ಸುದ್ದಿಗಳು

[ಆರ್ಯನ್ ಖಾನ್ ಮಾದಕವಸ್ತು ಪ್ರಕರಣ] ಇದೇ ಮೊದಲ ಬಾರಿಗೆ ವಿದೇಶಿ ಪ್ರಜೆಗೆ ಜಾಮೀನು ನೀಡಿದ ಮುಂಬೈ ನ್ಯಾಯಾಲಯ

Bar & Bench

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಮುಖ ಆರೋಪಿಯಾಗಿರುವ ವಿಲಾಸಿ ಹಡಗು ಮಾದಕವಸ್ತು ಪ್ರಕರಣದ ಮೊದಲ ವಿದೇಶಿ ಪ್ರಜೆಗೆ ಮುಂಬೈ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ.

ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿವಿ ಪಾಟೀಲ್ ಅವರು ನೈಜೀರಿಯಾದ ಪ್ರಜೆ ಒಕಾರೊ ಉಜಿಯೋಮಾ ಅವರು ಸಲ್ಲಿಸಿದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದರು. ಉಜಿಯೊಮಾ ಬಳಿ 14 ಗ್ರಾಂ ಕೊಕೇನ್‌ ಲಭಿಸಿತ್ತು. ಇದು ಎನ್‌ಡಿಪಿಎಸ್‌ ಕಾಯಿದೆ ಅಡಿ ಮಧ್ಯಮ ಪ್ರಮಾಣದ ಮಾದಕವಸ್ತುವಾಗಿದೆ

ವಕೀಲರಾದ ಶಲಾಕಾ ಹತೋಡೆ ಮತ್ತು ಗೋರಖ್ ಲಿಮಾನ್ ಅವರು ಉಜಿಯೋಮಾ ಅವರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಿದ್ದಾರೆ. ಆತನಿಂದ ಉಜಿಯೋಮಾನಿಂದ ವಶಪಡಿಸಿಕೊಂಡ ಕೊಕೇನ್ ಕೇವಲ 14 ಗ್ರಾಂ ಆಗಿದ್ದು ಅದು 'ವಾಣಿಜ್ಯೇತರ' ಪ್ರಮಾಣದ್ದಾಗಿದೆ. ಇದೇ ರೀತಿಯ ಆರೋಪ ಹೊತ್ತ ಪ್ರಕರಣದ ಇತರರಿಗೆ ಈಗಾಗಲೇ ಜಾಮೀನು ನೀಡಲಾಗಿದೆ ಎಂದು ವಕೀಲರಾದ ಶಲಾಕಾ ಹತೋಡೆ ಮತ್ತು ಗೋರಖ್ ಲಿಮಾನ್ ಅವರು ವಾದಿಸಿದರು.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಎಮ್ ಚಿಮಾಲ್ಕರ್ ವಿರೋಧ ವ್ಯಕ್ತಪಡಿಸಿದರು. ಆದರೆ ಉಜಿಯೋಮಾ ಪರ ವಕೀಲರು “ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 27 ಎ ಅಡಿ ಆರೋಪ ಮಾಡಿಲ್ಲ ಆದ್ದರಿಂದ ಸೆಕ್ಷನ್ 37ರ ಕಠಿಣತೆ ಇದಕ್ಕೆ ಅನ್ವಯಿಸುವುದಿಲ್ಲ ಎಂದರು. ಅಲ್ಲದೆ ಉಜಿಯೋಮಾ ಮುಂಬೈನ ಉಪನಗರದಲ್ಲಿ ವಾಸಿಸುತ್ತಿದ್ದು ಅವರಿಗೆ ಕಠಿಣ ಜಾಮೀನು ಷರತ್ತುಗಳನ್ನು ವಿಧಿಸಬಹುದು ಎಂದರು. ಎರಡೂ ಕಡೆಯವರ ಅಹವಾಲು ಆಲಿಸಿದ ವಿಶೇಷ ನ್ಯಾಯಾಧೀಶರು ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.