COVID-19 vaccine, Bombay High Court
COVID-19 vaccine, Bombay High Court 
ಸುದ್ದಿಗಳು

ಮನೆ ಬಾಗಿಲಿಗೆ ಲಸಿಕೆ ಪೂರೈಕೆ ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಗಡುವು ನೀಡಿದ ಬಾಂಬೆ ಹೈಕೋರ್ಟ್‌

Bar & Bench

ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಮನೆ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವ ಯೋಜನೆಯಿಂದ ಹಿಂದೆ ಸರಿದಿರುವ ನಿರ್ಧಾರವನ್ನು ಪುನರ್‌ ಪರಿಶೀಲಿಸುವಂತೆ ಬಾಂಬೆ ಹೈಕೋರ್ಟ್‌ ಗುರುವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಔಷಧಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಪರಿಣತರಲ್ಲದಿದ್ದರೂ, ಮನೆ ಮನೆಗೆ ತೆರಳಿ ಲಸಿಕೆ ನೀತಿಯನ್ನು ಪ್ರಾರಂಭಿಸದಿರುವುದಕ್ಕೆ ಕೇಂದ್ರ ಸರ್ಕಾರ ನೀಡಿರುವ ಸಮರ್ಥನೆಗಳನ್ನು ವಿವಿಧ ಕಾರಣಗಳಿಗಾಗಿ ಪರಿಷ್ಕರಿಸಬೇಕಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್‌ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಲಸಿಕೆ ಪಡೆಯಲು ಹೊರಹೋದರೆ ವಯಸ್ಸಾದವರು ಮತ್ತು ಅಸ್ವಸ್ಥರಾದವರಿಗೆ ಹೆಚ್ಚಿನ ಸಮಸ್ಯೆಯಾಗುತ್ತದೆ. ವಯಸ್ಸಾದ ನಾಗರಿಕರೆದುರು ಅತ್ತ ದರಿ ಇತ್ತ ಹುಲಿ ಎನ್ನುವ ಪರಿಸ್ಥಿತಿ ಇದ್ದು, ಈ ನಡುವೆ ಆಯ್ಕೆ ಮಾಡಲು ಕೇಳಿಕೊಳ್ಳುತ್ತಿರುವುದು ವಿಷಾದನೀಯ” ಎಂದು ನ್ಯಾಯಪೀಠ ಹೇಳಿದೆ.

ಹೊಸ ತಲೆಮಾರಿನ ಆಂಬುಲೆನ್ಸ್‌ಗಳಲ್ಲಿ ಐಸಿಯು ವ್ಯವಸ್ಥೆ ಇದೆ. ರೆಫ್ರಿಜರೇಟರ್‌ ಹೊಂದಿರುವ ಆಂಬುಲೆನ್ಸ್‌ಗಳಲ್ಲಿ ಲಸಿಕೆಯ ತಾಪಮಾನ ನಿರ್ವಹಿಸಲಾಗುವುದಿಲ್ಲ ಎಂಬುದನ್ನು ಒಪ್ಪಲಾಗದು. ಕೇಂದ್ರ ಸರ್ಕಾರವು ತಾನು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಇದನ್ನು ಮರೆಮಾಚಿದೆ ಎಂದು ನ್ಯಾಯಾಲಯ ಹೇಳಿದೆ.

ಅಪಾರ ಜನಸಂಖ್ಯೆ ಇರುವ ಕೋವಿಡ್‌ ಕೇಂದ್ರಗಳಿಗೆ ಹಿರಿಯ ನಾಗರಿಕನ್ನು ಲಸಿಕೆ ಕೊಡಿಸಲು ಕರೆದೊಯ್ಯುವುದು ಅಪಾಯಕಾರಿ. ಹಲವು ಸಂದರ್ಭದಲ್ಲಿ ಇಲ್ಲಿ ಕೋವಿಡ್‌ ಶಿಷ್ಟಾಚಾರ ಪಾಲಿಸಲಾಗುತ್ತಿರುವುದಿಲ್ಲ ಎಂದು ಹೇಳಲಾಗಿದೆ.

ಹಿರಿಯ ನಾಗರಿಕರು ಮತ್ತು ಸಮರ್ಥ ನಾಗರಿಕರಿಗೆ ಸಂವಿಧಾನದ 21ನೇ ವಿಧಿಯಡಿ ರಕ್ಷಣೆ ಒದಗಿಸಲಾಗಿದ್ದು, ಗೊಂದಲಗಳಿಗೆ ಆಸ್ಪದ ನೀಡುವ ನೀತಿಯು ಅನಿಯಂತ್ರಿತ ಮತ್ತು ಅಸಮರ್ಥನೀಯ ಎಂದು ಪೀಠ ಹೇಳಿದ್ದು, ಕೇಂದ್ರದ ನಿಲುವು ನಿಲ್ಲುವುದಿಲ್ಲ ಎಂದಿದೆ.

ಮುಂದಿನ ಎರಡು ವಾರಗಳಲ್ಲಿ ಮನೆ ಮನೆ ಬಾಗಿಲಿಗೆ ಲಸಿಕೆ ಪೂರೈಸುವ ತನ್ನ ನಿರ್ಧಾರವನ್ನು ಪುನರ್‌ ಪರಿಶೀಲಿಸುವ ಸಂಬಂಧ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ. ಇದಕ್ಕೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿ ಸಿಂಗ್‌ ಸಮ್ಮತಿಸಿದ್ದಾರೆ.

ಆಧಾರ್‌ ಕಾರ್ಡ್‌ ಇಲ್ಲದಿರುವವರಿಗೂ ಲಸಿಕೆ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ. ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಇಲ್ಲದಿರುವುದನ್ನು ಆಧರಿಸಿ ನ್ಯಾಯಾಲಯವು ಮೇ 6ರವರೆಗೆ ವಿಚಾರಣೆ ಮುಂದೂಡಿದೆ.