Karnataka High Court 
ಸುದ್ದಿಗಳು

ಹೈಕೋರ್ಟ್‌ಗೆ ಸೋಮವಾರದಿಂದ ದಸರಾ ರಜೆ; ಸೆ.30, ಅ.3ರಂದು ರಜಾಕಾಲೀನ ಪೀಠಗಳಿಂದ ವಿಚಾರಣೆ

ಅಕ್ಟೋಬರ್‌ 7ರಂದು ವಾಲ್ಮೀಕಿ ಜಯಂತಿಯ ನಂತರ ಅಕ್ಟೋಬರ್‌ 8ರಂದು ಕಲಾಪಗಳು ಅಧಿಕೃತವಾಗಿ ಆರಂಭವಾಗಲಿವೆ. ಈ ನಡುವೆ ನ್ಯಾಯಾಲಯಕ್ಕೆ ಒಟ್ಟು 11 ದಿನಗಳು ರಜೆ ಇರಲಿದೆ.

Bar & Bench

ಕರ್ನಾಟಕ ಹೈಕೋರ್ಟ್‌ಗೆ ಸೆಪ್ಟೆಂಬರ್‌ 29ರಿಂದ ಅಕ್ಟೋಬರ್‌ 6ವರೆಗೆ ದಸರಾ ರಜೆ ಇರಲಿದೆ. ಆದರೆ, ಶನಿವಾರದಿಂದಲೇ (ಸೆ.27) ರಜೆ ಆರಂಭವಾಗಲಿದ್ದು, ಅಕ್ಟೋಬರ್‌ 7ರಂದು ವಾಲ್ಮೀಕಿ ಜಯಂತಿಯ ನಂತರ ಅಕ್ಟೋಬರ್‌ 8ರಂದು ಕಲಾಪಗಳು ಅಧಿಕೃತವಾಗಿ ಆರಂಭವಾಗಲಿವೆ. ಈ ನಡುವೆ ನ್ಯಾಯಾಲಯಕ್ಕೆ ಒಟ್ಟು 11 ದಿನಗಳು ರಜೆ ಇರಲಿದೆ.

ರಜಾ ಅವಧಿಯಲ್ಲಿ ಸೆಪ್ಟೆಂಬರ್‌ 30 ಮತ್ತು ಅಕ್ಟೋಬರ್‌ 3ರಂದು ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿಯಲ್ಲಿ ರಜಾಕಾಲೀನ ಪೀಠಗಳು ತುರ್ತು ಪ್ರಕರಣಗಳನ್ನು ವಿಚಾರಣೆ ನಡೆಸಲಿವೆ.

ಸೆಪ್ಟೆಂಬರ್‌ 30ರಂದು ಬೆಂಗಳೂರು ಪೀಠದಲ್ಲಿ ನ್ಯಾಯಮೂರ್ತಿಗಳಾದ ಸೂರಜ್‌ ಗೋವಿಂದರಾಜ್‌ ಮತ್ತು ಕೆ ರಾಜೇಶ್‌ ರೈ ಅವರು ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ. ನ್ಯಾಯಮೂರ್ತಿಗಳಾದ ವಿ ಶ್ರೀಶಾನಂದ ಮತ್ತು ಸಿ ಎಂ ಪೂಣಚ್ಚ ಅವರು ಏಕಸದಸ್ಯ ಪೀಠದಲ್ಲಿನ ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ. ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ಕ್ರಮವಾಗಿ ನ್ಯಾಯಮೂರ್ತಿಗಳಾದ ಅನಂತ್‌ ರಾಮನಾಥ್‌ ಹೆಗ್ಡೆ ಮತ್ತು ವಿಜಯಕುಮಾರ್‌ ಎ.ಪಾಟೀಲ್‌ ಹಾಗೂ ನ್ಯಾಯಮೂರ್ತಿಗಳಾದ ಅಶೋಕ್‌ ಎಸ್.‌ ಕಿಣಗಿ ಮತ್ತು ಟಿ ಎಂ ನದಾಫ್‌ ಅವರು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳು ಮತ್ತು ಆನಂತರ ಏಕಸದಸ್ಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.

ಅಕ್ಟೋಬರ್‌ 3ರಂದು ಬೆಂಗಳೂರು ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್‌ಪ್ರಸಾದ್‌ ಮತ್ತು ಕೆ ವಿ ಅರವಿಂದ್‌ ಅವರು ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ. ನ್ಯಾಯಮೂರ್ತಿಗಳಾದ ಎಂಜಿಎಸ್‌ ಕಮಲ್‌ ಮತ್ತು ಸಿ ಎಂ ಜೋಶಿ ಅವರು ಏಕಸದಸ್ಯ ಪೀಠದಲ್ಲಿನ ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ. ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ಕ್ರಮವಾಗಿ ನ್ಯಾಯಮೂರ್ತಿಗಳಾದ ಆರ್‌ ನಟರಾಜ್‌ ಮತ್ತು ಎಸ್‌ ರಾಚಯ್ಯ ಹಾಗೂ  ನ್ಯಾಯಮೂರ್ತಿಗಳಾದ ಎಂ ಐ ಅರುಣ್‌ ಮತ್ತು ಉಮೇಶ್‌ ಎಂ ಅಡಿಗ ಅವರು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳು ಮತ್ತು ಆನಂತರ ಏಕಸದಸ್ಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ ಎಂದು ಹೈಕೋರ್ಟ್‌ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Dasara Vacation.pdf
Preview