Bilkis Bano and SC
Bilkis Bano and SC 
ಸುದ್ದಿಗಳು

[ಬಿಲ್ಕಿಸ್ ಪ್ರಕರಣ] ಜನತೆಗೆ ತೊಂದರೆಯಾದರೆ ಮಾತ್ರ ಕೈದಿಗಳ ಅವಧಿಪೂರ್ವ ಬಿಡುಗಡೆ ಕುರಿತ ಪಿಐಎಲ್ ಪರಿಗಣನೆ: ಸುಪ್ರೀಂ

Bar & Bench

ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳ ಅವಧಿ ಪೂರ್ವ ಬಿಡುಗಡೆ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು (ಪಿಐಎಲ್) ಪರಿಗಣಿಸಬಹುದೇ ಎಂಬ ಪ್ರಶ್ನೆಯು ಕೈದಿಗಳ ಬಿಡುಗಡೆಯನ್ನು ನಿಯಂತ್ರಿಸುವ ಆಡಳಿತಾತ್ಮಕ ನೀತಿಯು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತಿದೆಯೇ ಎಂಬುದನ್ನು ಆಧರಿಸಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ [ಬಿಲ್ಕಿಸ್ ಯಾಕೂಬ್ ರಸೂಲ್  ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಅಪರಾಧಿಗಳ ಅಕಾಲಿಕ ಬಿಡುಗಡೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಸರ್ವೋಚ್ಚ ನ್ಯಾಯಾಲಯ ನಿರ್ವಹಿಸಬಹುದೇ ಎಂಬ ಕುರಿತ ವಕೀಲರ ವಾದವನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಆಲಿಸಿತು.

ಪ್ರಕರಣ ಕ್ರಿಮಿನಲ್ ಕಾನೂನು ಸಮಸ್ಯೆಯಲ್ಲ, ಆದರೆ ಆಡಳಿತಾತ್ಮಕ ಕಾನೂನಿನ ವಿಷಯ ಎಂದು ನ್ಯಾಯಾಲಯ ಇಂದು ಹೇಳಿತು. "ಇಲ್ಲಿ ಅರ್ಜಿದಾರರು ಆಡಳಿತಾತ್ಮಕ ಆದೇಶವನ್ನು ಮಾತ್ರ ಪ್ರಶ್ನಿಸುತ್ತಿದ್ದಾರೆ, ಅಪರಾಧ ಹಾಗೂ ಶಿಕ್ಷೆಯನ್ನು ಅಲ್ಲ" ಎಂದು ನ್ಯಾ. ನಾಗರತ್ನ ಅವರು, ಅಪರಾಧಿ ರಾಧೆಶ್ಯಾಮ್ ಪರ ವಕೀಲ ರಿಷಿ ಮಲ್ಹೋತ್ರಾ ಅವರನ್ನು ಉದ್ದೇಶಿಸಿ ಹೇಳಿದರು.

ನೀತಿಯೊಂದು ಸಾರ್ವಜನಿಕರ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿದರೆ, ಅಂತಹ ನೀತಿಯ ಪ್ರಶ್ನಿಸಿರುವ ಪಿಐಎಲ್ ಪರಿಗಣಿಸಬಹುದು ಎಂದು ನ್ಯಾ. ನಾಗರತ್ನ ವಿವರಿಸಿದರು.