ಸುದ್ದಿಗಳು

ಜಿಎಸ್‌ಟಿ ಕುರಿತು ಶಾಸನ ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಏಕಕಾಲಿಕ ಅಧಿಕಾರವಿದೆ: ಸುಪ್ರೀಂ ಕೋರ್ಟ್‌

Bar & Bench

ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್‌ಟಿ) ಸಂಬಂಧಿಸಿದಂತೆ ಶಾಸನ ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏಕಕಾಲಿಕ ಅಧಿಕಾರ ಹೊಂದಿವೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಮಹತ್ವದ ತೀರ್ಪು ನೀಡಿದೆ.

ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಕಾರ್ಯಸಾಧುವಾದ ಪರಿಹಾರ ಒದಗಿಸಲು ಜಿಎಸ್‌ಟಿ ಮಂಡಳಿ ಸಾಮರಸ್ಯದಿಂದ ಕೆಲಸ ಮಾಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೀಗಾಗಿ ಜಿಎಸ್‌ಟಿ ಮಂಡಳಿಯ ಶಿಫಾರಸುಗಳು ರಾಜ್ಯಗಳ ಮೇಲೆ ನಿರ್ಬಂಧಕವಲ್ಲ, ಆದರೆ ಮನವೊಲಿಸುವ ಅಧಿಕಾರ ಮಾತ್ರ ಅದಕ್ಕಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

"ಜಿಎಸ್‌ಟಿ ವಿಷಯಗಳಲ್ಲಿ ರಾಜ್ಯ ಮತ್ತು ಕೇಂದ್ರ ಸಮಾನವಾಗಿ ಶಾಸನ ರೂಪಿಸಬಹುದು. ಜಿಎಸ್‌ಟಿ ಮಂಡಳಿಯ ಎಲ್ಲಾ ಶಿಫಾರಸುಗಳು ರಾಜ್ಯ ಶಾಸಕಾಂಗದ ಮೇಲೆ ನಿರ್ಬಂಧಕವಲ್ಲ" ಎಂದು ನ್ಯಾಯಾಲಯ ಹೇಳಿದೆ.

ಸಂವಿಧಾನದ 246 ಎ ವಿಧಿ ಪ್ರಕಾರ, ಸಂಸತ್ತು ಮತ್ತು ರಾಜ್ಯ ಶಾಸಕಾಂಗ ಎರಡೂ ತೆರಿಗೆಯ ವಿಷಯಗಳ ಮೇಲೆ ಶಾಸನ ಮಾಡಲು ಸಮಾನ ಅಧಿಕಾರ ಹೊಂದಿವೆ ಎಂದು ನ್ಯಾಯಾಲಯ ಹೇಳಿತು.

“ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಸಂವಿಧಾನದ 246 ಎ ವಿಧಿಯನ್ನು ಸಮಾನವಾಗಿ ಪರಿಗಣಿಸುತ್ತದೆ. ರಾಜ್ಯ ಮತ್ತು ಕೇಂದ್ರವು ಪರಸ್ಪರ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು 279ನೇ ವಿಧಿ ಹೇಳುತ್ತದೆ. ಇದು ಸ್ಪರ್ಧಾತ್ಮಕ ಒಕ್ಕೂಟದತ್ತ ಬೊಟ್ಟು ಮಾಡುತ್ತದೆ” ಎಂದು ತೀರ್ಪು ವಿವರಿಸಿದೆ.

ಇದೇ ವೇಳೆ, ಸಹಕಾರಿ ಒಕ್ಕೂಟದ ಬಗ್ಗೆ ನ್ಯಾಯಾಲಯ ಪ್ರಮುಖ ಅವಲೋಕನಗಳನ್ನು ಮಾಡಿತು. ಭಾರತದ ಸಂವಿಧಾನವು ಒಕ್ಕೂಟಾತ್ಮಕವಾದುದಾದರೂ ದೇಶದಲ್ಲಿ ಅರಾಜಕತೆಯನ್ನು ತಪ್ಪಿಸಲು ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರದ ಪಾಲು ನೀಡಿದೆ. ಆದರೆ ಈ ಎರಡು ಸಾಂವಿಧಾನಿಕ ಘಟಕಗಳ ನಡುವಿ ಸಂಬಂಧವು ಯಾವಾಗಲೂ ಸಹಯೋಗಾತ್ಮಕವಾಗಿರಬೇಕು ಎಂದೇನೂ ಇಲ್ಲ” ಎಂದು ನ್ಯಾಯಾಲಯ ಹೇಳಿತು.

ಮುಂದುವರೆದು, "ಭಾರತೀಯ ಒಕ್ಕೂಟ ವ್ಯವಸ್ಥೆ ಎಂಬುದು ಸಹಕಾರಿ ಮತ್ತು ಅಸಹಕಾರಿ ಒಕ್ಕೂಟದ ನಡುವಿನ ಸಂವಾದವಾಗಿದೆ. ಭಾರತೀಯ ಒಕ್ಕೂಟ ಎಂಬುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸದಾ ಮಾತುಕತೆಯಲ್ಲಿ ತೊಡಗುವಂತಹ ಸಂವಾದವಾಗಿದೆ” ಎಂದು ನ್ಯಾಯಾಲಯ ವಿವರಿಸಿತು.