Justice BV Nagarathna
Justice BV Nagarathna 
ಸುದ್ದಿಗಳು

ವಸಾಹತುಶಾಹಿ ಪ್ರಾಬಲ್ಯವಲ್ಲದೆ ಸಾಮಾಜಿಕ, ಆರ್ಥಿಕ ಹಿಡಿತ ತೊಡೆದುಹಾಕಲು ಸಂವಿಧಾನ ಜಾರಿಯಾಯಿತು: ನ್ಯಾ. ಬಿ ವಿ ನಾಗರತ್ನ

Bar & Bench

ವಸಾಹತುಶಾಹಿ ದೋಷಗಳನ್ನು ಸರಿಯಪಡಿಸಲಷ್ಟೇ ಅಲ್ಲದೆ ಸಾಮಾಜಿಕ ಆರ್ಥಿಕ ಪ್ರಾಬಲ್ಯವನ್ನು ಹೋಗಲಾಡಿಸಲು ಸಂವಿಧಾನವನ್ನು ಜಾರಿಗೆ ತರಲಾಯಿತು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಹೇಳಿದರು.

ಕೇರಳ ವಕೀಲೆಯರ ಒಕ್ಕೂಟ  2023ರ ಮಹಿಳಾ ದಿನಾಚರಣೆಯ ಅಂಗವಾಗಿ ಎರ್ನಾಕುಲಂನಲ್ಲಿರುವ ಕೇರಳ ಹೈಕೋರ್ಟ್‌ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮುಖ್ಯ ನ್ಯಾಯಮೂರ್ತಿ ಕೆ ಕೆ ಉಷಾ ನೆನಪಿನ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪರಿವರ್ತನೆ ಸಾಂವಿಧಾನಿಕತೆʼಎಂಬ ವಿಷಯದ ಕುರಿತು ಅವರು ಮಾತನಾಡಿದರು.

ದೇಶದ ಸಂವಿಧಾನ ಮತ್ತು ಹಲವು ದೇಶಗಳಲ್ಲಿ ಸಂವಿಧಾನ ಜಾರಿಗೊಳಿಸಿದ ಸಮಯವು ಐತಿಹಾಸಿಕ ಪ್ರಮಾದಗಳ ಹಿನ್ನೆಲೆಯಲ್ಲಿ ಆಳವಾದ ಪರಿವರ್ತನೆಯ ಕಾಲವಾಗಿತ್ತು. ಅದರಂತೆ ಸಂವಿಧಾನ ಎರಡು ರೀತಿಯ ಪ್ರಾಬಲ್ಯವನ್ನು ಮಣಿಸಲು ಯತ್ನಿಸಿತು ಎಂದು ಅವರು ಸ್ಮರಿಸಿದರು.  

“ಮೊದಲನೆಯದು ಹೊರಗಿನ ವಸಾಹತುಶಾಹಿ ಪ್ರಾಬಲ್ಯವಾಗಿತ್ತು; ಎರಡನೆಯದು ಸ್ಥಳೀಯ ಸಾಮಾಜಿಕ ಹಾಗೂ ಸಾಮಾಜಿಕ- ಆರ್ಥಿಕ ಪ್ರಾಬಲ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಸಂವಿಧಾನ ಶಿಲ್ಪಿಗಳು ಹಕ್ಕು ಮತ್ತು ಸ್ವಾತಂತ್ರ್ಯ ಎಂಬ ಪದಗಳನ್ನು ಪರಿಕಲ್ಪಿಸಿಕೊಂಡು ವ್ಯಕ್ತಪಡಿಸಿದರು” ಎಂದು ಅವರು ಹೇಳಿದರು.

ಮೊದಲನೆಯದಾಗಿ, ವಸಾಹತುಶಾಹಿ ಆಡಳಿತದ ಪ್ರಜೆಗಳನ್ನು ಗಣರಾಜ್ಯದ ನಾಗರಿಕರನ್ನಾಗಿ ಪರಿವರ್ತಿಸುವ ಮೂಲಕ ಸಂವಿಧಾನವು ವ್ಯಕ್ತಿ ಮತ್ತು ಪ್ರಭುತ್ವದ ನಡುವಿನ ಕಾನೂನು ಸಂಬಂಧವನ್ನು ಬದಲಿಸಿತು ಎಂದು ಅವರು ವಿವರಿಸಿದರು. ಆ ಸಮಯದಲ್ಲಿ ದಬ್ಬಾಳಿಕೆಯ ಕ್ರಮಾನುಗತ ವ್ಯವಸ್ಥೆಗಳಿಂದ ಪೀಡಿತವಾಗಿದ್ದ ಸಮಾಜವನ್ನು ಸಂಪೂರ್ಣ ಮುರಿದುಕಟ್ಟಲು ಅದು ಆಲೋಚಿಸಿತು ಎಂದರು.

"ಹೆಚ್ಚು ಸಮಗ್ರ ಪರಿವರ್ತಕ ರೂಪದಲ್ಲಿ, ಪ್ರಭುತ್ವವು ಭಾರತೀಯ ಸಮಾಜದಲ್ಲಿ ಕೇಂದ್ರೀಕೃತ ಅಧಿಕಾರದ ಏಕೈಕ ನೆಲೆಯಲ್ಲ ಎಂದು ಸಂವಿಧಾನ ಗುರುತಿಸಿದೆ. ಆಳವಾದ ವ್ಯಾಪಕ ಶ್ರೇಣಿಯನ್ನು ವಿವಿಧ ರೂಪಗಳನ್ನು ಪಡೆದ ರಚನೆಗಳಿಂದ ನಿರ್ವಹಿಸಲಾಗಿದೆ; ಜಾತಿ, ಅಂತಹ ಒಂದು ರೂಪವಾಗಿದೆ. ಆ ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದಾದರೆ, ಸಂವಿಧಾನದ ರಚನೆಯು ರಾಜಕೀಯ ಅಧೀನತೆಯ ವಿರುದ್ಧದ ಹೋರಾಟಕ್ಕೆ ಸೀಮಿತವಾಗಲಿಲ್ಲ, ಬದಲಿಗೆ ಅಷ್ಟೇ ಸಮನಾಗಿ ಜನಾಂಗ, ಜಾತಿ ಇತ್ಯಾದಿಗಳಂತಹ ಬಹುಸ್ತರದ ದಮನಕಾರಿ ವ್ಯವಸ್ಥೆಗಳ ವಿರುದ್ಧ ಹೋರಾಡಿತು" ಎಂದು ಅವರು ಹೇಳಿದರು.

ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಅನು ಶಿವರಾಮನ್ ಅವರು ಮುಖ್ಯ ನ್ಯಾಯಮೂರ್ತಿ ದಿವಂಗತ ಕೆ ಕೆ ಉಷಾ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರು. ಕೇರಳ ಮಹಿಳಾ ವಕೀಲರ ಒಕ್ಕೂಟದ (ಕೆಎಫ್‌ಡಬ್ಲ್ಯುಎಲ್) ಅಧ್ಯಕ್ಷೆ ಕೆ ಕೆ ಶಾಂತಮ್ಮ, ಉಪಾಧ್ಯಕ್ಷೆ ವಕೀಲ ಕಾರ್ತಿಕಾ  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.