Swati Chaturvedi, Tajinder Bagga
Swati Chaturvedi, Tajinder Bagga 
ಸುದ್ದಿಗಳು

ಬಗ್ಗಾ ಮಾನನಷ್ಟ ಪ್ರಕರಣ: ಸ್ವಾತಿ ಚತುರ್ವೇದಿ ವಿರುದ್ಧದ ವಿಚಾರಣೆಗೆ ದೆಹಲಿ ಹೈಕೋರ್ಟ್ ತಡೆ

Bar & Bench

ಪತ್ರಕರ್ತೆ ಸ್ವಾತಿ ಚತುರ್ವೇದಿ ವಿರುದ್ಧ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ದೆಹಲಿ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.

ಬಗ್ಗಾ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನೀಡಿದ ಸಮನ್ಸ್ ಪ್ರಶ್ನಿಸಿ ಚತುರ್ವೇದಿ ಅವರು ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ನ್ಯಾ. ರಜನೀಶ್ ಭಟ್ನಾಗರ್ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ತಡೆ ನೀಡಿದರು.

ಬಗ್ಗಾ ಅವರನ್ನು ಬಿಜೆಪಿ ವಕ್ತಾರರನ್ನಾಗಿ ನೇಮಿಸಿದ್ದಕ್ಕೆ ಮಾರ್ಚ್ 2017ರಲ್ಲಿ ಸ್ವಾತಿ ಅವರು ಟ್ವೀಟ್‌ ಮೂಲಕ  ಪ್ರತಿಕ್ರಿಯಿಸಿದ್ದರು.


“ಪ್ರಶಾಂತ್‌ ಭೂಷಣ್‌ ಅವರನ್ನು ಥಳಿಸಿದ್ದ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿಯಾಗಿದ್ದ ವ್ಯಕ್ತಿ ಈಗ ಬಿಜೆಪಿ ಪರ ಮಾತನಾಡುತ್ತಿದ್ದಾರೆ. ಒಳ್ಳೆಯ ಕೆಲಸ.” ಎಂದು ಅವರು ಪ್ರತಿಕ್ರಿಯಿಸಿದ್ದರು.

ಬಗ್ಗಾ ಹಾಗೂ ಇನ್ನಿಬ್ಬರು 2011ರಲ್ಲಿ ಸುಪ್ರೀಂ ಕೋರ್ಟ್‌ ಅಂಗಳದಲ್ಲಿ ವಕೀಲ ಪ್ರಶಾಂತ್‌ ಭೂಷಣ್‌ ಅವರ ಮೇಲೆ ಹಲ್ಲೆ ನಡೆಸಿದ್ದರು. ಪರಿಣಾಮ ಅವರಿಗೆ ಗಾಯಗಳಾಗಿದ್ದನ್ನು ಟ್ವೀಟ್‌ನ ಮೊದಲ ಭಾಗ ಪ್ರಸ್ತಾಪಿಸಿತ್ತು.

ಈ ಹಿನ್ನೆಲೆಯಲ್ಲಿ ಬಗ್ಗಾ ಅವರು ಸ್ವಾತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಮೇ 2018ರಲ್ಲಿ ನೀಡಿದ ಆದೇಶದಲ್ಲಿ, ಸ್ವಾತಿ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಅವರು ಪ್ರಶ್ನಿಸಿದ್ದರಾದರೂ ಡಿಸೆಂಬರ್ 2022ರಲ್ಲಿ ಅರ್ಜಿಯನ್ನು ವಜಾಗೊಳಿಸಲಾಗಿತ್ತು.

ಲೈಂಗಿಕ ಕಿರುಕುಳದ ಬಗ್ಗೆ ಚತುರ್ವೇದಿ ಮಾಡಿದ ಟ್ವೀಟ್ "ಸಾರ್ವಜನಿಕ ವ್ಯಕ್ತಿತ್ವವನ್ನು, ಅದರಲ್ಲಿಯೂ ರಾಷ್ಟ್ರೀಯ ಪಕ್ಷವನ್ನು ಪ್ರತಿನಿಧಿಸಿದ ವ್ಯಕ್ತಿಯ ವ್ಯಕ್ತಿತ್ವಕ್ಕೆ ಕುಂದು ತಂದಿತು" ಎಂದು  ತಮ್ಮ ಆದೇಶದಲ್ಲಿ, ನ್ಯಾಯಾಧೀಶ ಸುಧೀರ್ ಕುಮಾರ್ ಸಿರೋಹಿ ಅವರು ಹೇಳಿದ್ದರು.

ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, ಸ್ವಾತಿ ಅವರು ಮ್ಯಾಜಿಸ್ಟ್ರೇಟ್ ನೀಡಿದ ಸಮನ್ಸ್ ಮತ್ತು ನ್ಯಾಯಾಧೀಶ ಸಿರೋಹಿ ಅವರು ತಮ್ಮ ಅರ್ಜಿಯನ್ನು ವಜಾಗೊಳಿಸಿದ ಆದೇಶಗಳೆರಡನ್ನೂ ಪ್ರಶ್ನಿಸಿದ್ದರು.