ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್ 
ಸುದ್ದಿಗಳು

ಧನಗರ್‌ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ: ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

Bar & Bench

ಧನಗರ್‌ (ಕುರುಬ) ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಎಂದು ವರ್ಗೀಕರಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ಮಹಾರಾಣಿ ಅಹಲ್ಯಾದೇವಿ ಸಮಾಜ ಪ್ರಬೋಧನ್ ಮಂಚ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಮುದ್ರಣ ದೋಷದಿಂದಾಗಿ ಈ ಸಮುದಾಯವನ್ನು 'ಧನಗಡ್‌' ಸಮುದಾಯ ಎಂದು ಕರೆಯುವ ಬದಲು 'ಧನಗರ್‌' ಸಮುದಾಯವೆಂದು ಪಟ್ಟಿ ಮಾಡಿದ ಪರಿಣಾಮ ಸಮುದಾಯವನ್ನು ಎಸ್‌ಟಿ ವರ್ಗದಿಂದ ಹೊರಗಿಡಲಾಗಿದೆ ಎಂದು ಅರ್ಜಿದಾರರು ದೂರಿದ್ದರು.

ಮಹಾರಾಷ್ಟ್ರದಲ್ಲಿ 'ಧನಗಡ್' ಬುಡಕಟ್ಟು ಅಸ್ತಿತ್ವದಲ್ಲಿಲ್ಲ ಇರುವುದು 'ಧನಗರ್‌' ಸಮುದಾಯ ಮಾತ್ರ ಎಂಬ ತನ್ನ ಹೇಳಿಕೆ ಬಗ್ಗೆ ತನಿಖೆ ನಡೆಸಬೇಕೆಂದೂ ಅರ್ಜಿಗಳು ಕೋರಿದ್ದವು. ಮಹಾರಾಷ್ಟ್ರಕ್ಕೆ ಸಂಬಂಧಿಸಿದಂತೆ, 1950ರ ರಾಷ್ಟ್ರಪತಿ ಆದೇಶದ ಮೂಲಕ 'ಧನಗಡ್‌' ಸಮುದಾಯ ಅಸ್ತಿತ್ವಕ್ಕೆ ಬಂದಿದ್ದು 1956ರ ನಂತರದ ತಿದ್ದುಪಡಿಯು 'ಧನಗರ್' ಸಮುದಾಯಕ್ಕೆ ಅನ್ವಯಿಸುತ್ತದೆ ಎಂದು ತಿಳಿಸಲಾಗಿತ್ತು.

ಆದರೆ ರಾಷ್ಟ್ರಪತಿಗಳು ಆದೇಶ ಹೊರಡಿಸಿದ ವೇಳೆ ಬಾಂಬೆ ರಾಜ್ಯದಲ್ಲಿ (ನಂತರ ಮಹಾರಾಷ್ಟ್ರ ರಾಜ್ಯ ಎಂದಾಯಿತು) ಧನಗಡ್‌ ಸಮುದಾಯ ಅಸ್ತಿತ್ವದಲ್ಲಿರಲಿಲ್ಲ ಎಂದು ಸಾಬೀತುಪಡಿಸಲು ಅರ್ಜಿದಾರರು ವಿಫಲವಾಗಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಜಿ.ಎಸ್.ಪಟೇಲ್ ಮತ್ತು ಕಮಲ್ ಖಾತಾ ಅವರ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಜಿಎಸ್ ಪಟೇಲ್ ಮತ್ತು ನ್ಯಾಯಮೂರ್ತಿ ಕಮಲ್ ಖಾತಾ

ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ ಎಂದೂ ಕರೆಯಲಾಗುವ ರಾಷ್ಟ್ರಪತಿಗಳ ಆದೇಶದ ಮೂಲಕ ತೀವ್ರವಾಗಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ ಅನುಭವಿಸಿದ ಜಾತಿಗಳನ್ನು ಗುರುತಿಸಲಾಗಿತ್ತು ಈ ಜಾತಿಗಳನ್ನು 'ಪರಿಶಿಷ್ಟ ಜಾತಿಗಳು' ಎಂದು ಕರೆಯಲಾಗಿತ್ತು.

ದೇಶದ ವೈವಿಧ್ಯತೆಯಿಂದಾಗಿ ರಾಷ್ಟ್ರಪತಿ ಆದೇಶದಲ್ಲಿನ ಅಂಶಗಳನ್ನು ಸಂಸತ್ತು ಮಾತ್ರ ಮಾರ್ಪಡಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮೀಸಲಾತಿ ಸೇರಿದಂತೆ ವಿವಿಧ ಸವಲತ್ತು ಪಡೆಯಲು ಈ ಪಟ್ಟಿ ಅಗತ್ಯವಾಗಿದ್ದು ಪಟ್ಟಿಯಲ್ಲಿ ನಿರಂತರ ಬದಲಾವಣೆ ಮಾಡಿ ಸೌಲಭ್ಯ ಪಡೆಯಲು ಗೊಂದಲ ಸೃಷ್ಟಿಸುತ್ತದೆ ಎಂದು ಅದು ಎಚ್ಚರಿಸಿದೆ.

1950ಕ್ಕಿಂತ ಮೊದಲು ಮಹಾರಾಷ್ಟ್ರದಲ್ಲಿ ಧನಗಡ್‌ ಬುಡಕಟ್ಟು ಅಸ್ತಿತ್ವದಲ್ಲಿರಲಿಲ್ಲವೇ ಎಂಬ ಬಗ್ಗೆ ತನಿಖೆ ನಡೆಸಲು ಪೀಠ ನಿರಾಕರಿಸಿತು.