Mohammed Zubair
Mohammed Zubair Twitter
ಸುದ್ದಿಗಳು

ಪತ್ರಕರ್ತ ಮೊಹಮ್ಮದ್ ಜುಬೈರ್‌ಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ: 14 ದಿನಗಳ ಕಾಲ ನ್ಯಾಯಾಂಗ ಬಂಧನ

Bar & Bench

ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಪ್ರಚೋದನೆಗೆ ಕಾರಣವಾದ ಪ್ರಕರಣದಲ್ಲಿ ಪತ್ರಕರ್ತ, ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ. 2018ರಲ್ಲಿ ಅವರು ಮಾಡಿದ್ದ ಟ್ವೀಟ್ ಒಂದನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು.

ಜುಬೈರ್‌ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸುವಂತೆ ದೆಹಲಿ ಪೊಲೀಸರು ಮಾಡಿದ ಮನವಿಗೆ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧಾ ಸರ್ವರಿಯಾ ಸಮ್ಮತಿಸಿದರು.

ಹಿಂದೂ ದೇವರನ್ನು ಅವಮಾನಿಸುವ ಉದ್ದೇಶದಿಂದ ಜುಬೈರ್ ಆಕ್ಷೇಪಾರ್ಹ ಚಿತ್ರವನ್ನು ಟ್ವೀಟ್ ಮಾಡಿದ್ದರು ಎಂದು ಆರೋಪಿಸಿ ಹನುಮಾನ್ ಭಕ್ತ್ ಎಂಬ ಟ್ವಿಟರ್ ಹ್ಯಾಂಡಲ್‌ ಆರೋಪಿಸಿತ್ತು. ಇದನ್ನು ಆಧರಿಸಿ ಜುಬೈರ್ ವಿರುದ್ಧ ಪ್ರಕರಣವ ದಾಖಲಿಸಲಾಗಿತ್ತು.

ಇಂದು ಪ್ರಕರಣದ ವಿಚಾರಣೆ ನಡೆದಾಗ ದೆಹಲಿ ಪೊಲೀಸರ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅತುಲ್‌ ಶ್ರೀವಾಸ್ತವ, ಜುಬೈರ್ ಪರವಾಗಿ ವಕೀಲೆ ವೃಂದಾ ಗ್ರೋವರ್ ವಾದ ಮಂಡಿಸಿದರು. ವಾದದ ಪ್ರಮುಖಾಂಶಗಳು ಹೀಗಿವೆ:

ಎಸ್‌ಪಿಪಿ ವಾದ

  • ಹೊಸ ಆರೋಪಗಳ ದೃಷ್ಟಿಯಿಂದ ಇನ್ನೂ 14 ದಿನಗಳ ಜುಬೈರ್‌ ಅವರನ್ನು ಕಸ್ಟಡಿಗೆ ನೀಡಬೇಕು.

  • ಜುಬೈರ್‌ ಬೇರೆ ದೇಶದ ವ್ಯಕ್ತಿಯಿಂದ ಕೂಡ ದೇಣಿಗೆಯನ್ನು ಸ್ವೀಕರಿಸಿದ್ದರೆ ಅದು ಕಳವಳಕಾರಿ.

  • ದೂರವಾಣಿ ಕರೆ ದಾಖಲೆಗಳ ಪ್ರಕಾರ ಪಾಕಿಸ್ತಾನ, ಸಿರಿಯಾ, ಆಸ್ಟ್ರೇಲಿಯಾ, ಇತ್ಯಾದಿ ದೇಶಗಳಿಂದ ರೇಜರ್ ಪೇ ಮೂಲಕ ಜುಬೈರ್‌ ದೇಣಿಗೆ ಪಡೆದಿದ್ದಾರೆ. ಹೀಗಾಗಿ ತನಿಖೆಯ ಅಗತ್ಯವಿದೆ.

  • ನೋಂದಾಯಿತ ಮಾಧ್ಯಮವಾಗಿದ್ದರೂ ಕೂಡ ವಿದೇಶಿ ವ್ಯಕ್ತಿಯಿಂದ ಹಣ ತೆಗೆದುಕೊಳ್ಳುವುದಕ್ಕೆ ಅನುಮತಿಯ ಅಗತ್ಯವಿದೆ.

  • ಸಿನಿಮಾದಲ್ಲಿ ಅನೇಕ ಅನೇಕ ಅಸಭ್ಯ ವಿಷಯಗಳಿರುತ್ತವೆ, ನಾವು ನಮಗೆ ಬೇಕಾದುದನ್ನು ಅಪ್‌ಲೋಡ್ ಮಾಡಬಹುದೇ?

  • ಇದು ಕಾಲಮಿತಿಯ ಪ್ರಕರಣವಲ್ಲ. ಇದು ನಿರಂತರ ಅಪರಾಧವಾಗಿದೆ. 2018ರಲ್ಲಿ ಜುಬೈರ್‌ ಮಾಡಿದ ಟ್ವೀಟ್ ಇನ್ನೂ ಇದೆ.

  • ಹೆಚ್ಚಿನ ವಿವರಗಳು ಹೊರಬರಬೇಕಿರುವುದರಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಬಾರದು.

  • ಎಫ್‌ಐಆರ್‌ ದಾಖಲಾದ ನಂತರ ಫೋನ್‌ನಲ್ಲಿರುವುದನ್ನು ಅಳಿಸಿಹಾಕಲಾಗಿದೆ. ಇದು ಮುಖ್ಯವಾದ ಸಂಗತಿ.

ವೃಂದಾ ಗ್ರೋವರ್‌ ಸಮರ್ಥನೆ

  • ಇಡೀ ಆರೋಪ ಪ್ರಕ್ರಿಯೆ ಸಂಪೂರ್ಣ ಅಸಮರ್ಪಕವಾಗಿದೆ.

  • ಇದೆಲ್ಲವೂ 2018 ರಿಂದ ಆರಂಭವಾಗಿದೆ. ಕಿರುಕುಳ ನೀಡುವ ಸಲುವಾಗಿಯೇ ಪೊಲೀಸರು ನನ್ನ ಅರ್ಜಿದಾರರನ್ನು ಕರೆದಿದ್ದಾರೆ.

  • ಸಿಮ್‌ ಅಥವಾ ಫೋನ್‌ ಬದಲಿಸುವುದು ಅಪರಾಧವೇ? ಫೋನ್ ಫಾರ್ಮ್ಯಾಟ್ ಮಾಡುವುದು ಅಪರಾಧವಲ್ಲ.

  • ಚತುರತೆಯಿಂದ ಯಾರದೋ ಮಾನ ಹಾನಿ ಮಾಡಲಾಗದು.

  • ಜೂನ್‌ 20ರ ಎಫ್‌ಐಆರ್‌ ಏಕೆ ದುರುದ್ದೇಶಪೂರ್ವಕ ಎಂದರೆ ಜೂನ್ 24 ರಂದು ಸೆಕ್ಷನ್ 41 ಎ ಅಡಿ ನೋಟಿಸ್‌ ನೀಡಲಾಗಿದೆ. ನಂತರ (ಬೇರೊಂದು ಪ್ರಕರಣದಲ್ಲಿ) ತನಿಖೆಗೆ ಬರಬೇಕೆಂದು ಜುಬೈರ್‌ಗೆ ಸೂಚಿಸಲಾಗಿದೆ.

  • ಇದೊಂದು ಸಂಬಂಧವಿಲ್ಲದ ವಿಚಾರಣೆ. ಕಾನೂನನಡಿ ಇಂತಹ ವಿಚಾರಣೆ ನಿಷಿದ್ಧ. ಇನ್ನೊಂದು ಪ್ರಕರಣವನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

  • ಚಿತ್ರದ ಬಗ್ಗೆ ಆಕ್ಷೇಪಗಳಿದ್ದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ವಿರುದ್ಧ ಪ್ರಕರಣ ದಾಖಲಿಸಬೇಕು.

  • ಹಾರ್ಡ್ ಡಿಸ್ಕ್‌ಗಳನ್ನು ತಿರುಚಿರುವ ಸಾಧ್ಯತೆ ಇದೆ. ಈ ಬಗ್ಗೆ ಆತಂಕಗಳಿವೆ.

  • ಜುಬೈರ್‌ ಮಾಡಿರುವ ಟ್ವೀಟ್‌ 2018ಕ್ಕೆ ಸಂಬಂಧಿಸಿದ್ದು, ಅದರೊಂದಿಗೆ ಪ್ರಕಟಿಸಿರುವ ಚಿತ್ರ ಚಲನಚಿತ್ರವೊಂದಕ್ಕೆ ಸಂಬಂಧಿಸಿದ್ದು. ಹಾಸ್ಯ ದೃಶ್ಯವೊಂದಕ್ಕೆ ಸಂಬಂಧಿಸಿದ ಚಿತ್ರವನ್ನು 2018 ರಲ್ಲಿ ಇಂಡಿಯನ್‌ ಎಕ್ಸ್‌ಪ್ರೆಸ್‌ ದಿನಪತ್ರಿಕೆ ಕೂಡ ಪ್ರಕಟಿಸಿತ್ತು. ಹೀಗಾಗಿ ಜುಬೈರ್‌ ವಿರುದ್ಧ ಕೈಗೊಂಡಿರುವ ಕಾನೂನು ಕ್ರಮ ದುರುದ್ದೇಶಪೂರ್ವಕ.

  • ಸೆಕ್ಷನ್ 153 ಎ ಅಡಿಯಲ್ಲಿ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಪ್ರಚೋದನೆ ಕೆಲಸ ನಡೆದಿಲ್ಲ. ಎರಡು ಧಾರ್ಮಿಕ ಗುಂಪುಗಳು ಯಾವುವು ಎಂಬುದನ್ನು ವಿವರಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ.

  • ಟ್ವೀಟ್‌ನಲ್ಲಿ ಯಾವುದೇ ಧಾರ್ಮಿಕ ಉಲ್ಲೇಖ ಇಲ್ಲ.

  • ಜುಬೈರ್‌ ಅವರ ಕದ್ದ ಫೋನ್‌ನಿಂದ ಟ್ವೀಟ್‌ ಮಾಡಲಾಗಿದೆ. ಪೊಲೀಸರು ಜುಬೈರ್‌ ಅವರಿಂದ ವಶಪಡಿಸಿಕೊಂಡಿರುವ ಪೋನ್‌ನಲ್ಲಿ ಅವರು ಟ್ವೀಟ್‌ ಮಾಡಿರಲಿಲ್ಲ.