Bihar Elections
Bihar Elections 
ಸುದ್ದಿಗಳು

ಬಿಹಾರ ಚುನಾವಣೆ: ಖಾಸಗಿ ಸ್ವತ್ತಿನಲ್ಲಿ ಮಾಲೀಕರ ಒಪ್ಪಿಗೆ ಪಡೆದು ಪ್ರಚಾರದ ಹೋರ್ಡಿಂಗ್ ಹಾಕಬಹುದು ಎಂದ ಹೈಕೋರ್ಟ್

Bar & Bench

ಬಿಹಾರ ವಿಧಾನಸಭೆ ಚುನಾವಣೆ ಭರಾಟೆ ವ್ಯಾಪಕವಾಗಿರುವ ನಡುವೆಯೇ ಪ್ರಚಾರದ ಹಿನ್ನೆಲೆಯಲ್ಲಿ ಖಾಸಗಿ ಸ್ವತ್ತಿನ ಮಾಲೀಕರು ಅಥವಾ ಸ್ವತ್ತನ್ನು ವಶಕ್ಕೆ ಪಡೆದಿರುವವರ ಲಿಖಿತ ಅನುಮತಿ ಪಡೆದು ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳನ್ನು ಹಾಕಲು ರಾಜಕೀಯ ಪಕ್ಷಗಳಿಗೆ ಪಾಟ್ನಾ ಹೈಕೋರ್ಟ್‌ ಹಸಿರು ನಿಶಾನೆ ತೋರಿದೆ (ಸೆಂಚುರಿ ಬಿಜಿನೆಸ್‌ ಪ್ರೈವೇಟ್‌ ಲಿಮಿಟೆಡ್‌ ವರ್ಸಸ್‌ ಮುಖ್ಯ ಚುನಾವಣಾಧಿಕಾರಿ ಮತ್ತು ಇತರರು).

ಬಿಹಾರದಾದ್ಯಂತ ವಿವಿಧ ಸ್ವತ್ತುಗಳಲ್ಲಿ 950 ಕಡೆ ಹೋರ್ಡಿಂಗ್‌ ಹಾಕಲು ಬಿಜೆಪಿಯು ಸೆಂಚುರಿ ಬಿಜಿನೆಸ್‌ಗೆ ನಿಯೋಜಿಸಿದ್ದು, ಸಂಸ್ಥೆಯ ಕೋರಿಕೆಯನ್ನು ನ್ಯಾಯಾಲಯ ಪರಿಗಣಿಸಿದೆ.

ನ್ಯಾಯಮೂರ್ತಿ ಅಶುತೋಷ್‌ ಕುಮಾರ್‌ ನೇತೃತ್ವದ ಏಕಸದಸ್ಯ ಪೀಠವು ರಾಜಕೀಯ ಪಕ್ಷದ ಬದಲಿಗೆ ಅಭ್ಯರ್ಥಿಗಳಿಗೆ ಹೋರ್ಡಿಂಗ್‌ಗಳನ್ನು ಹಾಕಲು ಅನುಮತಿಸುವುದರಿಂದ 1987ರ ಕಾಯಿದೆಯನ್ನು ಜಾರಿಗೆ ತರುವ ಶಾಸಕಾಂಗದ ಉದ್ದೇಶ ಪರಿಣಾಮಕಾರಿಯಾಗಿ ಕುಂದುತ್ತದೆ ಎಂದು ಅಭಿಪ್ರಾಯಪಟ್ಟಿತು

ಇದೇ ವೇಳೆ, ಜನಪ್ರತಿನಿಧಿ ಕಾಯಿದೆ ಹಾಗೂ ಪಕ್ಷಗಳ ಗುರುತಿನ ಕುರಿತಾದ ನಿಯಮಗಳ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳೂ ಸಹ ಹೋರ್ಡಿಂಗ್‌ಗಳನ್ನು ಹಾಕಬಹುದು ಎನ್ನುವ ವಾದವನ್ನು ಪೀಠವು ಪುರಸ್ಕರಿಸಿತು . ಈ ವೇಳೆ ಪೀಠವು, “ರಾಜಕೀಯ ಪಕ್ಷವು ನಿರ್ವಾತದಲ್ಲಿ ಅಸ್ತಿತ್ವದಲ್ಲಿಲ್ಲ ಮತ್ತು ಅದು ಅಮೂರ್ತ ಅಸ್ತಿತ್ವವಲ್ಲ. ಅದು ಜನರನ್ನು ಒಳಗೊಂಡಿದೆ” ಎಂದಿತು.

ಹೋರ್ಡಿಂಗ್‌ಗಳನ್ನು ಹಾಕಲು ಹಿಂದೆ ಸೆಂಚುರಿ ಸಂಸ್ಥೆಯು ಮುಖ್ಯ ಚುನಾವಣಾಧಿಕಾರಿಯ ಅನುಮತಿ ಕೋರಿತ್ತು. ಈ ಮನವಿಯನ್ನು ತಿರಸ್ಕರಿಸಿದ್ದ ಚುನಾವಣಾಧಿಕಾರಿಯು 1987ರ ವಿರೂಪಗೊಳಿಸುವಿಕೆ ತಡೆ ಕಾಯಿದೆಯ ಸೆಕ್ಷನ್‌ 3(3) ಅಡಿ ಸ್ವತ್ತಿನ ಮಾಲೀಕರು ಲಿಖಿತ ಒಪ್ಪಿಗೆ ನೀಡಿದರೆ ಮಾತ್ರ ಅಭ್ಯರ್ಥಿಗೆ ಪ್ರಚಾರದ ಹೋರ್ಡಿಂಗ್‌ಗಳು ಮತ್ತು ಪೋಸ್ಟರ್‌ಗಳನ್ನು ಹಾಕಬಹುದು ಎಂದು ವಿವರಣೆ ನೀಡಿದ್ದರು.

ಖಾಸಗಿ ಸ್ವತ್ತಿನಲ್ಲಿ ರಾಜಕೀಯ ಪಕ್ಷಗಳಿಗೆ ಹೋರ್ಡಿಂಗ್‌ ಹಾಕಲು ಅನುಮತಿ ನೀಡಿದರೆ “ಇಡೀ ರಾಜ್ಯವನ್ನು ವಿರೂಪಗೊಳಿಸಬಹುದು. ಇದನ್ನು ಮತ್ತೆ ಸರಿಗೊಳಿಸಲು ಅಪಾರ ಪ್ರಮಾಣದ ಸಾರ್ವಜನಿಕ ಹಣವನ್ನು ಖರ್ಚು ಮಾಡಬೇಕಾಗುತ್ತದೆ” ಎಂದು ವಾದಿಸಿತ್ತು.

ಜಾರ್ಖಂಡ್‌ನಲ್ಲಿ ಜಾರಿಯಲ್ಲಿರುವ ಸ್ವತ್ತಿನ ವಿರೂಪಗೊಳಿಸುವಿಕೆ ತಡೆ ಕಾಯಿದೆಯನ್ನು ಸೆಂಚುರಿ ಸಂಸ್ಥೆ ಉಲ್ಲೇಖಿಸಿತ್ತು. ಅದಾಗ್ಯೂ ಆ ರಾಜ್ಯದಲ್ಲಿ ರಾಜಕೀಯ ಪಕ್ಷಗಳಿಗೆ ಹೋರ್ಡಿಂಗ್‌ಗಳನ್ನು ಹಾಕಲು ಮುಖ್ಯ ಚುನಾವಣಾಧಿಕಾರಿ ಅನುಮತಿ ನೀಡಿದ್ದರು ಎಂದು ಹೇಳಿತ್ತು.

ರಾಜಕೀಯ ಪಕ್ಷಗಳಿಗೆ ಹೋರ್ಡಿಂಗ್‌ಗಳನ್ನು ಹಾಕಲು ಅವಕಾಶ ನೀಡುವುದರಿಂದ ಎಲ್ಲೆಂದರಲ್ಲಿ ಹಾಕುವ ಸಣ್ಣ ಸಣ್ಣ ಹೋರ್ಡಿಂಗ್‌ಗಳನ್ನು ತಡೆಯಬಹುದು ಮತ್ತು ಮಿತಿಮೀರಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯನ್ನು ವಿರೂಪಗೊಳಿಸುವುದನ್ನು ವಿಮೋಚನೆಗೊಳಿಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಹೆಚ್ಚುವರಿಯಾಗಿ, ಜಾರ್ಖಂಡ್‌ನಲ್ಲಿನ ಕಾನೂನಿನ ನಿಲುವಿನ ಬಗ್ಗೆ ಅರ್ಜಿದಾರರ ಉಲ್ಲೇಖವನ್ನು ನ್ಯಾಯಾಲಯವು ಅಂಗೀಕರಿಸಿದ್ದು, "ಎರಡು ವಿಭಿನ್ನ ರಾಜ್ಯಗಳಲ್ಲಿ ಒಂದು ಕಾಯಿದೆ ಅಥವಾ ನಿಯಮವನ್ನು ವ್ಯಾಖ್ಯಾನಿಸುವಲ್ಲಿ ಎರಡು ಮಾನದಂಡಗಳನ್ನು ಅನ್ವಯಿಸಲಾಗುವುದಿಲ್ಲ" ಎಂದು ಹೇಳಿ ಮನವಿಯನ್ನು ಪುರಸ್ಕರಿಸಿತು.

ಹಿರಿಯ ವಕೀಲ ಎಸ್‌ ಡಿ ಸಂಜಯ್‌ ಮತ್ತು ಅಡ್ವೊಕೇಟ್‌ ಆನ್‌ ರೆಕಾರ್ಡ್‌ ರಾಜು ಗಿರಿ ಅವರು ಅರ್ಜಿದಾರರನ್ನು ವಕೀಲ ಸಿದ್ಧಾರ್ಥ್‌ ಪ್ರಸಾದ್‌ ಅವರು ಮುಖ್ಯ ಚುನಾವಣಾಧಿಕಾರಿ ಪರ ವಾದಿಸಿದರು.