾಡದ ಬಸವಾನಂದ ಸ್ವಾಮಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

2022ರ ಸೆಪ್ಟೆಂಬರ್‌ 15ರ ದಾಖಲೆಯ ಪ್ರಕಾರ ಅರ್ಜಿದಾರರ ವಿರುದ್ಧ ಇತರೆ ಅಪರಾಧಗಳನ್ನು ಎಸೆಗಿರುವುದರ ಜೊತೆಗೆ ವಿಕಲ ಚೇತನರಾದ ಅವರ ವಿರುದ್ಧ ಎಸಗಿರುವ ಅಪರಾಧಗಳಿಗೆ ಅಂಗವಿಕಲ ವ್ಯಕ್ತಿಗಳ ಕಾಯಿದೆ ಸೆಕ್ಷನ್‌ 92 ಅನ್ವಯಿಸುತ್ತದೆ. ಹೀಗಾಗಿ, ಧಾರವಾಡ ಪೊಲೀಸ್‌ ವರಿಷ್ಠಾಧಿಕಾರಿ ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

2022ರ ಅಕ್ಟೋಬರ್‌ 10ರಂದು ಪೊಲೀಸರು ನೀಡಿರುವ ಹಿಂಬರಹದಲ್ಲಿ ಅರ್ಜಿದಾರರು ಮಾನಹಾನಿ ದಾವೆ ಹೂಡಬಹುದು ಎಂದು ಹೇಳಿ, ಅರ್ಜಿ ವಜಾ ಮಾಡಲಾಗಿದೆ. ಆದರೆ, ದೂರಿನಲ್ಲಿ ಉಲ್ಲೇಖಿಸಿರುವ ವಿಚಾರಗಳಿಗೆ ಇದು ವಿರುದ್ಧವಾಗಿದ್ದು, ಅವುಗಳು ಸಂಜ್ಞೇ ಅಪರಾಧಗಳಿವೆ. ಹೀಗಾಗಿ, ಹಿಂಬರಹವು ಬದಿಗೆ ಸರಿಸಲು ಅರ್ಹವಾಗಿದ್ದು, ಪೊಲೀಸರಿಗೆ ಅಗತ್ಯ ನಿರ್ದೇಶನ ನೀಡಬೇಕಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.