ಕರ್ನಾಟಕ ಹೈಕೋರ್ಟ್ಗೆ ಇಮೇಲ್ ಮೂಲಕ ಬಾಂಬ್ ಕರೆ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ವಿಧಾನ ಸೌಧ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳದಲ್ಲಿ ಪರಿಶೀಲನೆ ನಡಿಸಿದ್ದು, ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ.
bhagwanthmanna@yandex.com ಎಂಬ ಇಮೇಲ್ನಿಂದ ರಿಜಿಸ್ಟ್ರಾರ್ ಜನರಲ್ ಅವರಿಗೆ ಹುಸಿ ಬಾಂಬ್ ಇಮೇಲ್ ಕಳುಹಿಸಲಾಗಿದ್ದು, ಮಧ್ಯಾಹ್ನ 2.45ರ ಸುಮಾರಿಗೆ ಸ್ಥಳ ತೊರೆಯುವಂತೆ ಸೂಚಿಸಿಲಾಗಿತ್ತು.
ತಮಿಳುನಾಡು ಸರ್ಕಾರ, ಅಲ್ಲಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಬಿಹಾರದ ಜನ ಸ್ವರಾಜ್ ಪಕ್ಷದ ಪ್ರಶಾಂತ್ ಕಿಶೋರ್, ಚುನಾವಣಾ ತಂತ್ರಜ್ಞ ಸುನಿಲ್ ಕನಗೋಲು ಇತ್ಯಾದಿ ಹೆಸರುಗಳನ್ನು ಇಮೇಲ್ನಲ್ಲಿ ಪ್ರಸ್ತಾಪಿಸಲಾಗಿದ್ದು, ಇಲ್ಲ-ಸಲ್ಲದ ವಿಚಾರಗಳನ್ನು ಉಲ್ಲೇಖಿಸಲಾಗಿದೆ.
ಹುಸಿ ಬಾಂಬ್ ಕರೆ ಹಿನ್ನೆಲೆಯಲ್ಲಿ ʼಬಾರ್ ಅಂಡ್ ಬೆಂಚ್ʼ ಜೊತೆ ಮಾತನಾಡಿದ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಕೆ ಎಸ್ ಭರತ್ ಕುಮಾರ್ ಅವರು “ಇಂಥ ಹುಸಿ ಬಾಂಬ್ ಕರೆಗಳು ಪ್ರತಿ ವಾರ ಬರುತ್ತವೆ. ಇದೊಂದು ರೀತಿಯಲ್ಲಿ ದಿನಚರಿಯಾಗಿದೆ. ಈ ಬಗೆಯ ಇಮೇಲ್ಗಳನ್ನು ನಾವು ಭದ್ರತಾ ವಿಭಾಗಕ್ಕೆ ರವಾನಿಸುತ್ತೇವೆ. ಅಲ್ಲಿಂದ ಮುಂದಿನ ಕ್ರಮವಾಗುತ್ತದೆಯಷ್ಟೆ. ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ” ಎಂದರು.