ದಿವಾಳಿಯ ಅಂಚಿನಲ್ಲಿರುವ ರಿಲಯನ್ಸ್ ಕಮ್ಯುನಿಕೇಷನ್ಸ್ಗೆ ಸಂಬಂಧಿಸಿದಂತೆ ಉದ್ಯಮಿ ಅನಿಲ್ ಅಂಬಾನಿ ಅವರ ಸಾಲ ಖಾತೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಾಸ್ಟರ್ ಸುತ್ತೋಲೆಯ ಅಡಿಯಲ್ಲಿ ವಂಚನೆ ಎಂದು ವರ್ಗೀಕರಿಸಿ ಕೆನರಾ ಬ್ಯಾಂಕ್ ಮೂರು ತಿಂಗಳ ಹಿಂದೆ (ನವೆಂಬರ್ 2024) ಹೊರಡಿಸಿದ್ದ ಆದೇಶಕ್ಕೆ ಬಾಂಬೆ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.
ಬ್ಯಾಂಕ್ ಕ್ರಮ ಪ್ರಶ್ನಿಸಿ ಅನಿಲ್ ಸಲ್ಲಿಸಿದ್ದ ಅರ್ಜಿಗೆ ಕೆನರಾ ಬ್ಯಾಂಕ್ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠ ಸೂಚಿಸಿತು. ಜೊತೆಗೆ ಆರ್ಬಿಐಯನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಸೇರಿಸುವಂತೆ ಅನಿಲ್ಗೆ ನಿರ್ದೇಶನ ನೀಡಿತು. ಸಾಲಗಾರರ ಖಾತೆಗಳನ್ನು ವಂಚನೆ ಎಂದು ವರ್ಗೀಕರಿಸುವ ಮೊದಲು ಅವರ ವಿಚಾರಣೆ ನಡೆಸಬೇಕು ಎಂಬ ಆರ್ಬಿಐನ ಮಾಸ್ಟರ್ ಸುತ್ತೋಲೆ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪದೇ ಪದೇ ಉಲ್ಲಂಘಿಸಿದ ಬ್ಯಾಂಕುಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಪ್ರಸ್ತಾಪಿಸಲಾಗಿದೆಯೇ ಎಂಬುದರ ಕುರಿತು ನ್ಯಾಯಾಲಯ ಆರ್ಬಿಐನಿಂದ ವಿವರಣೆ ಬಯಸಿದೆ.
ರಿಲಯನ್ಸ್ ಕಮ್ಯುನಿಕೇಷನ್ಸ್ನ ಸ್ವತಂತ್ರ ನಿರ್ದೇಶಕರ ವಿರುದ್ಧ ಇದೇ ರೀತಿಯ ವಂಚನೆ ವರ್ಗೀಕರಣಕ್ಕೆ ತಡೆ ನೀಡಿ ಡಿಸೆಂಬರ್ 2024ರಲ್ಲಿ ಪ್ರಕಟವಾಗಿದ್ದ ಆದೇಶವನ್ನು ಪೀಠ ಅವಲಂಬಿಸಿ ಈ ತಡೆ ನೀಡಿದೆ.
ಬ್ಯಾಂಕ್ಗಳನ್ನು ಉದ್ದೇಶಿಸಿದ ಹೈಕೋರ್ಟ್ "ಅವುಗಳಿಗೆ ಯಾವುದೇ ಹೊಣೆಗಾರಿಕೆ ಇಲ್ಲವೇ? ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ನೀಡುವ ಆದೇಶಗಳನ್ನು ಪಾಲಿಸಲು ಅವು ಬದ್ಧವಲ್ಲವೇ? " ಎಂದು ನ್ಯಾಯಾಲಯ ಇಂದು ಪ್ರಶ್ನಿಸಿತು.
₹ 1,050 ಕೋಟಿ ಸಾಲದ ದುರುಪಯೋಗ ಉಲ್ಲೇಖಿಸಿ ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ಅಂಗಸಂಸ್ಥೆಯ ಸಾಲದ ಖಾತೆಗಳನ್ನು ವಂಚನೆ ಎಂದು ವರ್ಗೀಕರಿಸಿ 2024 ನವೆಂಬರ್ 8ರಂದು ಕೆನರಾ ಬ್ಯಾಂಕ್ ಆದೇಶಿಸಿತ್ತು.
ಫೆಬ್ರವರಿ 28 ರೊಳಗೆಉತ್ತರಸಲ್ಲಿಸುವಂತೆಕೆನರಾಬ್ಯಾಂಕ್ಗೆ ಪೀಠಸೂಚಿಸಿದ್ದು ಮತ್ತೆ ಮಾರ್ಚ್ 6ರಂದುಪ್ರಕರಣದವಿಚಾರಣೆನಡೆಯಲಿದೆ.