A1
A1
ಸುದ್ದಿಗಳು

ರಾಷ್ಟ್ರಪತಿ ಅಭ್ಯರ್ಥಿ ವಿರುದ್ಧ ಟ್ವೀಟ್: ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

Bar & Bench

ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರ ಹೆಸರನ್ನು ಸೂಚಿಸಿದ ಸಂದರ್ಭದಲ್ಲಿ ಅವರ ಕುರಿತು ಟ್ವೀಟ್‌ ಮಾಡಿದ್ದ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಮ್‌ ಗೋಪಾಲ್‌ ವರ್ಮ ವಿರುದ್ಧ ಮುಂಬೈ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.

"ದ್ರೌಪದಿ ರಾಷ್ಟ್ರಪತಿಯಾದರೆ ಪಾಂಡವರು ಯಾರು? ಮತ್ತು ಮುಖ್ಯವಾಗಿ ಕೌರವರು ಯಾರು?" ಎಂದು ಜೂನ್ 22ರಂದು ವರ್ಮಾ ಟ್ವೀಟ್ ಮಾಡಿದ್ದರು. ಎರಡು ದಿನಗಳ ಬಳಿಕ "ದ್ರೌಪದಿ ನನ್ನ ಹೆಚ್ಚಿನ ಪಾತ್ರವಾಗಿದ್ದು ಆ ಹೆಸರು ಅಪರೂಪವಾಗಿರುವುದರಿಂದ ಅದಕ್ಕೆ ಸಂಬಂಧಿಸಿದ ಪಾತ್ರಗಳನ್ನು ನೆನಪಿಸಿದ್ದೆ ಅಷ್ಟೇ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿರಲಿಲ್ಲ" ಎಂಬ ಸ್ಪಷ್ಟನೆ ನೀಡಿದ್ದರು.

ಜುಲೈ 14 ರಂದು ಸುಭಾಸ್ ರಾಜೋರಾ ಎಂಬವವರು ವರ್ಮಾ ವಿರುದ್ಧ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್‌ 499 (ಮಾನನಷ್ಟ), 504 (ಶಾಂತಿಗೆ ಭಂಗ ತರುವ ಉದ್ದೇಶದ ಅಪಮಾನ), 506ರ (ಕ್ರಿಮಿನಲ್ ಬೆದರಿಕೆ) ಪ್ರಕಾರ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ವರ್ಮಾ "ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ” ಎಂದು ದೂರುದಾರರ ಪರ ವಕೀಲ ಡಿ ವಿ ಸರೋಜ್ ಅವರ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಜಾರ್ಖಂಡ್‌ನ ಹಿರಿಯ ರಾಜಕಾರಣಿ ಮತ್ತು ಮಾಜಿ ರಾಜ್ಯಪಾಲೆ ಮುರ್ಮು ವಿರುದ್ಧ ವರ್ಮಾ ಉದ್ದೇಶಪೂರ್ವಕವಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದು ಇದು ಆಕ್ಷೇಪಾರ್ಹ ಮತ್ತು ಅಸಹ್ಯಕರವಾಗಿದೆ. ರಾಜಕಾರಣಿ ದ್ರೌಪದಿ ಅವರ ವ್ಯಕ್ತಿತ್ವ ಮತ್ತು ಖ್ಯಾತಿಯನ್ನು ಹಾಳುಮಾಡುವ ಉದ್ದೇಶ ಇದರ ಹಿಂದಿದೆ. ಸಿನಿಮಾ ರಂಗದಲ್ಲಿ ಖ್ಯಾತಿ ಮತ್ತು ಹಣ ಗಳಿಸುವ ಸಲುವಾಗಿ ಟ್ವೀಟ್‌ ಮಾಡಲಾಗಿದೆ. ವರ್ಮ ಅವರ ಟ್ವೀಟ್‌ ರಾಷ್ಟ್ರಪತಿ ಅಭ್ಯರ್ಥಿ ಮುರ್ಮು ಅವರಿಗೆ ಅಗೌರವ ತರುವ ಉದ್ದೇಶ ಹೊಂದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ರಾಜೋರಾ ನ್ಯಾಯಾಲಯದ ಮೆಟ್ಟಿಲೇರಿರುವುದಾಗಿ ಅರ್ಜಿದಾರರು ಹೇಳಿದ್ದಾರೆ. ಜುಲೈ 14ರಂದು ಪ್ರಕರಣ ದಾಖಲಾಗಿದ್ದು, ಅಕ್ಟೋಬರ್ 11ಕ್ಕೆ ವಿಚಾರಣೆ ನಡೆಯಲಿದೆ.