ʼರತನ್ ಟಾಟಾʼ ಹೆಸರು ಪ್ರಸಿದ್ಧ ವಾಣಿಜ್ಯ ಚಿಹ್ನೆಯಾಗಿದ್ದು, ಮೂರನೇ ವ್ಯಕ್ತಿಯ ಅನಧಿಕೃತ ಬಳಕೆಯಿಂದ ರಕ್ಷಣೆ ನೀಡಬೇಕಿದೆ ಎಂದು ಫೆಬ್ರವರಿ 7ರಂದು ದೆಹಲಿ ಹೈಕೋರ್ಟ್ ಹೇಳಿದೆ.
ಟಾಟಾ ಸಮೂಹಕ್ಕೆ ಸಂಬಂಧಿಸಿದ ಪ್ರಸಿದ್ಧ ವಾಣಿಜ್ಯ ಚಿಹ್ನೆಗಳು, ಲೋಗೊಗಳು ಮತ್ತು ವೈಯಕ್ತಿಕ ಹೆಸರುಗಳ ಅನಧಿಕೃತ ಬಳಕೆ ವಿರುದ್ಧ ಟಾಟಾ ಸಮೂಹ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಸಲ್ಲಿಸಿದ್ದ ವಾಣಿಜ್ಯ ಚಿಹ್ನೆ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ರತನ್ ಟಾಟಾ ಅವರ ವೈಯಕ್ತಿಕ ಹೆಸರು / ಅಸ್ಮಿತೆ ಜನಜನಿತವಾದದ್ದು ಎಂಬುದು ಸ್ಪಷ್ಟವಾಗಿದ್ದು ಮೂರನೇ ವ್ಯಕ್ತಿಯ ಅನಧಿಕೃತ ಬಳಕೆಯಿಂದ ರಕ್ಷಿಸಬೇಕಿದೆ ಎಂದು ಅದು ವಿವರಿಸಿದೆ.
ಈ ಹಿನ್ನೆಲೆಯಲ್ಲಿ ಟಾಟಾ ಹಾಗೂ ಟಾಟಾ ಸಮೂಹದ ಹೆಸರನ್ನು ಬಳಸಿಕೊಂಡು 'ರತನ್ ಟಾಟಾ ಐಕಾನ್' ಹೆಸರಿನ ಪ್ರಶಸ್ತಿ ನೀಡಲು ಮುಂದಾಗಿದ್ದ ರಜತ್ ಶ್ರೀವಾಸ್ತವ ಎಂಬುವವರಿಗೆ ಪ್ರಶಸ್ತಿ ಸಮಾರಂಭ ಆಯೋಜನೆ, ಪ್ರಶಸ್ತಿ ಪ್ರದಾನ ಸೇರಿದಂತೆ ಯಾವುದೇ ಉದ್ದೇಶಕ್ಕಾಗಿ ದಿವಂಗತ ರತನ್ ಟಾಟಾ ಹೆಸರು ಮತ್ತು ಛಾಯಾಚಿತ್ರ ಬಳಸದಂತೆ ತಡೆಯಾಜ್ಞೆ ವಿಧಿತು.
ತಮ್ಮ ಬೌದ್ಧಿಕ ಆಸ್ತಿ ಹಕ್ಕುಗಳು, ಖ್ಯಾತಿ ಮತ್ತು ಒಂದು ಶತಮಾನಕ್ಕೂ ಹೆಚ್ಚು ಕಾಲ ಸಾರ್ವಜನಿಕವಾಗಿ ಗಳಿಸಿರುವ ಸದ್ಭಾವನೆಯನ್ನು ರಕ್ಷಿಸಲು ಕೋರಿ ಸರ್ ರತನ್ ಟಾಟಾ ಟ್ರಸ್ಟ್ ಮತ್ತು ಟಾಟಾ ಸನ್ಸ್ ಸಂಸ್ಥೆಗಳು ಮೊಕದ್ದಮೆ ಹೂಡಿದ್ದವು. ಆದರೆ ತಮ್ಮ ಅನುಮತಿ ಇಲ್ಲದೆ ರತನ್ ಟಾಟಾ ಹೆಸರು ಬಳಸಿಕೊಂಡಿರುವ ಹಾಗೂ ಕಾರ್ಯಕ್ರಮಕ್ಕೆ ನಾಮನಿರ್ದೇಶನ ಶುಲ್ಕ ವಿಧಿಸಿರುವುದನ್ನು ಪ್ರಶ್ನಿಸಲಾಗಿತ್ತು.
ವಿಚಾರಣೆಯ ಸಂದರ್ಭದಲ್ಲಿ, ಪ್ರತಿವಾದಿ ಶ್ರೀವಾಸ್ತವ ಪರ ವಕೀಲರು ರತನ್ ಟಾಟಾ ಅವರ ಹೆಸರನ್ನು ಬಳಸದಿರಲು ಮತ್ತು ಪ್ರಶಸ್ತಿಗಳನ್ನು ರದ್ದು ಪಡಿಸಲು ಒಪ್ಪಿಕೊಂಡರು. ವಾದಿಗಳ ಪರವಾಗಿ ತೀರ್ಪು ನೀಡಲು ಆಕ್ಷೇಪ ಇಲ್ಲ ಎಂದರು. ಆದರೂ ಭವಿಷ್ಯದಲ್ಲಿ ಟಾಟಾ ಹೆಸರು ವಾಣಿಜ್ಯ ಚಿಹ್ನೆ ಇಲ್ಲವೇ ಅವರ ಭಾವಚಿತ್ರ ಬಳಸುವುದಿಲ್ಲ ಎಂದು ದೃಢೀಕರಿಸುವ ಮುಚ್ಚಳಿಕೆ ಪತ್ರ ನೀಡುವಂತೆ ಪೀಠ ನಿರ್ದೇಶಿಸಿತು.
ಟಾಟಾ ಗ್ರೂಪ್ ಮತ್ತು ಟಾಟಾ ಟ್ರಸ್ಟ್ಗಳ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ ಪ್ರತಿವಾದಿಗಳ ವಿರುದ್ಧ ಶಾಶ್ವತ ತಡೆಯಾಜ್ಞೆ ವಿಧಿಸಿತು. ಇದಕ್ಕೆ ಸಮ್ಮತಿಸಿದ ಅರ್ಜಿದಾರರು ಹಾನಿಗೆ ಪರಿಹಾರ ಮತ್ತು ವೆಚ್ಚದ ಮೊತ್ತ ಪಡೆಯದೆ ಇರಲು ನಿರ್ಧರಿಸಿದರು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]