ಮಾಧ್ಯಮ ವೃತ್ತಿಪರ ವಿನಯ್ ಮಹೇಶ್ವರಿ ಕುರಿತ ಮಾನಹಾನಿಕರ ಟ್ವೀಟ್, ಲೇಖನ ಹಾಗೂ ವೀಡಿಯೊಗಳನ್ನು ತೆಗೆದುಹಾಕುವಂತೆ ತೆಲುಗು ನಟ ಮೋಹನ್ಬಾಬು ಅವರ ಪುತ್ರ ಹಾಗೂ ನಟ ಮಂಚು ಮನೋಜ್ ಹಾಗೂ ಮಾಧ್ಯಮಗಳಿಗೆ ದೆಹಲಿ ಹೈಕೋರ್ಟ್ ಈಚೆಗೆ ಆದೇಶಿಸಿದೆ [ವಿನಯ್ ಮಹೇಶ್ವರಿ ಮತ್ತು ಮನೋಜ್ ಮಂಚು ಇನ್ನಿತರರ ನಡುವಣ ಪ್ರಕರಣ]
ಮಂಚು ಅವರು ತಮ್ಮನ್ನು ಅವಹೇಳನ ಮಾಡಿದ್ದಾರೆ ಎಂದು ದೂರಿದ್ದ ಮಹೇಶ್ವರಿ ಅವರ ಪರವಾಗಿ ನ್ಯಾಯಾಲಯ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮಂಚು ಅವರ ಟ್ವೀಟ್ಗಳನ್ನು ಮಾನಹಾನಿಕರವೆಂದು ಪರಿಗಣಿಸಿದ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು ಒಂದು ವಾರದೊಳಗೆ ಟ್ವೀಟ್ಗಳನ್ನು ತೆಗೆದುಹಾಕುವಂತೆ ಸೂಚಿಸಿದರು. ಅಲ್ಲದೆ ಮಹೇಶ್ವರಿ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ, ಮೆಸೆಂಜರ್ ಸರ್ವೀಸ್ ಅಥವಾ ಸಾರ್ವಜನಿಕ ವೇದಿಕೆಯಲ್ಲಿ ಮಾನಹಾನಿಕರ ಹೇಳಿಕೆ ನೀಡದಂತೆ ಅಥವಾ ಹಂಚಿಕೊಳ್ಳದಂತೆ ಅವರಿಗೆ ನಿರ್ಬಂಧ ವಿಧಿಸಿದರು.
ಫಿರ್ಯಾದಿಯ ವೃತ್ತಿಪರ ವರ್ಚಸ್ಸು ಮತ್ತು ವೈಯಕ್ತಿಕ ಪ್ರತಿಷ್ಠೆಗಹೆ ಹಾನಿಯಾಗುವುದರಿಂದ ಆಧಾರರಹಿತವಾದ ಈ ಹೇಳಿಕೆಗಳು ಮೇಲ್ನೋಟಕ್ಕೆ ಮಾನಹಾನಿಕರವಾಗಿವೆ. ದುರುದ್ದೇಶಪೂರ್ವಕವಾಗಿ ಮತ್ತು ಕೌಟುಂಬಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿರುವುದು ಫಿರ್ಯಾದಿಯನ್ನು ನಕಾರಾತ್ಮಕವಾಗಿ ಚಿತ್ರಿಸಿ ಅವರ ಬಗ್ಗೆ ಇರುವ ಸದ್ಭಾವನೆ ಮತ್ತು ಸಾರ್ವಜನಿಕ ವಿಶ್ವಾಸಾರ್ಹತೆಗೆ ಗಮನಾರ್ಹ ಧಕ್ಕೆ ಉಂಟುಮಾಡುತ್ತವೆ ಎಂದು ನ್ಯಾಯಾಲಯ ಹೇಳಿತು.
ಮಂಚು ಅವರು ಟ್ವೀಟ್ಗಳನ್ನು ತೆಗೆದುಹಾಕುವಂತೆ ನೋಡಿಕೊಳ್ಳಬೇಕು ಎಂದು ಇತ್ತು ಎಕ್ಸ್ಗೆ ಕೂಡ ನ್ಯಾಯಾಲಯ ಸೂಚಿಸಿದೆ.
ಇದಲ್ಲದೆ ಮಾಧ್ಯಮ ಸಂಸ್ಥೆಗಳಾದ ಎಬಿಪಿ ನೆಟ್ವರ್ಕ್, ಗ್ರೇಟ್ ಆಂಧ್ರ, ಇಂಡಿಯಾಗ್ಲಿಟ್ಜ್, ಒನ್ಮನೋರಮಾ ಮತ್ತು ತೆಲುಗುಒನ್ ಕೂಡ ಮಾನಹಾನಿಕರ ಲೇಖನಗಳನ್ನು ತೆಗೆದುಆಹಕಬೇಕು ಎಂದು ಅದು ನಿರ್ದೇಶಿಸಿದೆ.
ತಾನು ಪ್ರಕಟಿಸಿದ ವರದಿಗಳಿಗೆ ಸಂಬಂಧಿಸಿದಂತೆ ಮಹೇಶ್ವರಿ ಅವರನ್ನು ಸಂಪರ್ಕಿಸಿ ಅವರ ಹೇಳಿಕೆ ಅಥವಾ ಸ್ಪಷ್ಟೀಕರಣ ಪ್ರಕಟಿಸುವುದಾಗಿ ಹಿಂದೂಸ್ತಾನ್ ಟೈಮ್ಸ್ ನೀಡಿದ ಭರವಸೆಯನ್ನು ನ್ಯಾಯಾಲಯ ಇದೇ ವೇಳೆ ಗಣನೆಗೆ ತೆಗೆದುಕೊಂಡಿತು.
ಮಹೇಶ್ವರಿ ಅವರು ದೈನಿಕ್ ಭಾಸ್ಕರ್ ಗ್ರೂಪ್, ಸಾಕ್ಷಿ ಮೀಡಿಯಾ ಗ್ರೂಪ್ ಮತ್ತು ಇಂಡಿಯಾ ಟಿವಿಯಲ್ಲಿ ಹಿರಿಯ ಹುದ್ದೆಗಳನ್ನು ಅಲಂಕರಿಸಿದ ಪ್ರಸಿದ್ಧ ಮಾಧ್ಯಮ ವೃತ್ತಿಪರರಾಗಿದ್ದಾರೆ.
ತಾನು ಹಣಕಾಸಿನ ಅವ್ಯವಾಹರ ನಡೆಸಿರುವುದಾಗಿಯೂ ಮತ್ತು ವೈಯಕ್ತಿಕವಾಗಿ ಮೂಗು ತೂರಿಸುತ್ತಿರುವುದಾಗಿಯೂ ಮಂಚು ಅವರು ತನ್ನ ವಿರುದ್ಧ ಕೆಲ ಟ್ವೀಟ್ಗಳನ್ನು ಪ್ರಕಟಿಸುವ ಮೂಲಕ ತನ್ನ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ. ಇವುಗಳನ್ನು ಮಾಧ್ಯಮಗಳು ಪ್ರಕಟಿಸುವ ಮೂಲಕ ಅವುಗಳಿಂದ ತನ್ನ ವರ್ಚಸ್ಸಿಗೆ ಇನ್ನಷ್ಟು ಧಕ್ಕೆ ಉಂಟಾಗಿದೆ ಎಂದು ಮಹೇಶ್ವರಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 17, 2025 ರಂದು ನಡೆಯಲಿದೆ.