High Court
High Court 
ಸುದ್ದಿಗಳು

ಕೋವಿಡ್‌ ಸೋಂಕಿತ ವಕೀಲರು, ಕುಟುಂಬದ ಸದಸ್ಯರಿಗೆ ನೆರವಾಗಲು ಸಿಜೆ ಸೂಚನೆ; ನೋಡಲ್‌ ಅಧಿಕಾರಿ ನೇಮಿಸಿದ ಬಿಬಿಎಂಪಿ

Bar & Bench

ಕರ್ನಾಟಕ ಹೈಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೋವಿಡ್‌ ಸೋಂಕು ತಗುಲುವ ವಕೀಲರು ಮತ್ತು ಅವರ ಕುಟುಂಬ ಸದಸ್ಯರಿಗೆ ಆಸ್ಪತ್ರೆ ಹಾಗೂ ಔಷಧ ವ್ಯವಸ್ಥೆ ಮಾಡುವ ಸಂಬಂಧ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಡಾ. ವೆಂಕಟೇಶ್‌ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ಶನಿವಾರ ನೇಮಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರು ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳು, ರಾಜ್ಯದ ಅಡ್ವೊಕೇಟ್‌ ಜನರಲ್‌, ಭಾರತದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌, ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷರು (ಕೆಎಸ್‌ಬಿಸಿ) ಮತ್ತು ಬೆಂಗಳೂರು ವಕೀಲರ ಸಂಘದ (ಎಎಬಿ) ಪದಾಧಿಕಾರಿಗಳ ಜೊತೆ ಶನಿವಾರ ಸಂಜೆ ವರ್ಚುವಲ್‌ ವ್ಯವಸ್ಥೆಯ ಮೂಲಕ ನಡೆಸಿದ ಸಭೆಯಲ್ಲಿ ಸೋಂಕಿಗೆ ತುತ್ತಾಗುವ ವಕೀಲರು, ಅವರ ಕುಟುಂಬ ಸದಸ್ಯರಿಗೆ ಆಮ್ಲಜನಕ, ವೆಂಟಿಲೇಟರ್‌ಗಳು ಮತ್ತು ಐಸಿಯು ಹಾಸಿಗೆ ಇತ್ಯಾದಿ ವ್ಯವಸ್ಥೆ ಕಲ್ಪಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದರು. ಇದಕ್ಕಾಗಿ ನೋಡಲ್‌ ಅಧಿಕಾರಿ ನೇಮಿಸುವಂತೆ ಬಿಬಿಎಂಪಿಗೆ ಆದೇಶಿಸಿದ್ದರು.

ಕೋವಿಡ್‌ ಸೋಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ನೋಡಲ್‌ ಅಧಿಕಾರಿಯ ಜೊತೆ ಸಮನ್ವಯ ಸಾಧಿಸಲು ಸಮಿತಿ ರಚಿಸುವಂತೆ ಎಎಬಿ ಅಧ್ಯಕ್ಷರಿಗೆ ಸಿಜೆ ಓಕಾ ನಿರ್ದೇಶಿಸಿದ್ದಾರೆ. ಅಗತ್ಯವಿರುವ ವಕೀಲರು ಮತ್ತು ಅವರ ಕುಟುಂಬದ ಸದಸ್ಯರಿಗೆ ಚಿಕಿತ್ಸೆ ನೀಡುವ ಸಂಬಂಧ ವ್ಯವಸ್ಥೆ ಕಲ್ಪಿಸಲು ವಕೀಲರ ಭವನ ನೀಡಲು ಎಎಬಿ ಸಿದ್ಧವಾಗಿದ್ದು, ಸ್ಥಳ ಪರಿಶೀಲನೆ ನಡೆಸಲು ಆದೇಶಿಸಲಾಗಿದೆ.

ಎಎಬಿ ನೀಡಲು ಸಿದ್ಧವಾಗಿರುವ ವಕೀಲರ ಭವನಕ್ಕೆ ಅಗತ್ಯವಾದ ವ್ಯವಸ್ಥೆ, ವೈದ್ಯರು, ಸಿಬ್ಬಂದಿ ಕಲ್ಪಿಸಬಹುದೇ ಎಂಬುದನ್ನು ಪರಿಶೀಲಿಸಿ ಎರಡು ದಿನಗಳಲ್ಲಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

ಕೋವಿಡ್‌ನಿಂದಾಗಿ ವಕೀಲರು ಹಾಗೂ ನ್ಯಾಯಾಂಗದ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಸಾಕಷ್ಟು ಸಮಸ್ಯೆಗೆ ಸಿಲುಕಿಕೊಂಡಿದ್ದು, ಅವರಿಗೆ ನೆರವಾಗುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಎಎಬಿ ಅಧ್ಯಕ್ಷ ಎ ಪಿ ರಂಗನಾಥ್‌ ಅವರು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರಿಗೆ ಶನಿವಾರ ಬೆಳಿಗ್ಗೆ ಪತ್ರ ಬರೆದಿದ್ದರು.

ಸಿಜೆ ಅವರು ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧವಾಗಿ ಕೆಲಸ ಮಾಡಲು ಸಿದ್ಧವಾಗಿರುವುದಾಗಿ ತಿಳಿಸಿದ್ದರು. ಈಗಾಗಲೇ ನ್ಯಾಯಾಲಯ ಸೂಚಿಸಿದಂತೆ ವಕೀಲರಿಗೆ ಲಸಿಕೆ ನೀಡುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದೂ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.

AAB Letter to CJ.pdf
Preview