Election commisson of India
Election commisson of India 
ಸುದ್ದಿಗಳು

ಮತದಾನಕ್ಕಾಗಿ ಹಿರಿಯ ನಾಗರಿಕರಿಗೆ ಸರತಿ ಸಾಲಿನಿಂದ ವಿನಾಯತಿ ನೀಡಲು ಕ್ರಮಕ್ಕೆ ಸೂಚಿಸಿದ ಕೇಂದ್ರ ಚುನಾವಣಾ ಆಯೋಗ

Ramesh DK

ಎಲ್ಲಾ ಮತಗಟ್ಟೆಗಳಲ್ಲಿ ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ನಿಂತು ಕಾಯದೇ ಮತ ಚಲಾಯಿಸಲು ನಿಯಮಾವಳಿಗಳನ್ನು ರೂಪಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಬಿಹಾರ ವಿಧಾನಸಭಾ ಚುನಾವಣೆ ವೇಳೆ ಅನೇಕ ವಯೋವೃದ್ಧರಿಗೆ ಆದ ಅನನುಕೂಲವನ್ನು ಗಮನಿಸಿ ತುಮಕೂರು ಮೂಲದ ನ್ಯಾಯವಾದಿ ಎಲ್‌ ರಮೇಶ್‌ ನಾಯಕ್‌ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಇ-ಮೇಲ್‌ ಮೂಲಕ ಮನವಿ ಮಾಡಿದ್ದರು . ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಲ ದಿನಗಳ ಹಿಂದೆ ಕೋರಿದ್ದರು.

ಇದಕ್ಕೆ ಸ್ಪಂದಿಸಿರುವ ಕೇಂದ್ರ ಚುನಾವಣಾ ಆಯೋಗದ ಸಹಾಯಕ ಮುಖ್ಯ ಚುನಾವಣಾಧಿಕಾರಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಚುನಾವಣೆ) ಇಲಾಖೆಯ ಅಧೀನ ಕಾರ್ಯದರ್ಶಿ ಕೆ ಎಂ ಪ್ರಾಣೇಶ್‌ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ. ಗ್ರಾಮ ಪಂಚಾಯತ್‌ ಚುನಾವಣೆ ಮಾತ್ರವಲ್ಲದೆ ತಾಲ್ಲೂಕು‌ ಪಂಚಾಯತ್‌, ಜಿಲ್ಲಾ ಪಂಚಾಯತ್‌, ವಿಧಾನಸಭೆ ಹಾಗೂ ಸಂಸತ್‌ ಚುನಾವಣೆಗಳಿಗೂ ಈ ವಿಷಯ ಸಂಬಂಧಪಡುವುದರಿಂದ ಸೂಕ್ತ ಕ್ರಮ ಕೈಗೊಳ್ಳುವುದಕ್ಕಾಗಿ ಪತ್ರವನ್ನು ಕಳುಹಿಸಲು ತಾವು ನಿರ್ದೇಶಿತರಾಗಿರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಗ್ರಾ. ಪಂಚಾಯತ್‌ ಚುನಾವಣೆ ಇದೇ ಡಿ. 22 ಮತ್ತು 27ರಂದು ನಡೆಯಲಿದೆ. ಡಿ. 30ರಂದು ಫಲಿತಾಂಶ ಘೋಷಣೆಯಾಗಲಿದೆ.