Chief Justice Ritu Raj Awasthi, Justice Sachin Shankar Magdum and  Karnataka HC
Chief Justice Ritu Raj Awasthi, Justice Sachin Shankar Magdum and Karnataka HC 
ಸುದ್ದಿಗಳು

ರೈತರ ಗುತ್ತಿಗೆ ಹಣ ಠೇವಣಿ ಇಡಲು ಸೌರಶಕ್ತಿ ನಿಗಮಕ್ಕೆ ಆದೇಶಿಸಲು ಕೋರಿದ ಬರೋಡಾ ಬ್ಯಾಂಕ್: ಮನವಿ ವಜಾ ಮಾಡಿದ ಹೈಕೋರ್ಟ್

Bar & Bench

ಸೌರಶಕ್ತಿ ಉತ್ಪಾದನೆಗಾಗಿ ತಮ್ಮ ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ರೈತರು/ಫಲಾನುಭವಿಗಳಿಗೆ ಪಾವತಿಸಬೇಕಿರುವ ವಾರ್ಷಿಕ ಗುತ್ತಿಗೆ ಹಣವನ್ನು ತಮ್ಮ ಬ್ಯಾಂಕ್‌ನಲ್ಲಿ ಠೇವಣಿ ಇಡಲು ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮಕ್ಕೆ ಆದೇಶಿಸಬೇಕು ಎಂದು ಕೋರಿದ್ದ ಬ್ಯಾಂಕ್‌ ಆಫ್‌ ಬರೋಡಾದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬ್ಯಾಂಕ್‌ ಆಫ್‌ ಬರೋಡಾ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಸೋಲಾರ್‌ ಪಾರ್ಕ್‌ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಬ್ಯಾಂಕ್‌ ಆಫ್‌ ಬರೋಡಾವು ( ಈ ಹಿಂದಿನ ವಿಜಯಾ ಬ್ಯಾಂಕ್) ಹಲವು ಭೂ ಮಾಲೀಕರಿಗೆ ಸಾಲ ನೀಡಿದೆ. ರಿಟ್ ಪ್ರಕ್ರಿಯೆ ಮೂಲಕ ರೈತರಿಗೆ ನೀಡಿರುವ ಸಾಲದ ಹಣವನ್ನು ವಸೂಲಿ ಮಾಡುವ ಉದ್ದೇಶವನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್‌ ಆಫ್‌ ಬರೋಡಾ ಸಲ್ಲಿಸಿದ್ದ ಮನವಿಯನ್ನು ಏಕಸದಸ್ಯ ಪೀಠವು ವಜಾ ಮಾಡಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ಆರಂಭಿಸಲಾಗಿದ್ದು, ಅವರು ನಮ್ಮ ಮನವಿಯನ್ನು ಪರಿಗಣಿಸಬೇಕು ಎಂದು ಬ್ಯಾಂಕ್‌ ಪರ ವಕೀಲರು ವಾದಿಸಿದ್ದರು. ರೈತರ ಬ್ಯಾಂಕ್‌ ಖಾತೆಗಳಲ್ಲಿ ವಾರ್ಷಿಕ ಗುತ್ತಿಗೆ ಹಣವನ್ನು ಠೇವಣಿ ಇಡುವ ಕುರಿತು ನಿಗಮದ ಕಾನೂನು ಕರ್ತವ್ಯವನ್ನು ಬ್ಯಾಂಕ್‌ ಸಾಬೀತುಪಡಿಸಿಲ್ಲ ಎಂಬುದನ್ನು ವಿಭಾಗೀಯ ಪೀಠವು ಆದೇಶದಲ್ಲಿ ಪರಿಗಣಿಸಿದೆ.

“ಸಂಬಂಧಿತ ಪ್ರಾಧಿಕಾರವು ಕಾನೂನು ಬಾಧ್ಯತೆ ಪೂರೈಸುವ ಅವಶ್ಯಕತೆ ಕಂಡುಬರದಿದ್ದರೆ ನ್ಯಾಯಾಲಯವು ಆದೇಶ ಹೊರಡಿಸಲಾಗದು” ಎಂದು ಪೀಠವು ಹೇಳಿದೆ. ನ್ಯಾಯಾಂಗ ವ್ಯವಸ್ಥೆಗೆ ಹೊರೆಯಾಗುವ ಸಾಧ್ಯತೆ ಇರುವ ವಸೂಲಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂಬ ಬ್ಯಾಂಕ್ ವಾದವನ್ನು ಒಪ್ಪಲು ನ್ಯಾಯಾಲಯ ನಿರಾಕರಿಸಿದೆ.

“ಸಾಮಾನ್ಯ ನ್ಯಾಯಾಲಯಗಳಲ್ಲಿ ಪರಿಹಾರವನ್ನು ಪಡೆಯುವ ವಿಧಾನವನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಉದ್ದೇಶವನ್ನು ನಾವು ಹೊಂದಿಲ್ಲ. ವಿವೇಚನೆ ಬಳಸಲು ನಿರಾಕರಿಸುವ ಮೂಲಕ ಸಿವಿಲ್‌ ನ್ಯಾಯಾಲಯದಲ್ಲಿ ಪರಿಹಾರ ಕೋರಲು ಬ್ಯಾಂಕ್‌ಗೆ ಅವಕಾಶ ಮಾಡಿಕೊಟ್ಟಿರುವ ಏಕಸದಸ್ಯ ಪೀಠದ ನಿರ್ಣಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಅವರು ರಿಟ್ ಅಧಿಕಾರ ಚಲಾಯಿಸಲು ನಿರಾಕರಿಸಿರುವುದು ದೌರ್ಬಲ್ಯಗಳಿಂದ ಕೂಡಿಲ್ಲ” ಎಂದು ನ್ಯಾಯಾಲಯ ಹೇಳಿದೆ.

Bank of Baroda versus KSPDCL.pdf
Preview