Umar Khalid and aarogya setu
Umar Khalid and aarogya setu 
ಸುದ್ದಿಗಳು

ದೆಹಲಿ ಗಲಭೆ ಪ್ರಕರಣ: ಉಮರ್‌ ಖಾಲಿದ್‌ಗೆ ದೆಹಲಿ ನ್ಯಾಯಾಲಯದಿಂದ ಜಾಮೀನು; ಆರೋಗ್ಯ ಸೇತು ಆ್ಯಪ್ ಅಳವಡಿಕೆಗೆ ನಿರ್ದೇಶನ

Bar & Bench

ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಗುರುವಾರ ಜೆಎನ್‌ಯು ಮಾಜಿ ವಿದ್ಯಾರ್ಥಿ ಮುಖಂಡ ಉಮರ್‌ ಖಾಲಿದ್‌ಗೆ ಜಾಮೀನು ಮಂಜೂರು ಮಾಡಿದೆ. ಖಜೂರಿ ಖಾಸ್‌ ಪೊಲೀಸ್ ಠಾಣೆಯಲ್ಲಿ ಖಾಲಿದ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು (ರಾಜ್ಯ ವರ್ಸಸ್‌ ಉಮರ್‌ ಖಾಲಿದ್‌).

“ಸದರಿ ಪ್ರಕರಣದಲ್ಲಿ ವಿಚಾರಣೆ ಮುಕ್ತವಾಗಿದ್ದು, ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದೆ. ಪ್ರಕರಣದ ವಿಚಾರಣೆಯು ಸಾಕಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅರ್ಜಿದಾರರು 01.10.2020ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದವರನ್ನು ಬಂಧಿಸುವವರೆಗೆ ಮನವಿದಾರರನ್ನು ಅನಿರ್ದಿಷ್ಟಾವಧಿಗೆ ಸೆರೆವಾಸದಲ್ಲಿ ಇಡಲಾಗದು” ಎಂದು ನ್ಯಾಯಾಲಯ ಹೇಳಿದೆ.

ಬಂಧನ ಮುಕ್ತಗೊಂಡ ತಕ್ಷಣ ಮೊಬೈಲ್‌ಗೆ ಆರೋಗ್ಯ ಸೇತು ಅಪ್ಲಿಕೇಶನ್‌ ಅಳವಡಿಸಿಕೊಳ್ಳುವುದು, ಸಾಕ್ಷ್ಯ ನಾಶ ಅಥವಾ ಸಾಕ್ಷಿ ನುಡಿಯುವವರನ್ನು ಪ್ರಭಾವಿಸಬಾರದು. ತಾನು ನೆಲೆಸುವ ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು. ಪ್ರತಿ ವಿಚಾರಣೆಯ ಸಂದರ್ಭದಲ್ಲಿ ಖುದ್ದು ಹಾಜರಿರಬೇಕು ಮತ್ತು ಖಜೂರಿ ಖಾಸ್‌ ಪಿ ಎಸ್‌ನ ಎಸ್‌ಎಚ್‌ಒಗೆ ಮೊಬೈಲ್‌ ನಂಬರ್‌ ನೀಡಬೇಕು ಎಂಬ ಷರತ್ತುಗಳನ್ನು ವಿಧಿಸಿರುವ ಕರಕರಡೋಮ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ವಿನೋದ್‌ ಯಾದವ್‌ ಅವರು 20 ಸಾವಿರ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್‌ ಹಾಗೂ ಅಷ್ಟೇ ಮೊತ್ತವನ್ನು ಒಳಗೊಂಡ ಒಬ್ಬರ ಖಾತರಿ ನೀಡುವಂತೆ ಖಾಲಿದ್‌ಗೆ ನಿರ್ದೇಶಿಸಿದ್ದು, ಜಾಮೀನು ಮಂಜೂರು ಮಾಡಿದ್ದಾರೆ.

ಚಾಂದ್‌ ಬಾಗ್‌ ಪುಲಿಯಾ ಸಮೀಪದ ಕರವಾಲ್‌ ನಗರ ರಸ್ತೆಯಲ್ಲಿ ಕಳೆದ ವರ್ಷದ ಫೆಬ್ರವರಿ 24ರಂದು ಘಟಿಸಿದ ಗಲಭೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿದ್ದ ಪ್ರಕರಣ ಇದಾಗಿದೆ.