Nikita Jacob, Bombay High Court
Nikita Jacob, Bombay High Court 
ಸುದ್ದಿಗಳು

ಟೂಲ್‌ಕಿಟ್‌ ಪ್ರಕರಣ: ಮೂರು ವಾರಗಳಿಗೆ ನಿಕಿತಾ ಜೇಕಬ್‌ಗೆ ಟ್ರಾನ್ಸಿಟ್‌ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್‌

Bar & Bench

ರೈತರ ಪ್ರತಿಭಟನೆಗೆ ಸಂಬಂಧಿಸಿದ 'ಟೂಲ್‌ಕಿಟ್'‌ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ, ವಕೀಲೆ ನಿಕಿತಾ ಜೇಕಬ್‌ ಅವರಿಗೆ ಬಾಂಬೆ ಹೈಕೋರ್ಟ್‌ ಬುಧವಾರ ಟ್ರಾನ್ಸಿಟ್‌ ಜಾಮೀನು ನೀಡಿದೆ. ಪ್ರಸ್ತುತ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದ ಮಾಹಿತಿಯುಳ್ಳ 'ಟೂಲ್‌ಕಿಟ್'‌ ಸಿದ್ಧಪಡಿಸಿದ ಆರೋಪದಲ್ಲಿ ದೆಹಲಿ ಪೊಲೀಸರು ಸಾಮಾಜಿಕ ಕಾರ್ಯಕರ್ತೆ ಮತ್ತು ವಕೀಲೆ ನಿಕಿತಾ ಜೇಕಬ್‌ ವಿರುದ್ಧ ದೂರು ದಾಖಲಿಸಿದ್ದರು. ನಿಕಿತಾ ಅವರನ್ನು ಮೂರು ವಾರಗಳ ಕಾಲ ಬಂಧಿಸಿದಂತೆ ಬಾಂಬೆ ಹೈಕೋರ್ಟ್ ಅವರಿಗೆ ಟ್ರಾನ್ಸಿಟ್‌ ಜಾಮೀನು ಮಂಜೂರು ಮಾಡಿದೆ.

ಟೂಲ್‌ಕಿಟ್‌ ಪ್ರಕರಣದಲ್ಲಿ ಸಿಲುಕಿದ್ದ ಸಾಮಾಜಿಕ ಕಾರ್ಯಕರ್ತ ಶಾಂತನು ಮುಲುಕ್‌ಗೆ ಟ್ರಾನ್ಸಿಟ್‌ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌ನ ಔರಂಗಾಬಾದ್‌ ಪೀಠದ ಆದೇಶವನ್ನು ಆಧರಿಸಿ ನ್ಯಾಯಮೂರ್ತಿ ಪಿ ಡಿ ನಾಯಕ್‌ ಆದೇಶ ಹೊರಡಿಸಿದ್ದಾರೆ.

ಜೇಕಬ್‌ ಪರ ಹಿರಿಯ ವಕೀಲ ಮಿಹಿರ್‌ ದೇಸಾಯಿ ಅವರು ಔರಂಗಾಬಾದ್‌ ಪೀಠ ಹೊರಡಿಸಿರುವ ಆದೇಶವನ್ನು ನ್ಯಾಯಮೂರ್ತಿ ನಾಯಕ್‌ ಅವರಿಗೆ ಸಲ್ಲಿಸಿದರು. ಹೈಕೋರ್ಟ್‌ ನ್ಯಾಯಮೂರ್ತಿ ಎ ಎಸ್‌ ಗಡ್ಕರಿ ಅವರು ಟ್ರಾನ್ಸಿಟ್‌‌ ಜಾಮೀನಿಗೆ ಸಂಬಂಧಿಸಿದಂತೆ ಹೊರಡಿಸಿರುವ ತೀರ್ಪನ್ನು ಪರಿಗಣಿಸುವಂತೆ ದೆಹಲಿ ಪೊಲೀಸರ ಪರ ವಕೀಲ ಹಿತೇನ್‌ ವೆನೆಗಾಂವ್ಕರ್ ಮನವಿ ಮಾಡಿದರು.

ಫೆಬ್ರುವರಿ 11ರಂದು ಜೇಕಬ್‌ ಮನೆಯ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದರು. ಬಳಿಕ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಲಾಗಿತ್ತು. ರೈತರ ಧರಣಿಗೆ ಸಂಬಂಧಿಸಿದಂತೆ ಟೂಲ್‌ಕಿಟ್‌ ಪ್ರಕರಣದಲ್ಲಿ ಅವರನ್ನು ಸಿಲುಕಿಸಿದ್ದು, ಆಕೆ ನಾಲ್ಕು ವಾರಗಳ ಟ್ರಾನ್ಸಿಟ್‌ ನಿರೀಕ್ಷಣಾ ಜಾಮೀನು ಕೋರುವುದರ ಜೊತೆಗೆ ಹಾಲಿ ಮನವಿಗೆ ಸಂಬಂಧಿಸಿದಂತೆ ಯಾವುದೇ ತೆರನಾದ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಮನವಿ ಮಾಡಿದ್ದರು.

ಜಾಗೃತಿಗಾಗಿ ಟೂಲ್‌ಕಿಟ್‌ ಅಥವಾ ಸಂವಹನ ಪ್ಯಾಕ್‌ಗಳನ್ನು ಸಂಪಾದಿಸಲು, ಪಸರಿಸಲು ತಮಗೆ ಯಾವುದೇ ರೀತಿಯ ಧಾರ್ಮಿಕ ಅಥವಾ ಆರ್ಥಿಕ ಉದ್ದೇಶಗಳಿಲ್ಲ ಎಂದು ನಿಕಿತಾ ಜೇಕಬ್ ಹೈಕೋರ್ಟ್‌ಗೆ ಸಲ್ಲಸಿರುವ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ಮುಂದುವರೆದು, ತಾನು ಮುಂಬೈ ನಿವಾಸಿಯಾಗಿದ್ದು ತನ್ನ ವಿರುದ್ಧ ದೆಹಲಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ತಾವು ಅಲ್ಲಿಗೆ ತೆರಳಿ ತಮ್ಮ ನಿರಪರಾಧಿತ್ವವನ್ನು ಸಮರ್ಥಿಸಿಕೊಳ್ಳುವುದು ಕಷ್ಟ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದರು.