Ashwini Upadhyay and Patiala House Court
Ashwini Upadhyay and Patiala House Court 
ಸುದ್ದಿಗಳು

ಕೋಮುದ್ವೇಷ ಘೋಷಣೆ ಪ್ರಕರಣ: ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ್‌ಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

Bar & Bench

ದೆಹಲಿಯಲ್ಲಿ ಭಾನುವಾರ ನಡೆದ ಸಮಾವೇಶವೊಂದರಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳು ಕೇಳಿಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಬಿಜೆಪಿಯ ಮುಖಂಡ, ವಕೀಲ ಅಶ್ವನಿ ಉಪಾಧ್ಯಾಯ ಅವರಿಗೆ ದೆಹಲಿ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.

ಉಪಾಧ್ಯಾಯ ಅವರಿಗೆ ಜಾಮೀನು ನೀಡಿದ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಉದ್ಭವ್ ಕುಮಾರ್ ಜೈನ್‌ ಅವರು “ವಿಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಉದ್ದೀಪಿಸುವ ಸಲುವಾಗಿ ಆರೋಪಿಯ ಸಮ್ಮುಖದಲ್ಲಿ ಅಥವಾ ಅವರ ಚಿತಾವಣೆಯಿಂದ ದ್ವೇಷಭಾಷಣ ಮಾಡಲಾಗಿದೆ ಎನ್ನುವ ಹೇಳಿಕೆಗಳ ಹೊರತಾಗಿ ಅದನ್ನು ನಿರೂಪಿಸಲು ಅಗತ್ಯವಾದ ಯಾವುದೇ ಅಧಿಕೃತ ದಾಖಲೆಗಳು ಇಲ್ಲ” ಎಂದರು.

ಉಳಿದಂತೆ, ಕೋವಿಡ್‌ ಸಂದರ್ಭದಲ್ಲಿ ಸಮಾವೇಶವನ್ನು ಆಯೋಜಿಸಿದ್ದರ ಬಗ್ಗೆಯೂ ಸಹ ನ್ಯಾಯಾಲಯವು ಕೋವಿಡ್‌ ಮಾರ್ಗಸೂಚಿಗಳ ಉಲ್ಲಂಘನೆಯು ಜಾಮೀನು ವ್ಯಾಪ್ತಿಗೆ ಒಳಪಟ್ಟದ್ದಾಗಿದೆ. ಈ ಬಗ್ಗೆ ವಿಚಾರಣಾ ನ್ಯಾಯಾಲಯವು ಅರ್ಹತೆಯ ಆಧಾರದಲ್ಲಿ ಪ್ರಕರಣವನ್ನು ಪರಿಗಣಿಸಬಹುದು ಎಂದಿತು.

ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಸಮಾವೇಶದಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಲಾಗಿದ್ದ ಘಟನೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಮಂಗಳವಾರ ಅಶ್ವಿನಿ ಉಪಾಧ್ಯಾಯ ಸೇರಿದಂತೆ ನಾಲ್ವರಿಗೆ ಎರಡು ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಇತರ ಇಬ್ಬರು ಆರೋಪಿಗಳನ್ನು ಒಂದು ದಿನದ ಮಟ್ಟಿಗೆ ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು.