<div class="paragraphs"><p>Supreme Court, KK Venugopal and Yati Narsinghanand</p></div>

Supreme Court, KK Venugopal and Yati Narsinghanand

 
ಸುದ್ದಿಗಳು

[ದ್ವೇಷ ಭಾಷಣ] ಯತಿ ನರಸಿಂಗಾನಂದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಎಜಿ ವೇಣುಗೋಪಾಲ್‌ ಅನುಮತಿ

Bar & Bench

ಇತ್ತೀಚೆಗೆ ಸುಪ್ರೀಂ ಕೋರ್ಟ್‌ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಯತಿ ನರಸಿಂಗಾನಂದ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಸಾಮಾಜಿಕ ಕಾರ್ಯಕರ್ತೆ ಶಾಚಿ ನೆಲ್ಲಿ ಅವರಿಗೆ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಶುಕ್ರವಾರ ಅನುಮತಿ ನೀಡಿದ್ದಾರೆ.

“ಈ ವ್ಯವಸ್ಥೆಯಲ್ಲಿ, ಈ ರಾಜಕಾರಣಿಗಳು, ಸುಪ್ರೀಂ ಕೋರ್ಟ್‌ ಮತ್ತು ಸೈನ್ಯದಲ್ಲಿ ವಿಶ್ವಾಸವಿರಿಸುವ ಎಲ್ಲರೂ ನಾಯಿಗಳ ರೀತಿಯಲ್ಲಿ ಸಾವನ್ನಪ್ಪಲಿದ್ದಾರೆ” ಎಂಬ ನರಸಿಂಗಾನಂದ ಅವರ ಹೇಳಿಕೆಯು ಜನರ ದೃಷ್ಟಿಯಲ್ಲಿ ನ್ಯಾಯಾಲಯದ ಘನತೆಯನ್ನು ಕುಂದಿಸುವ ನಿಟ್ಟಿನಲ್ಲಿ ನೇರ ದಾಳಿಯಾಗಿದೆ ಎಂದು ಅಟಾರ್ನಿ ಜನರಲ್‌ ಹೇಳಿದ್ದಾರೆ.

ಖಾಸಗಿ ವ್ಯಕ್ತಿ ಸಲ್ಲಿಸಿದ್ದ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಲು ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್‌ 15ರ ಅನ್ವಯ ಅಟಾರ್ನಿ ಜನರಲ್‌ ಅವರ ಅನುಮತಿ ಪಡೆಯುವುದು ಅಗತ್ಯವಾಗಿದೆ. ಹೀಗಾಗಿ, ನೆಲ್ಲಿ ಅವರು ಅಟಾರ್ನಿ ಅನುಮತಿ ಕೋರಿ ಪತ್ರ ಬರೆದಿದ್ದರು.

ನಮಗೆ ಸುಪ್ರೀಂ ಕೋರ್ಟ್‌ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಈ ದೇಶದ 100 ಕೋಟಿ ಹಿಂದೂಗಳನ್ನು ಸಂವಿಧಾನವು ಆಪೋಶನ ತೆಗೆದುಕೊಳ್ಳುತ್ತದೆ. ಸಂವಿಧಾನದ ಮೇಲೆ ನಂಬಿಕೆ ಇಡುವವರನ್ನು ಕೊಲೆ ಮಾಡಲಾಗುತ್ತದೆ. ಈ ವ್ಯವಸ್ಥೆಯಲ್ಲಿ, ಈ ರಾಜಕಾರಣಿಗಳು, ಸುಪ್ರೀಂ ಕೋರ್ಟ್‌ ಮತ್ತು ಸೈನ್ಯದಲ್ಲಿ ವಿಶ್ವಾಸವಿರಿಸುವ ಎಲ್ಲರೂ ನಾಯಿಗಳ ರೀತಿಯಲ್ಲಿ ಸಾವನ್ನಪ್ಪಲಿದ್ದಾರೆ” ಎಂಬ ನರಸಿಂಗಾನಂದ ಅವರು ಸಂದರ್ಶನದಲ್ಲಿ ಹೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಹೀಗಾಗಿ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿಸಬೇಕು ಎಂದು ನೆಲ್ಲಿ ಕೋರಿದ್ದರು.

ಹರಿದ್ವಾರದ ಧರ್ಮ ಸಂಸದ್‌ನಲ್ಲಿ ಮಾಡಿದ್ದ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಪ್ರಕ್ರಿಯೆ ಆರಂಭಿಸಿದ್ದರ ಕುರಿತಾದ ಪ್ರಶ್ನೆಗೆ ನರಸಿಂಗಾನಂದ ಮೇಲಿಂತೆ ಹೇಳಿದ್ದರು.