ಸುದ್ದಿಗಳು

ಬೈಕ್ ರ್‍ಯಾಲಿ: ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಕನ್ನಡ ಕಡ್ಡಾಯಗೊಳಿಸಲು ಹೈಕೋರ್ಟ್‌ಗೆ ಮನವಿ ಸಲ್ಲಿಕೆ

Bar & Bench

ರಾಜ್ಯದ ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವಂತೆ ಕೋರಿ ಬೆಂಗಳೂರು ವಕೀಲರ ಸಾಹಿತ್ಯ ಕೂಟ ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ.

ಬುಧವಾರ ಬೆಳಗ್ಗೆ ಸಿಟಿ ಸಿವಿಲ್ ನ್ಯಾಯಾಲಯದಿಂದ ಭುವನೇಶ್ವರಿ ದೇವಿ ಜ್ಯೋತಿ ಮೆರವಣಿಗೆ ಹಾಗೂ ಬೈಕ್ ರ್‍ಯಾಲಿ ಮೂಲಕ ಹೈಕೋರ್ಟ್‌ಗೆ ತೆರಳಿದ ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಸದಸ್ಯರು ರಿಜಿಸ್ಟ್ರಾರ್ ಜನರಲ್‌ಗೆ ಮನವಿ ಸಲ್ಲಿಸಿದರು.

ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ವಕೀಲರಿಗೆ ಕನ್ನಡದಲ್ಲಿ ವಾದ ಮಂಡಿಸಲು ಹಾಗೂ ನ್ಯಾಯಾಧೀಶರಿಗೆ ಕನ್ನಡದಲ್ಲಿ ತೀರ್ಪು ಬರೆಸಲು ಅವಕಾಶ ಕಲ್ಪಿಸಬೇಕು ಎಂದು ವಕೀಲರ ಸಾಹಿತ್ಯ ಕೂಟ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದೆ.

ನ್ಯಾಯಾಲಯದ ಕಲಾಪಗಳಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಬಹುದೊಡ್ಡ ಅಭಿಯಾನ ಇದಾಗಿದೆ. ಈ ನಿಟ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲಾಗಿದೆ. ಜತೆಗೆ, ಬೆಂಗಳೂರು ವಕೀಲರ ಸಂಘ ಹಾಗೂ ಸಾಹಿತ್ಯ ಕೂಟದ ವತಿಯಿಂದ ಕಾನೂನು ಪದಗಳನ್ನು ಕನ್ನಡೀಕರಣಗೊಳಿಸಿ ವಕೀಲರಿಗೆ ಕೈಪಿಡಿಗಳನ್ನು ಒದಗಿಸಲಾಗುತ್ತಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹೇಳಿದರು.