ಸುದ್ದಿಗಳು

ಭಿಕ್ಷಾಟನೆ ತಡೆಗೆ ಗಣ್ಯ ನಿಲುವು ತಳೆಯಲಾಗದು ಎಂದ ಸುಪ್ರೀಂಕೋರ್ಟ್‌: ಕೇಂದ್ರ, ದೆಹಲಿ ಸರ್ಕಾರಕ್ಕೆ ನೋಟಿಸ್

Bar & Bench

ಬೀದಿಗಳಲ್ಲಿ ಭಿಕ್ಷಾಟನೆ ನಡೆಸಲು ಜನ ಮುಂದಾಗುವುದು ಸಾಮಾಜಿಕ - ಆರ್ಥಿಕ ಸಮಸ್ಯೆಯಾಗಿದ್ದು ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಭಿಕ್ಷುಕರು ಭಿಕ್ಷೆ ಬೇಡುವುದನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನ ನೀಡುವುದಿಲ್ಲ ಸುಪ್ರೀಂಕೋರ್ಟ್‌ ತಿಳಿಸಿದೆ.

ಈ ನಿಟ್ಟಿನಲ್ಲಿ ತಾನು ಗಣ್ಯ (elitist) ಧೋರಣೆ ತಳೆಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎಂ ಆರ್‌ ಶಾ ಅವರಿದ್ದ ಪೀಠ ಸ್ಪಷ್ಟಪಡಿಸಿತು.

“ಅವರನ್ನು ಭಿಕ್ಷಾಟನೆಯಿಂದ ತಡೆಯುವ ಮನವಿಯನ್ನು ಪುರಸ್ಕರಿಸಲಾಗದು. ಇದು ಸಾಮಾಜಿಕ - ಆರ್ಥಿಕ ಸಮಸ್ಯೆ. ಸುಪ್ರೀಂಕೋರ್ಟ್‌ ಆಗಿ ತಾನು ಗಣ್ಯ ನಿಲುವು ತಳೆಯಲಾಗದು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು. ಭಿಕ್ಷುಕರನ್ನು ಭಿಕ್ಷಾಟನೆಯಿಂದ ತಡೆಯುವ ಮನವಿಗೆ ಕಟ್ಟುಬೀಳಬೇಡಿ ಎಂದು ನ್ಯಾಯಮೂರ್ತಿ ಶಾ ವಿವರಿಸಿದರು.

ಭಿಕ್ಷುಕರ ಪುನರ್‌ ವಸತಿಗಾಗಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ಆಲಿಸುತ್ತಿತ್ತು. ಅದರಲ್ಲಿ ಒಂದು ಅರ್ಜಿ ಕೋವಿಡ್ ಸೋಂಕು ಹರಡುವುದನ್ನು ತಪ್ಪಿಸಲು ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆ ತಪ್ಪಿಸಬೇಕು ಎಂದು ಮನವಿ ಮಾಡಿತ್ತು.

ಭಿಕ್ಷಾಟನೆ ತಡೆಯುವಂತೆ ಒತ್ತಾಯಿಸುತ್ತಿಲ್ಲ ಎಂದ ಅರ್ಜಿದಾರರು ಅವರಿಗೆ ಪುನರ್ವಸತಿ ಮತ್ತು ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸುವುದನ್ನು ಖಾತ್ರಿಪಡಿಸಿಕೊಳ್ಳುವುದು ಮನವಿಯ ಉದ್ದೇಶ ಎಂದು ಹೇಳಿದರು. ಇದನ್ನು ತನ್ನ ಆದೇಶದಲ್ಲಿ ದಾಖಲಿಸಿಕೊಂಡ ನ್ಯಾಯಾಲಯ ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ನೋಟಿಸ್‌ ನೀಡಿತು.