<div class="paragraphs"><p>Actor Chetan</p></div>

Actor Chetan

 
ಸುದ್ದಿಗಳು

ನ್ಯಾಯಾಂಗ ನಿಂದನೆ ಆರೋಪ: ಪೊಲೀಸ್‌ ವಶಕ್ಕೆ ನಟ ಚೇತನ್‌

Bar & Bench

ಹಿಜಾಬ್‌ ಪ್ರಕರಣವನ್ನು ಆಲಿಸುತ್ತಿರುವ ಕರ್ನಾಟಕ ಹೈಕೋರ್ಟ್‌ನ ಪೂರ್ಣಪೀಠದಲ್ಲಿ ನ್ಯಾಯಮೂರ್ತಿಯಾಗಿರುವ ಕೃಷ್ಣ ಎಸ್‌. ದೀಕ್ಷಿತ್‌ ಅವರ ಬಗ್ಗೆ ಆಕ್ಷೇಪಾರ್ಹ ಟ್ವೀಟ್‌ ಮಾಡಿ ನ್ಯಾಯಾಂಗ ನಿಂದನೆ ಆರೋಪಕ್ಕೆ ತುತ್ತಾಗಿರುವ ಸಾಮಾಜಿಕ ಹೋರಾಟಗಾರ, ನಟ ಚೇತನ್‌ ಅವರನ್ನು ಬೆಂಗಳೂರು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ಚೇತನ್‌ ಅವರನ್ನು ವಶಕ್ಕೆ ಪಡೆದಿರುವುದರ ಕುರಿತು ಅವರ ಪತ್ನಿ ಮೇಘಾ ಅವರು ಫೇಸ್‌ಬುಕ್‌ ಮೂಲಕ ತಿಳಿಸಿದ್ದರು. ಹಿಜಾಬ್‌ ವಿಚಾರಣೆಗೆ ಸಂಬಂಧಿಸಿದಂತೆ ಪ್ರಚೋದನಾಕಾರಿ ಹೇಳಿಕೆ ನೀಡದಂತೆ ಪೊಲೀಸರು ಸಾರ್ವಜನಿಕರಿಗೆ ಕೋರಿದ್ದರು. ಚೇತನ್‌ ಅವರು ನ್ಯಾ. ದೀಕ್ಷಿತ್‌ ಅವರನ್ನು ಪ್ರಶ್ನಿಸಿ ಫೆಬ್ರವರಿ 16ರಂದು ಟ್ವೀಟ್‌ ಮಾಡಿದ್ದನ್ನು ಪೊಲೀಸರು ಪರಿಗಣನೆಗೆ ತೆಗೆದುಕೊಂಡು ಬಂಧಿಸಿದ್ದಾರೆ ಎನ್ನಲಾಗಿದೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾ. ದೀಕ್ಷಿತ್‌ ಅವರು ಸರ್ಕಾರಿ ಶಾಲೆಗಳಲ್ಲಿ ಹಿಜಾಬ್‌ ಧರಿಸುವ ಕುರಿತಾದ ವಿಚಾರವನ್ನು ನಿರ್ಧರಿಸಲಿದ್ದಾರೆ. ನ್ಯಾ. ದೀಕ್ಷಿತ್‌ ಅವರಿಗೆ ಅದನ್ನು ನಿರ್ಧರಿಸಲು ಅಗತ್ಯವಾದ ಸ್ಪಷ್ಟತೆ ಇದೆಯೇ ಎಂದು ಪ್ರಶ್ನಿಸಿ ಚೇತನ್‌ ಟ್ವೀಟ್‌ ಮಾಡಿದ್ದರು.

ಅತ್ಯಾಚಾರ ಯತ್ನದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿ, ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಸುಸ್ತಾಗಿ, ನಿದ್ರೆಗೆ ಜಾರಿದ್ದಾಗಿ ಸಂತ್ರಸ್ತೆ ಹೇಳಿದ್ದನ್ನು ಆಲಿಸಿದ್ದ ನ್ಯಾ. ದೀಕ್ಷಿತ್‌ ಅವರು “ಇದು ಭಾರತೀಯ ಮಹಿಳೆಗೆ ಹೊಂದುವಂಥದ್ದಲ್ಲ; ಅತ್ಯಾಚಾರಕ್ಕೆ ಒಳಗಾದಾಗ ನಮ್ಮ ಮಹಿಳೆಯರು ವರ್ತಿಸುವ ರೀತಿ ಅದಲ್ಲ” ಎಂದು ಹೇಳಿ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದರು. ಇದಕ್ಕೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನ್ಯಾ. ದೀಕ್ಷಿತ್‌ ಅವರ ಅಭಿಪ್ರಾಯವನ್ನು ಆದೇಶದಿಂದ ಬಿಡಲಾಗಿತ್ತು.

ಚೇತನ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 505(2) (ಕೋಮುಗಳ ನಡುವೆ ವೈಷಮ್ಯ ಸೃಷ್ಟಿ), 504 (ಉದ್ದೇಶಪೂರ್ವಕವಾಗಿ ಅವಮಾನಿಸಿ, ಆ ಮೂಲಕ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವುದು) ಅಡಿ ದೂರು ದಾಖಲಿಸಲಾಗಿದ್ದು, ಚೇತನ್‌ ಅವರನ್ನು ಪ್ರಶ್ನಿಸಿದ ಬಳಿಕ ಬಂಧನದ ಕುರಿತು ನಿರ್ಧರಿಸಲಾಗುವುದು ಎಂದು ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.