ಸುದ್ದಿಗಳು

ರಮೇಶ್ ಜಾರಕಿಹೊಳಿ ವಿರುದ್ಧದ ದೂರು ವಾಪಸ್ ನಿರ್ಧಾರ; ದಿನೇಶ್ ಕಲ್ಲಹಳ್ಳಿ ಪರ ವಕೀಲರು ಹೇಳಿದ್ದೇನು?

Bar & Bench

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ವಿರುದ್ಧ ನೀಡಿದ್ದ ದೂರನ್ನು ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ವಾಪಸ್‌ ಪಡೆದಿದ್ದಾರೆ. ವಕೀಲ ಕುಮಾರ್‌ ಪಾಟೀಲ್‌ ಅವರ ಮೂಲಕ ದೂರು ಹಿಂಪಡೆಯುವ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಲ್ಲಹಳ್ಳಿ ರವಾನಿಸಿದ್ದಾರೆ.

ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಕುಮಾರ್‌ ಪಾಟೀಲ್‌ ದೂರು ಹಿಂಪಡೆಯುತ್ತಿರುವ ಸಂಬಂಧ ವಿವಿಧ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ:

  • ಸಂತ್ರಸ್ತೆಗೆ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಿಂದ ಅನ್ಯಾಯ ಆಗಿದೆ. ಅಂಗಿ ಮುಳ್ಳಿಗೆ ಬಿದ್ದರೂ ಮುಳ್ಳು ಅಂಗಿಯ ಮೇಲೆ ಬಿದ್ದರೂ ಹರಿಯುವುದು ಅಂಗಿಯೇ. ಹೀಗಾಗಿ ದಿನೇಶ್‌ ಅವರ ಸೂಚನೆಯಂತೆ ದೂರು ಹಿಂಪಡೆಯಲಾಗುತ್ತಿದೆ.

  • ದಿನೇಶ್‌ ದೂರು ನೀಡಿದ್ದು ನಿಜ. ಆದರೆ ಎಲ್ಲಿಯೂ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ದೂರು ಹಿಂಪಡೆಯಲು ಅವಕಾಶ ಇದೆ. ಪೊಲೀಸರ ನಿರ್ಧಾರ ಏನೆಂಬುದನ್ನು ನೋಡೋಣ.

  • ದೂರಿನಲ್ಲಿ ತಾಂತ್ರಿಕ ಸಮಸ್ಯೆಗಳಿವೆ.

  • ನನ್ನ ಕಕ್ಷೀದಾರ ದಿನೇಶ್‌ ಅವರ ಮೇಲೆ ಯಾವುದೇ ಒತ್ತಡ ಇಲ್ಲ. ಅವರು ಭಯಪಟ್ಟಿದ್ದಾರೆ ಎನ್ನುವುದು ಸುಳ್ಳು. ಅವರೊಬ್ಬ ಸಾಮಾಜಿಕ ಹೋರಾಟಗಾರ.

  • ದೂರು ಕೊಡುವವರನ್ನೇ ಗುರಿಯಾಗಿಸಲಾಗುತ್ತಿದೆ. ಕುಮಾರಣ್ಣ ( ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ) ಹೇಳಿಕೆಯಿಂದ ನೋವಾಗಿದೆ. ಹೀಗಾಗಿ ದೂರು ಹಿಂಪಡೆಯುತ್ತಿರುವೆ.