Medical Education and Health Minister Dr. K Sudhakar
Medical Education and Health Minister Dr. K Sudhakar Facebook
ಸುದ್ದಿಗಳು

ಮಾನಹಾನಿ ಹೇಳಿಕೆ: ಸಚಿವ ಸುಧಾಕರ್‌, ಎರಡು ಮಾಧ್ಯಮ ಸಂಸ್ಥೆಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ

Bar & Bench

ಸಾಮಾಜಿಕ ಕಾರ್ಯಕರ್ತ ಆರ್‌ ಆಂಜನೇಯ ರೆಡ್ಡಿ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಮತ್ತು ಅದನ್ನು ಪ್ರಕಟಿಸಿದ ಎರಡು ಪ್ರಮುಖ ಮಾಧ್ಯಮಗಳ ಸಂಪಾದಕರ ವಿರುದ್ಧ ಕ್ರಿಮಿನಲ್‌ ಮಾನಹಾನಿ ಪ್ರಕರಣ ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ಆದೇಶ ಮಾಡಿದೆ.

ಆಂಜನೇಯ ರೆಡ್ಡಿ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ಮ್ಯಾಜಿಸ್ಟ್ರೇಟ್‌) ನ್ಯಾಯಾಧೀಶೆ ಜೆ ಪ್ರೀತ್‌ ಅವರು ಆದೇಶ ಮಾಡಿದ್ದಾರೆ.

“ಡಾ. ಕೆ ಸುಧಾಕರ್‌, ಉದಯವಾಣಿ ಮತ್ತು ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 499, 501 ಜೊತೆಗೆ ಸೆಕ್ಷನ್‌ 34ರ ಅಡಿ ಕ್ರಿಮಿನಲ್‌ ಪ್ರಕರಣ ದಾಲಿಸಬೇಕು” ಎಂದು ಕಚೇರಿಗೆ ನ್ಯಾಯಾಲಯವು ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: 2019ರ ಜೂನ್‌ 20ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಸುಧಾಕರ್‌ ಅವರನ್ನು ನೇಮಕ ಮಾಡಿದ್ದನ್ನು ಆಂಜನೇಯ ರೆಡ್ಡಿ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಜೂನ್‌ 27ರಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಮರಳುಕುಂಟೆ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸುಧಾಕರ್‌ ಅವರು ತಮ್ಮ ವಿರುದ್ಧ “ಕಾನೂನು ಹೋರಾಟದಲ್ಲಿ ಜಯ ನನ್ನದೇ: ಸುಧಾಕರ್.‌ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೇಮಕ: ರೈತರಿಗೆ ಕಳ್ಳಭಟ್ಟಿ ಕುಡಿಸಿ ಜೈಲು ಸೇರಿದ ವ್ಯಕ್ತಿ ನನ್ನ ವಿರುದ್ಧ ಹೋರಾಟ” ಎಂಬ ಮಾನಹಾನಿ ಹೇಳಿಕೆ ನೀಡಿದ್ದರು. ಇದನ್ನು 2019ರ ಜೂನ್‌ 28ರಂದು ವಿಜಯ ಕರ್ನಾಟಕ ಮತ್ತು ಉದಯವಾಣಿ ದಿನಪತ್ರಿಕೆಗಳು ವರದಿ ಮಾಡಿದ್ದವು ಎಂದು ವಿವರಿಸಲಾಗಿದೆ.

ತಮ್ಮ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲು ಸುಧಾಕರ್‌ ಅವರು ಮಾನಹಾನಿ ಹೇಳಿಕೆ ನೀಡಿದ್ದು, ಉದ್ದೇಶಪೂರ್ವಕವಾಗಿ ಮಾನಹಾನಿ ಮಾಡಿದ್ದರು. ಇದರ ಸತ್ಯಾಸತ್ಯತೆ ಪರಿಶೀಲಿಸದೇ ಉದಯವಾಣಿ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳನ್ನು ಅದನ್ನು ವರದಿ ಮಾಡಿವೆ. ಈ ಮೂಲಕ ಶಾಶ್ವತ ಹಾನಿ ಮಾಡುವ ಉದ್ದೇಶ ಹೊಂದಲಾಗಿದೆ. ಈ ಸಂಬಂಧ ಬೇಷರತ್‌ ಕ್ಷಮೆ ಕೇಳುವಂತೆ ನೋಟಿಸ್‌ ಕಳುಹಿಸಿದ್ದರೂ ಅದಕ್ಕೆ ಪ್ರತಿಕ್ರಿಯಿಸಿಲ್ಲ. ಹೀಗಾಗಿ, ಖಾಸಗಿ ದೂರು ದಾಖಲಿಸಲಾಗಿದೆ ಎಂದು ವಿವರಿಸಿದ್ದರು.