Arvind Kejriwal, ED and Delhi High Court 
ಸುದ್ದಿಗಳು

ಮುಂದಾಲೋಚನೆಯಿಂದ ತನ್ನನ್ನು ಬಂಧಿಸಲಾಗಿದೆ ಎಂದ ಕೇಜ್ರಿವಾಲ್: ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

Bar & Bench

ದೆಹಲಿ ಅಬಕಾರಿ ನೀತಿ ಸಿದ್ಧಪಡಿಸುವಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ದೆಹಲಿ ಹೈಕೋರ್ಟ್ ಕಾಯ್ದಿರಿಸಿದೆ.

ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಕೇಜ್ರಿವಾಲ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ತೀರ್ಪನ್ನು ಬುಧವಾರ ಕಾಯ್ದಿರಿಸಿದರು.

ಜುಲೈ 29ರಂದು ಕೇಜ್ರಿವಾಲ್ ಸಲ್ಲಿಸಿರುವ ಮುಖ್ಯ ಜಾಮೀನು ಅರ್ಜಿಗೆ ಸಂಬಂಧಿಸಿದ ವಾದವನ್ನು ನ್ಯಾಯಾಲಯ ಆಲಿಸಲಿದೆ.

ತಮ್ಮದು ವಿಮಾ ಬಂಧನ (ಮುಂದಾಲೋಚನೆಯಿಂದ ನಡೆದಿರುವ ಬಂಧನ) ಎಂದು ಕೇಜ್ರಿವಾಲ್‌ ಇಂದಿನ ವಿಚಾರಣೆ ವೇಳೆ ಬಣ್ಣಿಸಿದರು. ಇದೇ ಅಬಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇ ಡಿ ಹೂಡಿರುವ ಪ್ರಕರಣದಲ್ಲಿ ತನಗೆ ಜಾಮೀನು ದೊರೆಯಬಹುದು ಎಂಬ ಭೀತಿಯಿಂದ ತನ್ನನ್ನು ಜೈಲಿನಲ್ಲೇ ಇರಿಸಲು ಸಿಬಿಐ ಬಂಧಿಸಿದೆ ಎಂದು ಅವರು ವಾದಿಸಿದರು.

"ಪ್ರಕರಣದ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ದುರದೃಷ್ಟವಶಾತ್ ಇದೊಂದು ವಿಮಾ ಬಂಧನ. ಸ್ಪಷ್ಟವಾಗಿ, ಸಿಬಿಐಗೆ ಬಂಧಿಸುವ ಉದ್ದೇಶ ಅಥವಾ ಅದಕ್ಕೆ ಪೂರಕವಾದ ಆಧಾರ ಇರಲಿಲ್ಲ. ಆದರೆ  ಬೇರೆ (ಇ ಡಿ) ಪ್ರಕರಣದಲ್ಲಿ ಅವರು ಹೊರಬರಬಹುದು ಎಂದು ಸಿಬಿಐ ಭಾವಿಸಿದೆ. ಹೀಗಾಗಿ ಅವರನ್ನು ಬಂಧಿಸಲಾಗಿದೆ” ಎಂದು ಕೇಜ್ರಿವಾಲ್ ಪರ ವಾದಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದರು.

ಇ ಡಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರು ತಮ್ಮ ಪರವಾಗಿ ನ್ಯಾಯಾಲಯದಿಂದ ಮೂರು ಮಧ್ಯಂತರ ಆದೇಶಗಳನ್ನು ಪಡೆದಿದ್ದಾರೆ ಎಂದು ಸಿಂಘ್ವಿ ಪ್ರಸ್ತಾಪಿಸಿದರು. ಚುನಾವಣೆ ವೇಳೆ ಪ್ರಚಾರ ಮಾಡಲು ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು, ಎರಡನೆಯದು ಬೇಷರತ್‌ ಪರಿಹಾರ ಒದಗಿಸಿರುವ ಈಚಿನ ಮಧ್ಯಂತರ ಜಾಮೀನು ಹಾಗೂ ವಿಚಾರಣಾ ನ್ಯಾಯಾಲಯದ ಆದೇಶವೊಂದಕ್ಕೆ ಹೈಕೋರ್ಟ್‌ ತಡೆ ನೀಡಿರುವುದು ಸೇರಿ ಮೂರು ಮಧ್ಯಂತರ ಆದೇಶಗಳನ್ನು ಅವರು ವಿವರಿಸಿದರು.

ಈ ಆದೇಶಗಳು ವ್ಯಕ್ತಿ ಬಿಡುಗಡೆಗೆ ಅರ್ಹ ಎಂಬುದನ್ನು ಆತನನ್ನು ಬಿಡುಗಡೆ ಮಾಡಬಹುದಿತ್ತು ಎಂಬುದನ್ನು ಹೇಳಿದರೂ 'ವಿಮಾ ಬಂಧನದ' ಕಾರಣಕ್ಕೆ ಅವರ ಬಿಡುಗಡೆಯಾಗಲಿಲ್ಲ ಎಂದರು.