Justice MR Shah, Justice BV Nagarathna and Supreme Court
Justice MR Shah, Justice BV Nagarathna and Supreme Court 
ಸುದ್ದಿಗಳು

ನಂತರ ರದ್ದುಗೊಳಿಸಲಾದ ತೀರ್ಪಿನ ಮೇಲೆ ಅವಲಂಬಿತವಾದ ಆದೇಶ ಪರಿಶೀಲಿಸಬಹುದೇ? ಭಿನ್ನ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌

Bar & Bench

ಭೂಸ್ವಾಧೀನ ಕಾಯಿದೆ-  2013ರ ಸೆಕ್ಷನ್ 24 ಕುರಿತಂತೆ ಸುಪ್ರೀಂ ಕೋರ್ಟ್‌ನ ಪುಣೆ ಮಹಾನಗರ ಪಾಲಿಕೆ ಮತ್ತು ಇಂದೋರ್ ಅಭಿವೃದ್ಧಿ ಪ್ರಾಧಿಕಾರದ ತೀರ್ಪುಗಳ ಸುತ್ತಲಿನ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. ಈ ಬಾರಿ ಇಂದೋರ್‌ ಅಭಿವೃದ್ಧಿ ಪ್ರಾಧಿಕಾರದ ಪ್ರಕರಣದ ತೀರ್ಪ ನೀಡುವ ಮೊದಲು ಪುಣೆ ಮಹಾನಗರ ಪಾಲಿಕೆ ತೀರ್ಪನ್ನು ಆಧರಿಸಿ ನೀಡಲಾದ ತೀರ್ಪನ್ನೊಳಗೊಂಡ ಹಲವು ಪ್ರಕರಣಗಳ ಭವಿಷ್ಯದ ಪ್ರಶ್ನೆ ಎದುರಾಗಿದೆ [ಭೂಮಿ ಮತ್ತು ಕಟ್ಟಡ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮೂಲಕ ದೆಹಲಿ ಸರ್ಕಾರ ಮತ್ತು ಕೆ ಎಲ್‌ ರತಿ ಸ್ಟೀಲ್ಸ್‌ ಲಿಮಿಟೆಡ್‌ ಇನ್ನಿತರರ ನಡುವಣ ಪ್ರಕರಣ ].

ಇಂದೋರ್‌ ಅಭಿವೃದ್ಧಿ ಪ್ರಾಧಿಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ. ನೀಡಿದ ತೀರ್ಪಿನಿಂದಾಗಿ ಪುಣೆ ಮಹಾನಗರ ಪಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ನೀಡಿದ ತೀರ್ಪನ್ನು ಅವಲಂಬಿಸಿ ನೀಡಲಾದ ಆದೇಶ ಮತ್ತು ತೀರ್ಪುಗಳಿಗೆ ಸಂಬಂಧಿಸಿದಂತೆ ಮರುಪರಿಶೀಲನಾ ಅರ್ಜಿಗಳನ್ನು ಅನುಮತಿಸಬಹುದೇ ಎಂಬ ಕುರಿತು ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಬಿವಿ ನಾಗರತ್ನ ಅವರಿದ್ದ  ಪೀಠ ವ್ಯತಿರಿಕ್ತ ತೀರ್ಪು ನೀಡಿತು.  

ಪುಣೆ ಮಹಾನಗರ ಪಾಲಿಕೆ ಪ್ರಕರಣದಲ್ಲಿ ಹಿಂದಿನ ನಿರ್ಧಾರವನ್ನು ಅವಲಂಬಿಸಿ ಜಾರಿಗೊಳಿಸಲಾದ ಅಂತಹ ಆದೇಶಗಳು ಮತ್ತು ತೀರ್ಪುಗಳನ್ನು ಪರಿಶೀಲಿಸಬಹುದು ಎಂದು ನ್ಯಾಯಮೂರ್ತಿ ಶಾ ಹೇಳಿದರು.

ಆದರೆ ಪುಣೆ ಮಹಾನಗರ ಪಾಲಿಕೆ ಪ್ರಕರಣದ ತೀರ್ಪನ್ನು ರದ್ದುಗೊಳಿಸಲಾಗಿದ್ದರೂ, ಇಂದೋರ್ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಸ್ತೃತ ಪೀಠದ ಆದೇಶದ ನಂತರ ಅದು ಪೂರ್ವನಿದರ್ಶನವಾಗಿ ತನ್ನ ಮೌಲ್ಯ ಕಳೆದುಕೊಳ್ಳುತ್ತದೆ ಎಂದು ನ್ಯಾ. ನಾಗರತ್ನ ಹೇಳಿದರು.

ಕಕ್ಷಿದಾರರ ನಡುವಿನ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಪುಣೆ ಮಹಾನಗರ ಪಾಲಿಕೆ ಪ್ರಕರಣದ ತೀರ್ಪು ಆಧಾರಿತ ಆದೇಶಗಳನ್ನು ಅನುಷ್ಠಾನಗೊಳಿಸದಿರಲು ಮತ್ತು ಇಂದೋರ್ ಅಭಿವೃದ್ಧಿ ಪ್ರಾಧಿಕಾರ ಪ್ರಕರಣದ ತೀರ್ಪಿಗೆ ಮುಂಚಿತವಾಗಿ ನೀಡಲು ಇದು ಆಧಾರವಾಗಿರಬಾರದು ಎಂದರು.

ಆದ್ದರಿಂದ, ಪುಣೆ ಮಹಾನಗರ ಪಾಲಿಕೆ ಪ್ರಕರಣದ ತೀರ್ಪನ್ನು ಆಧರಿಸಿ ಇಂದೋರ್ ಅಭಿವೃದ್ಧಿ ಪ್ರಾಧಿಕಾರ ಪ್ರಕರಣದಲ್ಲಿ ನೀಡಿದ ತೀರ್ಪಿಗೆ ಮೊದಲು ಇತ್ಯರ್ಥಪಡಿಸಿದ ಪ್ರಕರಣಗಳನ್ನು ಪರಿಶೀಲಿಸುವಂತಿಲ್ಲ ಎಂದು ಅವರು ಹೇಳಿದರು. ಈ ರೀತಿ ಮಾಡುವುದರಿಂದ ಗೊಂದಲ ಮೂಡಿ ಹೆಚ್ಚಿನ ಸಂಖ್ಯೆಯ ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗುತ್ತವೆ ಎಂದರು.

"ಇದು ಗೊಂದಲಕ್ಕೆ ಅವಕಾಶ ನೀಡಿ ಪಕ್ಷಕಾರರ ನಡುವಿನ ತೀರ್ಮಾನಗಳ ಬಂಧಕ ಸ್ವರೂಪವನ್ನು ಅಸಮಾಧಾನಗೊಳಿಸುತ್ತದೆ ಜೊತೆಗೆ ದಾವೆಯಲ್ಲಿ ಅಂತಿಮ ಸಿದ್ಧಾಂತಕ್ಕೆ ವಿರುದ್ಧವಾಗಿರುತ್ತದೆ" ಎಂದು ನ್ಯಾ. ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ.

ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ, ಪ್ರಕರಣವನ್ನು  ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.