Delhi riots
Delhi riots 
ಸುದ್ದಿಗಳು

ದೆಹಲಿ ಗಲಭೆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಎಸ್‌ಪಿಪಿ ರಂಪ: ತರಾಟೆಗೆ ತೆಗೆದುಕೊಂಡ ದೆಹಲಿ ನ್ಯಾಯಾಲಯ

Bar & Bench

ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಯ ವಿಚಾರಣೆ ವೇಳೆ ಕಡತಗಳನ್ನು ಎಸೆದು ನ್ಯಾಯಾಧೀಶರ ವಿರುದ್ಧ ಕೂಗಾಡಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅವರಿಗೆ ದೆಹಲಿ ನ್ಯಾಯಾಲಯ ಎಚ್ಚರಿಕೆ ನೀಡಿದೆ [ಸರ್ಕಾರ ಮತ್ತು ಅಬ್ದುಲ್‌ ಸತ್ತಾರ್‌ ನಡುವಣ ಪ್ರಕರಣ].

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಪೊಲೀಸ್‌ ಆಯುಕ್ತರಿಗೆ ಪ್ರಕರಣವನ್ನು ಪ್ರಸ್ತಾಪಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ನ್ಯಾಯಾಲಯದಲ್ಲಿ ಇಂತಹ ಸನ್ನಿವೇಶ ಪುನರಾವರ್ತನೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

“ನ್ಯಾಯಾಲಯದೆದುರು ಈ ರೀತಿಯ ಆಕ್ರಮಣದಿಂದ ದೂರವಿರಲು ಎಸ್‌ಪಿಪಿ ಅವರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ನ್ಯಾಯಾಲಯದ ಶಿಷ್ಟಾಚಾರವನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೆಚ್ಚು ಜಾಗರೂಕರಾಗಿ ಇರುವಂತೆ ಅವರಿಗೆ ಎಚ್ಚರಿಕೆ ನೀಡಲಾಗುತ್ತಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನ್ಯಾಯಾಲಯದೆದುರು ನಿರ್ವಹಿಸಬೇಕಾದ ವೃತ್ತಿಪರತೆಗೆ ಎಸ್‌ಪಿಪಿ ಹೊರತಾಗಲು ಸಾಧ್ಯವಿಲ್ಲ. ತನ್ನ ತಪ್ಪನ್ನು ಅರಿತುಕೊಳ್ಳುವ ಬದಲು ಎಸ್‌ಪಿಪಿ ನ್ಯಾಯಾಲಯದ ಮೇಲೆಯೇ ಕೂಗಾಡಲು ಆರಂಭಿಸಿದ್ದು, ತನ್ನ ಕಡತವನ್ನು ಎಸೆದಿರುವುದು ದುರದೃಷ್ಟಕರ ಎಂದು ನ್ಯಾಯಾಲಯ ದಾಖಲಿಸಿದೆ.

ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ಪ್ರಶ್ನಿಸಿ 2020 ರಲ್ಲಿ ದೆಹಲಿಯ ಚಾಂದ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರಿಗೆ ಉಂಟಾದ ಗಾಯಗಳಿಗೆ ಸಂಬಂಧಿಸಿದ ವಿಚಾರಣೆ ವೇಳೆ ನ್ಯಾಯಾಲಯ ಪ್ರಾಸಿಕ್ಯೂಷನ್ ಸಾಕ್ಷಿಯ ಸಾಕ್ಷ್ಯವನ್ನು ದಾಖಲಿಸಿಕೊಳ್ಳುತ್ತಿತ್ತು. ಒಂದು ಹಂತದಲ್ಲಿ ಸಾಕ್ಷಿಗೆ ಪದೇ ಪದೇ ಪ್ರಮುಖ ಪ್ರಶ್ನೆಗಳನ್ನು ಹಾಕದಂತೆ ನ್ಯಾಯಾಲಯ ಎಚ್ಚರಿಕೆ ನೀಡಿದಾಗ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌  ತಮ್ಮ ಕಡತಗಳನ್ನು ಎಸೆದು ನ್ಯಾಯಾಧೀಶರ ವಿರುದ್ಧ ಧ್ವನಿ ಏರಿಸಿದ್ದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

State_versus_Abdul_Sattar.pdf
Preview