Mukhtar Ansari with Allahabad High Court
Mukhtar Ansari with Allahabad High Court 
ಸುದ್ದಿಗಳು

ಅತೀಕ್ ಹತ್ಯೆ: ಮುಖ್ತಾರ್‌ಗೆ ಪೂರ್ಣ ಭದ್ರತೆ ಒದಗಿಸುವಂತೆ ಸೂಚಿಸಿದ ಅಲಾಹಾಬಾದ್ ಹೈಕೋರ್ಟ್; ಮಾಧ್ಯಮಗಳಿಗೆ ನಿರ್ಬಂಧ

Bar & Bench

ಪಾತಕಿ- ರಾಜಕಾರಣಿ ಅತೀಕ್‌ ಅಹ್ಮದ್‌ ಮತ್ತು ಆತನ ಸಹೋದರ ಅಶ್ರಫ್‌ ಅವರನ್ನು ಗುಂಡಿಕ್ಕಿ ಕೊಂದ ಕೆಲ ವಾರಗಳ ಬಳಿಕ ಮಾಜಿ ಶಾಸಕ ಮುಖ್ತಾರ್‌ ಅನ್ಸಾರಿ ಅವರಿಗೆ ಸಂಪೂರ್ಣ ಭದ್ರತೆ ಒದಗಿಸುವಂತೆ ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ಸೂಚಿಸಿದೆ [ಅಫ್ಶಾನ್ ಅನ್ಸಾರಿ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಅನ್ಸಾರಿ ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ಸ್ಥಳಾಂತರಿಸುವಾಗ ಮತ್ತು ಜೈಲಿನಿಂದ ಯಾವುದೇ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಅವರಿಗೆ ಭದ್ರತೆ ಒದಗಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಮೂರ್ತಿಗಳಾದ ಕೌಶಲ್ ಜಯೇಂದ್ರ ಥಾಕೆರ್‌ ಮತ್ತು ಶಿವಶಂಕರ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಸೂಚಿಸಿತು.

ಅನ್ಸಾರಿ ಅವರನ್ನು ಮಾಧ್ಯಮಗಳು ಸಂದರ್ಶಿಸದಂತೆಯೂ ನ್ಯಾಯಾಲಯ ನಿಷೇಧಿಸಿದೆ. “…ಇತ್ತೀಚೆಗೆ ಉತ್ತರ ಪ್ರದೇಶ ರಾಜ್ಯದಲ್ಲಿ ಸಂಭವಿಸಿದ ಘಟನೆಯೊಂದನ್ನು ಗಮನಿಸಿ ಈ ಆದೇಶ ನೀಡಲಾಗುತ್ತಿದೆ. ಘಟನೆಯಲ್ಲಿ ಕೆಲ ಅಪರಾಧಿಗಳು ಮಾಧ್ಯಮದವರಂತೆ ನಟಿಸಿ ಪೊಲೀಸರ ವಶದಲ್ಲಿದ್ದ ಇಬ್ಬರು ವಿಚಾರಣಾಧೀನ ಕೈದಿಗಳನ್ನು ಕೊಂದಿದ್ದರು. ಅವರ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದವು. ಹೀಗಾಗಿ ಆರೋಪುಯ ಸುರಕ್ಷತೆಗಾಗಿ ಈ ನಿರ್ಬಂಧ ವಿಧಿಸಲಾಗುತ್ತಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಮ್ಮ ಪತಿ ಅನ್ಸಾರಿ ಅವರಿಗೆ ಜೀವ ಬೆದರಿಕೆ ಇರುವುದರಿಂದ ಅವರಿಗೆ ರಕ್ಷಣೆ ಒದಗಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಅನ್ಸಾರಿ ಪತ್ನಿ ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಅನ್ಸಾರಿ ಅವರು ಹಲವು ವರ್ಷಗಳಿಂದ ಎಸಗಿದ ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ  ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದಾರೆ. ಇತ್ತೀಚೆಗಷ್ಟೇ ಗಾಜಿಪುರದ ನ್ಯಾಯಾಲಯ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಅನ್ಸಾರಿಯನ್ನು ದೋಷಿ ಎಂದು ಘೋಷಿಸಿ ₹ 5 ಲಕ್ಷ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.