Bombay High Court at Goa, Oxygen supply
Bombay High Court at Goa, Oxygen supply 
ಸುದ್ದಿಗಳು

[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ನಿರ್ವಹಿಸಿದ ಪ್ರಕರಣಗಳ ವಿವರ

Bar & Bench

ಸುಪ್ರೀಂ ಕೋರ್ಟ್‌ನ ಅಡ್ವೊಕೇಟ್‌ ಆನ್‌ ರೆಕಾರ್ಡ್‌ನ ಐವರು ವಕೀಲರು ಕೋವಿಡ್‌ಗೆ ಬಲಿ

ಸುಪ್ರೀಂ ಕೋರ್ಟ್‌ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ನ (ಎಒಆರ್‌) ಐವರು ವಕೀಲರು ಕೋವಿಡ್‌ ಸೋಂಕಿಗೆ ಬಲಿಯಾಗಿದ್ದಾರೆ. ಶಿವಕುಮಾರ್‌ ಸೂರಿ, ಸತ್ಯ ಮಿತ್ರ ಗಾರ್ಗ್‌, ಮುಷ್ತಾಕ್‌ ಅಹ್ಮದ್‌, ಅಕ್ಷತ್‌ ಗೋಯಲ್‌ ಮತ್ತು ನೀರಜ್‌ ಅರೋರಾ ಸಾವನ್ನಪ್ಪಿದ ವಕೀಲರಾಗಿದ್ದಾರೆ.

Supreme Court, lawyers

ಹಿಂದೆ ಎಒಆರ್‌ನ ಇಮ್ತಿಯಾಜ್‌ ಅಹ್ಮದ್, ಬಿ ರಮಣ ಮೂರ್ತಿ ಮತ್ತು ರಿಷಿ ಜೈನ್‌ ಹಾಗೂ ವಕೀಲರಾದ ಕೇಶವ್‌ ಮೋಹನ್‌ ಮತ್ತು ಸಚಿನ್ ದಾಸ್‌ ಅವರು ಕೊರೊನಾಗೆ ತುತ್ತಾಗಿ ಸಾವನ್ನಪ್ಪಿದ್ದರು. ಮಾಜಿ ಅಟಾರ್ನಿ ಜನರಲ್‌ ಮತ್ತು ಸಾಲಿಸಿಟರ್‌ ಜನರಲ್‌ ಸೋಲಿ ಸೋರಾಬ್ಜಿ, ಹಿರಿಯ ವಕೀಲರಾದ ವಿ ಶೇಖರ್‌ ಮತ್ತು ಅನಿಪ್‌ ಸಾಚ್‌ತೆ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದರು.

ಗಂಗಾ ನದಿಯಲ್ಲಿ ತೇಲುತ್ತಿದ್ದ ಶವಗಳ ಕುರಿತು ಅಫಿಡವಿಟ್‌ ಸಲ್ಲಿಸಲು ಸೂಚಿಸಿದ ಪಟ್ನಾ ಹೈಕೋರ್ಟ್‌ ಆದೇಶ

ಗಂಗಾ ನದಿಯಲ್ಲಿ ತೇಲುತ್ತಿದ್ದ ಶವಗಳಿಗೆ ಸಂಬಂಧಿಸಿದಂತೆ ಎರಡು ದಿನಗಳ ಒಳಗೆ ಅಫಿಡವಿಟ್‌ ಸಲ್ಲಿಸುವಂತೆ ಬಕ್ಸರ್‌ ಮತ್ತು ಕೈಮುರ್‌ ಅಧಿಕಾರಿಗಳಿಗೆ ಪಟ್ನಾ ಹೈಕೋರ್ಟ್‌ ನಿರ್ದೇಶಿಸಿದೆ. ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಸಂಜಯ್‌ ಕರೋಲ್‌ ಮತ್ತು ನ್ಯಾ. ಎಸ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠವು ಬಿಹಾರ ಸರ್ಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಿದೆ.

Patna High Court, Covid-19

ಸಾವುಗಳ ಕುರಿತಾದ ದತ್ತಾಂಶವನ್ನು ರಾಜ್ಯ ಸರ್ಕಾರ ಸಲ್ಲಿಸಿಲ್ಲ ಎಂದು ನ್ಯಾಯಾಲಯವು ಆತಂಕ ವ್ಯಕ್ತಪಡಿಸಿದೆ. “ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ವ್ಯವಸ್ಥೆ ಕೊರತೆ, ಪರೀಕ್ಷೆ ಸಮಸ್ಯೆಯಿಂದ ಸಾವು ಸಂಭವಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಕುರಿತು ತಕ್ಷಣ ಕ್ರಮಕೈಗೊಳ್ಳಬೇಕಿದ್ದು, ರಾಜ್ಯ ಸರ್ಕಾರವು ತುರ್ತಾಗಿ ಈ ಕುರಿತಾದ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.

ಆಮ್ಲಜನಕ ಸಾಗಿಸಲು ಪರಿಣತ ಚಾಲಕರಿಲ್ಲ ಎಂದು ಜನರು ಸಾಯುವುದಕ್ಕೆ ಬಿಡಲಾಗದು: ಬಾಂಬೆ ಹೈಕೋರ್ಟ್‌

ಕೋವಿಡ್‌ ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆಯು ಸಮಯಕ್ಕೆ ಸರಿಯಾಗಿ ಮರುಪೂರಣವಾಗುವುದನ್ನು ಖಾತರಿಪಡಿಸುವಲ್ಲಿ ಸರ್ಕಾರದ ವ್ಯವಸ್ಥಾಪನಾ ಮತ್ತು ತಾಂತ್ರಿಕ ವೈಫಲ್ಯಗಳಿಗಾಗಿ ಕೋವಿಡ್‌ ರೋಗಿಗಳು ಪ್ರಾಣ ಕಳೆದುಕೊಳ್ಳುವಂತಾಗಬಾರದು ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಗುರುವಾರ ಹೇಳಿದೆ. ಆಮ್ಲಜನಕ ಕೊರತೆಯನ್ನು ರಾಜ್ಯ ಎದುರಿಸದಿದ್ದರೂ ಆಮ್ಲಜನಕ ಟ್ರಾಲಿಗಳನ್ನು ಸಾಗಿಸುವ ಟ್ರ್ಯಾಕ್ಟರುಗಳನ್ನು ಓಡಿಸಲು ಪರಿಣತ ಚಾಲಕರ ಅಲಭ್ಯತೆಯಂತಹ ವ್ಯವಸ್ಥಾಪನಾ ಸಮಸ್ಯೆಗಳಿಂದಾಗಿ ಆಸ್ಪತ್ರೆಗಳಲ್ಲಿ ಸಮಯಕ್ಕೆ ಮರುಪೂರಣಗೊಳಿಸುವುದು ಸಮಸ್ಯೆಗೆ ಕಾರಣ ಎಂದು ನ್ಯಾಯಾಲಯಕ್ಕೆ ತಿಳಿಸಿದ ನಂತರ ಪೀಠ ಮೇಲಿನಂತೆ ಹೇಳಿದೆ.

“ಇವೆಲ್ಲವೂ ತಾಂತ್ರಿಕ ಮತ್ತು ವ್ಯವಸ್ಥಾಪನಾ ಸಮಸ್ಯೆಗಳಾಗಿವೆ. ಅಧಿಕಾರದ ಜೊತೆಗೆ ಜವಾಬ್ದಾರಿಯೂ ಬರುತ್ತದೆ. ನಮ್ಮಲ್ಲಿ ಚಾಲಕರು ಅಥವಾ ತಂತ್ರಜ್ಞರು ಇಲ್ಲ, ನಮಗೆ ಸಾಮಗ್ರಿ ಇತ್ಯಾದಿ ಸಿಗಲಿಲ್ಲ ಎಂಬ ಕಾರಣಕ್ಕೆ ಜನರು ಸಾಯುವಂತಾಗಬಾರದು” ಎಂದು ನ್ಯಾಯಮೂರ್ತಿಗಳಾದ ಎಂ ಎಸ್‌ ಸೋನಕ್‌ ಮತ್ತು ಎನ್‌ ಡಬ್ಲ್ಯು ಸಾಂಬ್ರೆ ಅವರಿದ್ದ ವಿಭಾಗೀಯ ಪೀಠವು ಹೇಳಿದೆ.