“ಪ್ರಯಾಣಿಕರನ್ನು ಸಾಗಿಸಲು ಅಥವಾ ಬಾಡಿಗೆಗೆ ಅದರ ಬಳಕೆ ಮಾಡಬಹುದು ಎಂದು ಶಾಸನದಲ್ಲಿ ವ್ಯಾಖ್ಯಾನಿಸದೇ ಇರುವುದರಿಂದ ಮೋಟಾರು ಸೈಕಲ್ಗಳು ಸಾರಿಗೆ ವಾಹನಗಳಾಗುವುದಿಲ್ಲ” ಎಂದು ರಾಜ್ಯ ಸರ್ಕಾರವು ಶುಕ್ರವಾರ ಕರ್ನಾಟಕ ಹೈಕೋರ್ಟ್ನಲ್ಲಿ ಪ್ರಬಲವಾಗಿ ವಾದಿಸಿತು.
ಮೋಟಾರು ವಾಹನಗಳ ಕಾಯಿದೆ 1988ರ ಅನ್ವಯ ಮಾರ್ಗಸೂಚಿ ರೂಪಿಸುವವರೆಗೆ ಬೈಕ್ ಟ್ಯಾಕ್ಸಿ ಮುಂದುವರಿಸುವಂತಿಲ್ಲ ಎಂದು ಏಕಸದಸ್ಯ ಪೀಠ ಮಾಡಿರುವ ಆದೇಶವನ್ನು ಪ್ರಶ್ನಿಸಿ ಉಬರ್ ಇಂಡಿಯಾ, ರ್ಯಾಪಿಡೊ, ಓಲಾ, ಉಬರ್ ಸೇರಿದಂತೆ ಹಲವು ಅಗ್ರಿಗೇಟರ್ ಸಂಸ್ಥೆಗಳು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಮೋಟಾರು ಸೈಕಲ್ ವ್ಯಾಖ್ಯಾನದಲ್ಲಿ ಅದು ಪ್ರಯಾಣಿಕರನ್ನು ಸಾಗಿಸಲು ಇರುವ ವಾಹನ ಎಂದು ಹೇಳಿಲ್ಲ. ಮೋಟಾರು ವಾಹನಗಳ ಕಾಯಿದೆ ಅಥವಾ ನಿಯಮಗಳಲ್ಲೂ ಪ್ರಯಾಣಿಕರನ್ನು ಮೋಟಾರ್ ಸೈಕಲ್ ಒಯ್ಯಬಹುದು ಎಂದು ಹೇಳಿಲ್ಲ. ಮೋಟಾರ್ ಸೈಕಲ್, ಮೋಟಾರ್ ಕ್ಯಾಬ್ ವ್ಯಾಖ್ಯಾನದ ಅಡಿ ಬರುವುದಿಲ್ಲ” ಎಂದರು.
ಆಗ ಪೀಠವು “ಮೋಟಾರ್ ಸೈಕಲ್ ಅನ್ನು ಸಾರಿಗೆಗೆ ಬಳಕೆ ಮಾಡಬಾರದು ಎಂದು ಹೇಳುವುದಾದರೆ ಸರ್ಕಾರ ಹೇಗೆ ಎಲೆಕ್ಟ್ರಿಕ್ ವಾಹನ ನೀತಿ ರೂಪಿಸಿತ್ತು” ಎಂದು ಪ್ರಶ್ನಿಸಿತು. ಇದಕ್ಕೆ ಎಜಿ “ಅದನ್ನು ಹಿಂಪಡೆಯಲಾಗಿದೆ. ನಾವು ನಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದೇವೆ ಎಂದಷ್ಟೇ ಹೇಳಬಯಸುತ್ತೇನೆ. ಇವಿ ಮೋಟಾರ್ ಸೈಕಲ್ಗಳಿಗೆ ವಿಶೇಷ ವಿನಾಯಿತಿ ನೀಡಲಾಗಿತ್ತು. ಯಾವುದೇ ಮೋಟಾರ್ ಸೈಕಲ್ ಅನ್ನು ಸಾರಿಗೆ ವಾಹನ ಎಂದು ಪರಿಗಣಿಸಬೇಕಾದರೆ ಅನುಮತಿ ಕಡ್ಡಾಯ” ಎಂದು ಸ್ಪಷ್ಟಪಡಿಸಿದರು.
“ಮೋಟಾರ್ ಸೈಕಲ್, ಪ್ರಯಾಣಿಕರನ್ನು ಒತ್ತೊಯ್ಯುವ ವಾಹನವಲ್ಲ, ಇದನ್ನು ಬಾಡಿಗೆ ಅಥವಾ ಹಣ ಸಂಪಾದಿಸಲು ಬಳಕೆ ಮಾಡಲಾಗದು. ಅನುಮತಿ ನೀಡುವುದು ರಾಜ್ಯ ಸರ್ಕಾರದ ವಿಶೇಷ ಅಧಿಕಾರವಾಗಿದೆ. ಮೋಟಾರ್ ಸೈಕಲ್ಗಳನ್ನು ವಾಣಿಜ್ಯ ಸಾರಿಗೆಗೆ ಬಳಕೆ ಮಾಡುವುದು ಮತ್ತು ಆ ಅನುಮತಿಯನ್ನು ನಿಯಂತ್ರಣ ಮಾರ್ಗಸೂಚಿಗಳ ಗೈರಿನಲ್ಲಿ ಊಹಿಸಿಕೊಳ್ಳಲಾಗದು” ಎಂದರು.
ಅಲ್ಲದೇ, “ದೇಶದ 18 ರಾಜ್ಯಗಳಲ್ಲಿ ನಿರ್ದಿಷ್ಟವಾಗಿ ರಾಜ್ಯಗಳು ನಿಯಂತ್ರಣ ಮಾರ್ಗಸೂಚಿ ರೂಪಿಸಿದ ಮೇಲೆ ಬೈಕ್ ಟ್ಯಾಕ್ಸಿಗಳು ಸೇವೆ ನೀಡುತ್ತಿವೆ. ಈ ಸಂಸ್ಥೆಗಳು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿ ವಾದಿಸಲಾಗದು” ಎಂದರು.
ಆಗ ಪೀಠವು “ಮೇಲ್ಮನವಿದಾರರು ಪರವಾನಗಿ ವ್ಯವಸ್ಥೆಗೆ ಆಕ್ಷೇಪಿಸುತ್ತಿಲ್ಲ. ಸಂಪೂರ್ಣ ನಿಷೇಧಕ್ಕೆ ಅವರ ವಿರೋಧವಿದೆ. ಅನುಮತಿ ನೀಡಲು ಮುಂದಾದರೆ ಅವರು ಪರವಾನಗಿ ಪಡೆದುಕೊಳ್ಳುತ್ತಾರೆ” ಎಂದಿತು. ಆಗ ಎಜಿ ಅವರು “ಮೋಟಾರ್ ಸೈಕಲ್ ಸಾರಿಗೆ ವಾಹನವಾಗಿಲ್ಲವಾದ್ದರಿಂದ ನಾವು ಪರವಾನಗಿ ನೀಡುವುದಿಲ್ಲ” ಎಂದರು.
ಇದಕ್ಕೆ ಪೀಠವು “ಪರವಾನಗಿ ನಿರಾಕರಿಸುತ್ತಿರುವುದು ಸುರಕ್ಷತೆ, ಸಂಚಾರ ದಟ್ಟಣೆ ಕಾರಣಕ್ಕಾಗಿಯಲ್ಲ. ಮೋಟಾರ್ ಸೈಕಲ್ ಸಾರಿಗೆ ವಾಹನವಲ್ಲ ಎಂಬುದು ನಿಮ್ಮ ಆಕ್ಷೇಪವೇ” ಎಂದಿತು. ಇದಕ್ಕೆ ಎಜಿ “ಅಂತಿಮವಾಗಿ ಇದು ನಿಷೇಧದ ಪ್ರಕರಣವಲ್ಲ, ಆದರೆ, ನಿಯಂತ್ರಣಕ್ಕೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ವಿಶಾಲವಾದ ಸಾರ್ವಜನಿಕ ಹಿತಾಸಕ್ತಿ ಅಡಗಿದೆ. ಮುಂಬೈನ ಕೆಲವು ಕಡೆ ಆಟೊ ಓಡಾಟವನ್ನೇ ನಿಷೇಧಿಸಲಾಗಿದೆ. ಕೆಲವು ಅಗ್ರಿಗೇಟರ್ಗಳು ನಿಷೇಧದ ನಡುವೆಯೂ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸುವ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಿದ್ದಾರೆ. ಅಗ್ರಿಗೇಟರ್ಗಳು ಪರವಾನಗಿಗೆ ಮನವಿ ಸಲ್ಲಿಸಬಹುದು. ರಾಜ್ಯ ಸರ್ಕಾರವು ತನ್ನದೇ ಮಾರ್ಗಸೂಚಿ ರೂಪಿಸಬಹುದು ಅಥವಾ ಕೇಂದ್ರ ಸರ್ಕಾರದ ನಿಯಮಗಳನ್ನೇ ಪಾಲಿಸಬಹುದು” ಎಂದರು.
ಇದಕ್ಕೆ ಪೀಠವು “ರಾಜ್ಯ ಸರ್ಕಾರ ನಿಯಂತ್ರಣ ಮಾರ್ಗಸೂಚಿ ರೂಪಿಸದೇ ಇರುವುದರಿಂದ ಕೇಂದ್ರದ ಮಾರ್ಗಸೂಚಿಗಳನ್ನೇ ಪಾಲಿಸಬೇಕಾಗುತ್ತದೆ” ಎಂದಿತು. ಅಲ್ಲದೇ, ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗೆ ಅನುಮತಿಸುತ್ತಿಲ್ಲ” ಎಂದಿತು.
ಮೇಲ್ಮನವಿದಾರರ ಪರ ವಕೀಲರೊಬ್ಬರು “ಕಂಪನಿಗಳು ಹಳದಿ ಬೋರ್ಡ್ ನೋಂದಣಿಗೆ ಸಿದ್ಧತೆ ನಡೆಸಿದ್ದು, ಪರವಾನಗಿ ಪಡೆಯಲು ಮುಂದಾಗಿವೆ” ಎಂದರು. ಇದಕ್ಕೆ ಪೀಠವು “ಪರವಾನಗಿಯನ್ನೂ ನೀಡಲ್ಲ. ಮಾರ್ಗಸೂಚಿಯನ್ನೂ ರೂಪಿಸಲ್ಲ, ಸಂಪೂರ್ಣ ನಿಷೇಧ” ಎಂದಿತು. “ಹಲವಾರು ಕಾರಣಗಳನ್ನು ಪರಿಗಣಿಸಿ ಈ ನಿರ್ಧಾರ ಮಾಡಿದೆ” ಎಂದು ಎಜಿ ಸಮರ್ಥಿಸಿದರು.
“ರಾಜ್ಯ ಸರ್ಕಾರದ ಎಲೆಕ್ಟ್ರಿಕ್ ವಾಹನ ನೀತಿಯಡಿ ಇ-ಬೈಕ್ ಟ್ಯಾಕ್ಸಿಗೆ ಅನುಮತಿಸಲಾಗಿತ್ತು. ಅಗ್ರಿಗೇಟರ್ಗಳು ಒಂದೇ ಒಂದು ಇ-ಬೈಕ್ ಓಡಿಸಲಿಲ್ಲ. ಇದಕ್ಕೆ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಲಿಲ್ಲ” ಎಂದು ವಾದ ವಿಸ್ತರಿಸಿದರು.
ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಮಾಲಿನ್ಯ ಒಂದು ಕಾರಣ ಎಂದು ಸರ್ಕಾರ ಹೇಳಿದೆ. ಆದರೆ, ಇ-ಬೈಕ್ಗಳಿಗೂ ಅನುಮತಿ ನೀಡಿಲ್ಲ. ಸುರಕ್ಷತೆ ಕಾರಣಗಳಿಗೆ ಏನಾದರೂ ದಾಖಲೆ ಇದೆಯೇ ಎಂದು ಸರ್ಕಾರವನ್ನು ಪೀಠ ಪ್ರಶ್ನಿಸಿತು. ಇದಕ್ಕೆ ಎಜಿ ಅವರು ಸಮಿತಿಯ ವರದಿಯನ್ನು ಉಲ್ಲೇಖಿಸಿ, ತಮ್ಮ ವಾದ ಪೂರ್ಣಗೊಳಿಸಿದರು. ಅಂತಿಮವಾಗಿ ಪೀಠವು ಪ್ರಕರಣದ ವಿಚಾರಣೆಯನ್ನು ನವೆಂಬರ್ 24 ಕ್ಕೆ ಮುಂದೂಡಿತು.