Delhi Riots  
ಸುದ್ದಿಗಳು

[ದೆಹಲಿ ಗಲಭೆ] ಪೊಲೀಸರ ತನಿಖೆಯನ್ನೇ ತನಿಖೆಗೊಳಪಡಿಸಲು ನ್ಯಾಯಾಲಯದ ಆದೇಶ; ಐವರ ಬಿಡುಗಡೆ

Bar & Bench

ದೆಹಲಿ ಗಲಭೆ ಸಂದರ್ಭದಲ್ಲಿ ಔಷಧದಂಗಡಿ ಲೂಟಿ ಮಾಡಿದ ಆರೋಪ ಎದುರಿಸುತ್ತಿದ್ದ ಐವರನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ದೆಹಲಿಯ ನ್ಯಾಯಾಲಯವೊಂದು ಸೋಮವಾರ ಬಿಡುಗಡೆ ಮಾಡಿದೆ (ಸರ್ಕಾರ ಮತ್ತು ರಾಜ್‌ ಕುಮಾರ್‌ ನಡುವಣ ಪ್ರಕರಣ).

ಕರ್‌ಕರ್‌ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ವೀರೇಂದ್ರ ಭಟ್‌ ಅವರು ತನಿಖಾಧಿಕಾರಿಗಳು ನೈಜ ಅಪರಾಧಿಗಳನ್ನು ರಕ್ಷಿಸಲು ಯತ್ನಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸಿದ ರೀತಿಯನ್ನೇ ತನಿಖೆಗೆ ಒಳಪಡಿಸುವಂತೆ ಆದೇಶಿಸಿದ್ದಾರೆ.

ದೂರುದಾರರು ಅನುಭವಿಸಿದ ಮಾನಸಿಕ ಸಂಕಟ ಮತ್ತು ಆರ್ಥಿಕ ನಷ್ಟದ ಬಗ್ಗೆ ಸಂವೇದನಾಶೀಲವಾಗಿರುತ್ತೇವೆ. ಇದೇ ವೇಳೆ, ಯಾವುದೇ ಆರೋಪಿಯ ಭವಿಷ್ಯವನ್ನು ನಿರ್ಧರಿಸುವಾಗ ನ್ಯಾಯಾಲಯವು ಸಂವೇದನಾಶೀಲತೆ ಅಥವಾ ಭಾವನೆಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇವು ಸಾಕ್ಷ್ಯಾಧಾರದ ಸ್ಥಾನವನ್ನು ತುಂಬಲಾರವು” ಎಂದು ನ್ಯಾಯಾಲಯ ಹೇಳಿತು. ಮಸಾಲ್ತಿ ಮತ್ತಿತರರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪನ್ನು ಆಧರಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.

ಘಟನೆ ನಡೆದಿಲ್ಲ ಅಥವಾ ಆರೋಪಿಗಳನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂಬ ಕಾರಣಕ್ಕಾಗಿ ಅವರನ್ನು ಬಿಡುಗಡೆ ಮಾಡುತ್ತಿಲ್ಲ ಬದಲಿಗೆ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣಕ್ಕಾಗಿ ಬಿಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ದೆಹಲಿ ಗಲಭೆ ಆರೋಪಿಗಳನ್ನು ರಕ್ಷಿಸಲು ಯಾವುದೇ ಉದ್ದೇಶಪೂರ್ವಕ ಪ್ರಯತ್ನ ನಡೆದಿಲ್ಲ ಎಂದು ಖಚಿತಪಡಿಸಿಕೊಳ್ಳುವ ಸಲುವಾಗಿ, ತನಿಖೆ ನಡೆಸಿದ ರೀತಿಯನ್ನೇ ತನಿಖೆ ನಡೆಸುವಂತೆ ಈಶಾನ್ಯ ಜಿಲ್ಲೆಯ ಡಿಸಿಪಿಗೆ ನ್ಯಾಯಾಲಯ ಸೂಚಿಸಿದೆ.