SupremeCourt and Delhi MCD, AAP
SupremeCourt and Delhi MCD, AAP  
ಸುದ್ದಿಗಳು

ದೆಹಲಿ ಮೇಯರ್ ಚುನಾವಣೆ: ನಾಮ ನಿರ್ದೇಶಿತ ಸದಸ್ಯರು ಮತ ಚಲಾಯಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್‌

Bar & Bench

ನಾಮನಿರ್ದೇಶಿತ ಸದಸ್ಯರು ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ದೆಹಲಿ ಮೇಯರ್‌ ಚುನಾವಣೆಯ ಚುನಾವಣಾ ವಿಧಾನದ ಬಗ್ಗೆ ಆಕ್ಷೇಪ ಎತ್ತಿ ಆಮ್‌ ಆದ್ಮಿ ಪಕ್ಷದ ನಾಯಕಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಸ್ಪಷ್ಟಪಡಿಸಿತು. [ಶೆಲ್ಲಿ ಒಬೆರಾಯ್ ಮತ್ತು ದೆಹಲಿ ಲೆಫ್ಟೆನೆಂಟ್‌ ಗವರ್ನರ್‌ ಕಚೇರಿ ಮತ್ತಿತರರ ನಡುವಣ ಪ್ರಕರಣ].

ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 17ರಂದು ನಡೆಯಲಿದ್ದು ಅಲ್ಲಿಯವರೆಗೆ ಮೇಯರ್‌ ಚುನಾವಣೆ ನಡೆಸುವುದಿಲ್ಲ ಎಂದು  ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿನಯ್‌ ಕುಮಾರ್‌ ಸಕ್ಸೇನಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ

ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ದೆಹಲಿಯ ಮಹಾನಗರ ಪಾಲಿಕೆಗೆ (ಎಂಸಿಡಿ) ತಮ್ಮಿಂದ ನಾಮನಿರ್ದೇಶನಗೊಂಡ ಸದಸ್ಯರಿಗೆ ಮತ ಚಲಾಯಿಸಲು ಅವಕಾಶ ನೀಡಿದ ಲೆಫ್ಟಿನೆಂಟ್‌ ಗವರ್ನರ್‌ ಕ್ರಮ ಪ್ರಶ್ನಿಸಿ ಆಮ್ ಆದ್ಮಿ ಪಕ್ಷ (ಎಎಪಿ) ಸಲ್ಲಿಸಿದ್ದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ವಿಷಯ ತಿಳಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ಅವರು ಫೆಬ್ರವರಿ 16ರಂದು ಚುನಾವಣೆ ನಡೆಯಲಿದೆ ಎಂದು ದೆಹಲಿ ಲೆ. ಗವರ್ನರ್‌ ವಿ ಕೆ ಸಕ್ಸೇನಾ ಅವರು ಭಾನುವಾರ  ಹೇಳಿದ್ದಾರೆ  ಎಂದು ಪೀಠದ ಗಮನಕ್ಕೆ ತಂದರು.

ಆದರೆ ಲೆ. ಗವರ್ನರ್‌ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಸಂಜಯ್ ಜೈನ್, ಇಂದಿನ ಸಮಯದ ಮಿತಿಯನ್ನು ಪರಿಗಣಿಸಿ ಸುಪ್ರೀಂ ಕೋರ್ಟ್‌ ಪ್ರಕರಣ ಆಲಿಸುವವರೆಗೆ ಮತದಾನ  ಮುಂದೂಡಬಹುದು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಭರವಸೆ ನೀಡಿದರು.

ತದನಂತರ ನ್ಯಾಯಾಲಯವು, ಪ್ರಕರಣವನ್ನು ಫೆ.17ರಂದು ವಿಚಾರಣೆಗೆ ಪಟ್ಟಿ ಮಾಡಲು ಸೂಚಿಸಿತು. ಫೆ.16 ರಂದು ಮತದಾನ ನಡೆಯುವುದಿಲ್ಲ ಎಂದು ಎಎಸ್‌ಜಿ ಹೇಳಿದ್ದಾರೆ ಎಂದು ತನ್ನ ಆದೇಶದಲ್ಲಿ ದಾಖಲಿಸಿತು.