BRS leader K Kavitha
BRS leader K Kavitha X (formerly known as Twitter)
ಸುದ್ದಿಗಳು

ಬಿಆರ್‌ಎಸ್‌ ನಾಯಕಿ ಕೆ ಕವಿತಾರನ್ನು ಏಪ್ರಿಲ್‌ 15ರವರೆಗೆ ಸಿಬಿಐ ಕಸ್ಟಡಿಗೆ ನೀಡಿದ ದೆಹಲಿ ನ್ಯಾಯಾಲಯ

Bar & Bench

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ನಾಯಕಿ ಕೆ ಕವಿತಾ ಅವರನ್ನು ದೆಹಲಿ ನ್ಯಾಯಾಲಯವು ಶುಕ್ರವಾರ ಕೇಂದ್ರೀಯ ತನಿಖಾ ದಳದ (ಸಿಬಿಐ) ವಶಕ್ಕೆ ನೀಡಿದೆ.

ರೋಸ್‌ ಅವೆನ್ಯೂ ನ್ಯಾಯಾಲಯಗಳ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಈ ಸಂಬಂಧ ಆದೇಶ ಹೊರಡಿಸಿದರು. ಸಿಬಿಐ ಈ ಹಿಂದೆ ಬಿಆರ್‌ಎಸ್ ನಾಯಕಿಯನ್ನು ಐದು ದಿನಗಳ ಕಸ್ಟಡಿಗೆ ಕೋರಿತ್ತು, ಪ್ರಕರಣದಲ್ಲಿ ಆಕೆಯ ವಿಚಾರಣೆಯ ನಂತರ ಕೇಂದ್ರೀಯ ಸಂಸ್ಥೆ ಗುರುವಾರ ಆಕೆಯನ್ನು ಬಂಧಿಸಿತ್ತು.

ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದ ಕವಿತಾ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ.

ಆಮ್ ಆದ್ಮಿ ಪಕ್ಷಕ್ಕೆ (ಎಪಿಪಿ) ಕಿಕ್‌ಬ್ಯಾಕ್ ರೂಪದಲ್ಲಿ ₹ 100 ಕೋಟಿ ಲಂಚ ನೀಡಲಾಗಿದೆ ಎಂದು ಕವಿತಾ ಅವರ ಅಕೌಂಟೆಂಟ್ ಬುಚ್ಚಿ ಬಾಬು ಅವರು ಪೋನ್‌ನಲ್ಲಿ ಹರಿದಾಡಿರುವ ಸಂದೇಶಗಳು ಮತ್ತು ಭೂ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳ ಕುರಿತು ಕವಿತಾ ಅವರ ಪ್ರಶ್ನಿಸಬೇಕಿದೆ ಎಂದು ತನಿಖಾ ಸಂಸ್ಥೆ ಕವಿತಾ ಅವರನ್ನು ವಿಚಾರಣೆಗೆ ಪಡೆದಿತ್ತು.

ಇಂದು ನ್ಯಾಯಾಲಯದಲ್ಲಿ ಕವಿತಾ ಅವರನ್ನು ವಶಕ್ಕೆ ಕೋರಿದ ಸಿಬಿಐ, ಕವಿತಾ ಅವರು ಅಬಕಾರಿ ನೀತಿ ಹಗರಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳಲು ಪ್ರಭಾವ ಬೀರುವ ಸಲುವಾಗಿ ಹಣವನ್ನು ಸಿದ್ಧಪಡಿಸುವಲ್ಲಿ ಕವಿತಾ ಬೃಹತ್‌ ಪಾತ್ರ ವಹಿಸಿದ್ದರು ಎಂದು ಆಪಾದಿಸಿತು. ಅಲ್ಲದೆ, ಕವಿತಾ ಅವರು ಇಂಡೋಸ್ಪಿರಿಟ್‌ ಎನ್ನುವ ಸಗಟು ಮದ್ಯ ಕಂಪೆನಿಯಲ್ಲಿ ಬೇನಾಮಿ ಪಾಲುದಾರಿಕೆ ಹೊಂದಿದ್ದಾರೆ ಎಂದು ಆರೋಪಿಸಿತು. ಕವಿತಾ ಅವರು ವಿಚಾರಣೆ ವೇಳೆ ಸ್ಪಷ್ಟ ಉತ್ತರ ನೀಡದೆ ನುಣುಚಿಕೊಳ್ಳುತ್ತಿದ್ದರು ಎಂದು ಆಕ್ಷೇಪಿಸಿತು.