Manish Sisodia with Rouse Avenue Courtfacebook
Manish Sisodia with Rouse Avenue Courtfacebook 
ಸುದ್ದಿಗಳು

ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಮಾರ್ಚ್ 4ರವರೆಗೆ ಸಿಬಿಐ ವಶಕ್ಕೆ

Bar & Bench

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ದೆಹಲಿ ನ್ಯಾಯಾಲಯ ಮಾರ್ಚ್ 4 ರವರೆಗೆ ಸಿಬಿಐ ವಶಕ್ಕೆ ನೀಡಿದೆ.  ರೌಸ್‌ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ಎಂ ಕೆ ನಾಗ್‌ಪಾಲ್‌ ಅವರು ಈ ಆದೇಶ ನೀಡಿದ್ದಾರೆ.

ಸಿಬಿಐ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಪಂಕಜ್ ಗುಪ್ತಾ ಅವರು ಸಿಸೋಡಿಯಾ ಅವರನ್ನು ಐದು ದಿನಗಳ ಸಿಬಿಐ ವಶಕ್ಕೆ ನೀಡುವಂತೆ ಕೋರಿದರು. ಅಬಕಾರಿ ನೀತಿ ಬದಲಿಸಲು ಹೊಸ ಸಂಪುಟ ಟಿಪ್ಪಣಿ ಸಿದ್ಧಪಡಿಸುವಂತೆ ಸಿಸೋಡಿಯಾ ಅವರು ಕಾರ್ಯದರ್ಶಿಗೆ ಮೌಖಿಕವಾಗಿ ಸೂಚಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಗುಪ್ತಾ ವಾದಿಸಿದರು.

"ಅಬಕಾರಿ ನೀತಿಗಾಗಿ ರಚಿಸಲಾಗಿದ್ದ ಸಚಿವ ಸಂಪುಟದ ಗುಂಪಿಗೆ ಸಿಸೋಡಿಯಾ ಅವರು ಮುಖ್ಯಸ್ಥರಾಗಿದ್ದರು. ಲಾಭದ ಪ್ರಮಾಣವನ್ನು ಶೇ.5 ರಿಂದ ಶೇ.12ಕ್ಕೆ ಹೆಚ್ಚಿಸಿರುವುದಕ್ಕೆ ಕಾರಣ ವಿವರಿಸುವಲ್ಲಿ ಅವರ ಅಸಫಲರಾಗಿದ್ದಾರೆ. ಇಂತಹ ಬದಲಾವಣೆ  ಏಕೆ ಮಾಡಲಾಯಿತು ಎಂದು ಅವರಿಗೆ ವಿವರಿಸಲು ಸಾಧ್ಯವಾಗಿಲ್ಲ" ಎಂದು ಅವರು ಹೇಳಿದರು.

ಆದರೆ ಸಿಸೋಡಿಯಾ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮೋಹಿತ್‌ ಮಾಥುರ್‌ ಅವರು  ತನಿಖಾಧಿಕಾರಿಯು ಚುನಾಯಿತ ಸರ್ಕಾರ ತೆಗೆದುಕೊಂಡ ನಿರ್ಧಾರಗಳನ್ನು ಪ್ರಶ್ನಿಸಲು ಯತ್ನಿಸುತ್ತಿದ್ದಾರೆ ಎಂದು ವಾದಿಸಿದರು. ಲೆ. ಗವರ್ನರ್‌ ಅವರಿಗೆ ನೀಡಿದ್ದ ಟಿಪ್ಪಣಿಯಲ್ಲೇ ಶೇ 12ಕ್ಕೆ ಲಾಭಾಂಶ ಹೆಚ್ಚಳ ಮಾಡಿರುವ ಕುರಿತು ವಿವರಿಸಲಾಗಿತ್ತು. ಅವರು ಯಾವುದೇ ಬದಲಾವಣೆಗೆ ಸೂಚಿಸಿರಲಿಲ್ಲ ಎಂದು ಸಮರ್ಥಿಸಿಕೊಂಡರು.