“ಭ್ರಷ್ಟಾಚಾರವು ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ ಮತ್ತು ಕಾನೂನು ಸುವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯಗಳು ತಮ್ಮ ಹೊಣೆಗಾರಿಕೆಯನ್ನು ಖಾತ್ರಿಪಡಿಸಿಕೊಳ್ಳಬೇಕು” ಎಂದು ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠವು ಈಚೆಗೆ ಅಭಿಪ್ರಾಯಪಟ್ಟಿದೆ.
ಭ್ರಷ್ಟಾಚಾರದ ಆರೋಪದ ಮೇಲೆ ಗ್ರಾಮ ಲೆಕ್ಕಿಗನೊಬ್ಬನಿಗೆ ಕಡ್ಡಾಯ ನಿವೃತ್ತಿಗೊಳಿಸಿ ಹೊರಡಿಸಿದ್ದ ಆದೇಶ ರದ್ದುಗೊಳಿಸಿದ ಕೆಎಟಿ ಕ್ರಮ ಪ್ರಶ್ನಿಸಿ ಕಂದಾಯ ಇಲಾಖೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್ ಸುನೀಲ್ ದತ್ ಯಾದವ್ ಮತ್ತು ವಿಜಯಕುಮಾರ್ ಎ.ಪಾಟೀಲ್ ಅವರ ವಿಭಾಗೀಯ ಪೀಠವು ಪುರಸ್ಕರಿಸಿದೆ.
"ಭ್ರಷ್ಟಾಚಾರ ಆರೋಪದ ಮೇಲಿನ ದುರ್ನಡತೆ ಪ್ರಕರಣಗಳನ್ನು ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳು ಹಗುರವಾಗಿ ಪರಿಗಣಿಸಬಾರದು" ಎಂದಿದೆ.
“ಭ್ರಷ್ಟಾಚಾರವು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಿಗೆ ಬೆದರಿಕೆ ಹಾಕುವುದಲ್ಲದೆ, ಕಾನೂನಿನ ನಿಯಮ ಮತ್ತು ಅದರ ರಕ್ಷಕರಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳನ್ನು ದುರ್ಬಲಗೊಳಿಸುವ ಅಪಾಯವಿದೆ. ಲಂಚದ ಆರೋಪದ ಪ್ರಕರಣಗಳಲ್ಲಿ ನ್ಯಾಯಾಲಯಗಳು ಕೇವಲ ಮೂಕ ಪ್ರೇಕ್ಷಕರಾಗಿಬಾರದು. ಬದಲಾಗಿ ನ್ಯಾಯದ ದಂಡನೆಯನ್ನು ಎತ್ತಿಹಿಡಿಯಬೇಕಾಗಿದೆ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸಬೇಕಾದ ಕರ್ತವ್ಯ ಹೊಂದಿರುತ್ತವೆ” ಎಂದು ಪೀಠ ಹೇಳಿದೆ.
ಸಾಕ್ಷಿಗಳ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿದ ಪೀಠವು “ಆರೋಪಿಯು ಲೋಕಾಯುಕ್ತ ಬೆಲೆಗೆ ಬೀಳುವ ಮುನ್ನ ಮತ್ತು ಆನಂತರದ ದೂರು ಮತ್ತು ಮಹಜರ್ಗಳೊಂದಿಗೆ ಹೋಲಿಸಿದಾಗ ಮತ್ತು ಸಾಕ್ಷಿಗಳ ಹೇಳಿಕೆ ಪ್ರಕಾರ ಗ್ರಾಮ ಲೆಕ್ಕಿಗ ಹಣಕ್ಕೆ ಬೇಡಿಕೆಯೊಡ್ಡಿ, ಅಕ್ರಮ ಎಸಗಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಮತ್ತು ತನಿಖಾ ಅಧಿಕಾರಿ ಕಾನೂನಿನ ಪ್ರಕಾರ ಟ್ರ್ಯಾಪ್ ಕಾರ್ಯವಿಧಾನ ನಡೆಸಿದ್ದಾರೆ” ಎಂದು ಹೇಳಿದೆ.
“ಉದ್ಯೋಗದಾತರು ಉದ್ಯೋಗಿಯ ವಿರುದ್ಧ ಹೊರಿಸಲಾದ ಆರೋಪಗಳನ್ನು ಸಾಬೀತುಪಡಿಸಲು ಇಲಾಖಾ ಪ್ರಕ್ರಿಯೆಗಳಲ್ಲಿ ಮೌಖಿಕ ಮತ್ತು ಸಾಕ್ಷ್ಯಗಳ ಚಿತ್ರಣ ನೀಡಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ಸಾಕಷ್ಟು ಪುರಾವೆಗಳಿವೆ. ಇದರಿಂದ ಉದ್ಯೋಗಿಯ ವಿರುದ್ಧ ಹೊರಿಸಲಾದ ಆರೋಪಗಳು ಸಾಬೀತಾಗಿವೆ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ನೀಡಿರುವ ಕಾರಣಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ನ್ಯಾಯಾಲಯವು “ಈ ವಿಚಾರದಲ್ಲಿ ಕೆಎಟಿ ತಪ್ಪೆಸಗಿದೆ ಎನಿಸುತ್ತದೆ. ಕ್ರಿಮಿನಲ್ ಪ್ರಕರಣವೇ ಬೇರೆ ಮತ್ತು ಇಲಾಖಾ ತನಿಖೆಯೇ ಬೇರೆ. ಕೆಎಟಿ ಇಲಾಖಾ ತನಿಖೆಯಲ್ಲಿನ ಅಂಶಗಳನ್ನು ಪರಿಗಣಿಸುವಲ್ಲಿ ವಿಫಲವಾಗಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಕ್ರಿಮಿನಲ್ ವಿಚಾರಣೆಯ ವ್ಯಾಪ್ತಿ ಮತ್ತು ಇಲಾಖಾ ವಿಚಾರಣೆಯ ನಡುವಿನ ವ್ಯತ್ಯಾಸವನ್ನು ಪರಿಗಣಿಸದೆ ಕೆಎಟಿಯು ಗ್ರಾಮ ಲೆಕ್ಕಿಗರು ಕ್ರಿಮಿನಲ್ ಪ್ರಕರಣದಲ್ಲಿ ಖುಲಾಸೆಗೊಂಡಿದ್ದಾರೆ ಎಂಬ ಕಾರಣಕ್ಕಾಗಿ ಅರ್ಜಿಯನ್ನು ಮಾನ್ಯ ಮಾಡಿ ತನ್ನ ಆದೇಶ ರದ್ದುಗೊಳಿಸಲಾಗಿದೆ ಎಂದು ಸರ್ಕಾರ ವಾದಿಸಿತ್ತು.
ಪ್ರಕರಣದ ಹಿನ್ನೆಲೆ: 2011ರಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆಳವಡಿ ಗ್ರಾಮದಲ್ಲಿ ಗ್ರಾಮ ಲೆಕ್ಕಿಗನಾಗಿ ಶಿವನಗೌಡ ವಸಂತ್ ಕಾರ್ಯನಿರ್ವಹಿಸುತ್ತಿದ್ದರು. ಆಗ ಕಂದಾಯ ದಾಖಲೆಗಳನ್ನು ಸರಿಪಡಿಸಲು ಶಿವನಗೌಡ ₹2,500 ಲಂಚ ಕೇಳಿದ್ದರು ಎಂದು ವಿಜಯಕುಮಾರ್ ಹನಮಪ್ಪ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ನಡೆಸಿದಾಗ ಶಿವನಗೌಡ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಅವರ ವಿರುದ್ಧ ಜಿಲ್ಲಾಧಿಕಾರಿ ಇಲಾಖಾ ತನಿಖೆ ನಡೆಸಿದ್ದರು. ತನಿಖಾ ವರದಿಯನ್ನು 2019ರಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲಾಗಿತ್ತು. ಆನಂತರ ಸರ್ಕಾರವು ತನಿಖಾ ವರದಿಯನ್ನು ಆಧರಿಸಿ 2020ರ ಅಕ್ಟೋಬರ್ 21ರಂದು ಶಿವನಗೌಡ ಅವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿತ್ತು. ಅದನ್ನು ಪ್ರಶ್ನಿಸಿ ಅವರು ಕೆಎಟಿ ಮೊರೆ ಹೋಗಿದ್ದರು. ಕೆಎಟಿ ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು. ಹೀಗಾಗಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.