ಸುದ್ದಿಗಳು

ದೆಹಲಿ ಗಲಭೆ: ಯುಎಪಿಎ ಪ್ರಕರಣದಲ್ಲಿ ಉಮರ್ ಖಾಲಿದ್‌ಗೆ ಜಾಮೀನು ನಿರಾಕರಣೆ

Bar & Bench

ದೆಹಲಿ ಗಲಭೆಗೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧ ದಾಖಲಾಗಿರುವ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ನಿರಾಕರಿಸಿದೆ.

ಕಡ್‌ಕಡ್‌ಡೂಮ ನ್ಯಾಯಾಲಯ ಮಾರ್ಚ್ 3 ರಂದು ಆದೇಶವನ್ನು ಕಾಯ್ದಿರಿಸಿತ್ತು. ತೀರ್ಪು ನೀಡುವುದನ್ನು ಮೂರು ಬಾರಿ (ಮಾರ್ಚ್ 14, 21 ಮತ್ತು 23 ರಂದು) ಮುಂದೂಡಲಾಗಿತ್ತು.

ಜಾಮೀನು ಪ್ರಕರಣದ ವಿಚಾರಣೆ ಸುಮಾರು ಎಂಟು ತಿಂಗಳುಗಳ ಕಾಲ ನಡೆದಿತ್ತು. ಹಿರಿಯ ನ್ಯಾಯವಾದಿ ತ್ರಿದೀಪ್ ಪೈಸ್ ಮತ್ತು ರಾಜ್ಯದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರ ಕೆಲವು ಆಸಕ್ತಿದಾಯಕ ವಾದಗಳಿಗೆ ಪ್ರಕರಣ ಸಾಕ್ಷಿಯಾಗಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಹಲವಾರು ವ್ಯಕ್ತಿಗಳು ಪ್ರತಿಭಟಿಸಿದ್ದರು. ಪ್ರತಿಭಟನೆ ಜಾತ್ಯತೀತ ಸ್ವರೂಪದ್ದಾಗಿತ್ತು, ಆದರೆ ಆರೋಪಪಟ್ಟಿಯು ಮತೀಯವಾಗಿದೆ ಎಂದು ಪೈಸ್‌ ಒಂದು ಸಂದರ್ಭದಲ್ಲಿ ವಾದಿಸಿದ್ದರು. ಆದರೆ ಇದನ್ನು ನಿರಾಕರಿಸಿದ್ದ ಪ್ರಸಾದ್‌ ಅವರು ಪ್ರಕರಣದಲ್ಲಿ ಮೊದಲು ಶಿಕ್ಷೆಗೊಳಗಾದ ವ್ಯಕ್ತಿ ಹಿಂದೂವೇ ಆಗಿದ್ದಾರೆ ಎಂದು ವಾದಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಲಿದ್‌ ಅವರನ್ನು ದೆಹಲಿ ಪೊಲೀಸರು ಸೆಪ್ಟೆಂಬರ್ 13, 2020ರಂದು ಬಂಧಿಸಿದ್ದರು. ಅದೇ ವರ್ಷ ನವೆಂಬರ್ 22 ರಂದು ಯುಎಪಿಎ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಖಾಲಿದ್ ಅವರು ಜುಲೈ 2021ರಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಅನೇಕ ದಿನಗಳ ಕಾಲ ನಡೆದ ವಿಚಾರಣೆ ನಂತರ, ನ್ಯಾಯಾಲಯ ಈ ತಿಂಗಳ ಆರಂಭದಲ್ಲಿ ಆದೇಶ ಕಾಯ್ದಿರಿಸಿತ್ತು.