Karnataka HC, Anti Corruption Bureau and Justice H P Sandesh
Karnataka HC, Anti Corruption Bureau and Justice H P Sandesh 
ಸುದ್ದಿಗಳು

ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಬೆದರಿಕೆ ಎದುರಿಸಲೂ ಸಿದ್ಧ: ಹೈಕೋರ್ಟ್‌ ನ್ಯಾ. ಸಂದೇಶ್‌ ಸ್ಫೋಟಕ ನುಡಿ

Bar & Bench

ಭ್ರಷ್ಟಾಚಾರಿಗಳ ಹೆಡೆಮುರಿ ಕಟ್ಟಬೇಕಿದ್ದ ಭ್ರಷ್ಟಾಚಾರ ನಿಗ್ರಹ ದಳವೇ (ಎಸಿಬಿ) ಭ್ರಷ್ಟರ ಕೂಪವಾಗಿದೆ. ಎಸಿಬಿ ಕಚೇರಿಗಳೇ ಕಲೆಕ್ಷನ್ ಸೆಂಟರ್‌ಗಳಾಗಿವೆ ಎಂದು ಈಚೆಗೆ ಆಕ್ರೋಶ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರು ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಬೆದರಿಕೆ ಎದುರಿಸಲೂ ಸಿದ್ಧನಿದ್ದೇನೆ ಎಂದು ಸೋಮವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಸೀಲ್ದಾರ್ ಪಿ ಎಸ್ ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠವು ನಡೆಸಿತು.

“ಎಸಿಬಿಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿರುವುದಕ್ಕೆ ನನಗೇ ವರ್ಗಾವಣೆ ಬೆದರಿಕೆ ಹಾಕಲಾಗಿದೆ” ಎಂದು ನ್ಯಾಯಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

ವಿಚಾರಣೆ ಆರಂಭವಾಗುತ್ತಿದ್ದಂತೆ ಎಸಿಬಿ ಪರ ವಕೀಲ ಪಿ ಎನ್‌ ಮನಮೋಹನ್‌ ಅವರು “ಎಸಿಬಿ ರಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಭಾಗೀಯ ಪೀಠದ ಮುಂದಿದ್ದು, ಈಗಾಗಲೇ ಆ ಪೀಠಕ್ಕೆ ವರದಿ ಸಲ್ಲಿಸಲಾಗಿದೆ” ಎಂದರು. ಅದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠವು ವಿಭಾಗೀಯ ಪೀಠಕ್ಕೆ ವರದಿ ಸಲ್ಲಿಸಿದ ಮಾತ್ರಕ್ಕೆ ಇಲ್ಲಿ ವರದಿ ನೀಡಬಾರದು ಎಂದರ್ಥವೇ? ಕಳೆದ ವಿಚಾರಣೆ ವೇಳೆ ವರದಿ ಸಲ್ಲಿಸುವುದಾಗಿ ನೀವೇ ಭರವಸೆ ನೀಡಿದ್ದಿರಿ. ಇದೀಗ ಬಂದು ಬೇರೆ ರೀತಿ ಹೇಳುತ್ತಿದ್ದೀರಿ. ನೀವು ಏನನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದೀರಿ?" ಎಂದು ಎಸಿಬಿ ಪರ ವಕೀಲರನ್ನು ತೀಕ್ಷ್ಣವಾಗಿ ಪ್ರಶ್ನಿಸಿತು.

ಎಡಿಜಿಪಿ ಪವರ್‌ಫುಲ್‌ ಅಂತೆ!

ನ್ಯಾಯಾಲಯ ಮೇಲ್ವಿಚಾರಣೆ ನಡೆಸಿದ ನಂತರವೇ ದೊಡ್ಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆದರೆ, ಈಗ ನ್ಯಾಯಾಲಯಕ್ಕೇ ಬೆದರಿಕೆ ಹಾಕುವ ಪರಿಸ್ಥಿತಿ ಉದ್ಭವಿಸಿದೆ. ನನ್ನನ್ನೇ ವರ್ಗಾವಣೆ ಮಾಡುವ ಕುರಿತು ಬೆದರಿಕೆ ಹಾಕಲಾಗಿದೆ. ಎಸಿಬಿ ಎಡಿಜಿಪಿ ತುಂಬ ಪವರ್‌ಫುಲ್‌ ಆಗಿದ್ದಾರಂತೆ, ಓರ್ವ ವ್ಯಕ್ತಿ ಈ ವಿಚಾರವನ್ನು ನನ್ನ ಸಹೋದ್ಯೋಗಿ ನ್ಯಾಯಮೂರ್ತಿಯೊಬ್ಬರಿಗೆ ಹೇಳಿದ್ದಾರಂತೆ. ಅದನ್ನು ಆಧರಿಸಿ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳೇ ನನಗೆ ವರ್ಗಾವಣೆಯ ಬೆದರಿಕೆ ಇದೆ ಎಂದು ತಿಳಿಸಿದ್ದಾರೆ. ವರ್ಗಾವಣೆ ಬೆದರಿಕೆಯ ಬಗ್ಗೆಯೂ ಆದೇಶದಲ್ಲಿ ಬರೆಯುತ್ತೇನೆ. ಯಾವುದೇ ರೀತಿಯ ಬೆದರಿಕೆ ಎದುರಿಸಲೂ ಸಿದ್ಧನಿದ್ದೇನೆ. ಜನರ ಒಳಿತಿಗಾಗಿ ವರ್ಗಾವಣೆಯಾಗಲೂ ಸಿದ್ಧನಿದ್ದೇನೆ. ಯಾರ ಬಗ್ಗೆಯೂ ನನಗೆ ಭಯವಿಲ್ಲ. ಬೆಕ್ಕಿಗೆ ಗಂಟೆ ಕಟ್ಟಲು ನಾನು ಸಿದ್ಧನಿದ್ದೇನೆ ಎಂದು ನ್ಯಾಯಮೂರ್ತಿಗಳು ಆಕ್ರೋಶದಿಂದ ನುಡಿದರು.

ಸಂವಿಧಾನಕ್ಕಷ್ಟೇ ಬದ್ಧ: ನ್ಯಾಯಮೂರ್ತಿ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನನ್ನ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ. ನಾನು ರೈತನ ಮಗ. ನನ್ನ ತಂದೆ ನನಗಾಗಿ ಮಾಡಿರುವ ಭೂಮಿ ಇದೆ. ಅದನ್ನು ಉಳುಮೆ ಮಾಡಿಕೊಂಡು ಬದುಕಲೂ ಸಿದ್ಧನಿದ್ದೇನೆ. ನನಗೆ 500 ರೂಪಾಯಿಯಲ್ಲಿ ಜೀವನ ನಡೆಸುವುದೂ ಗೊತ್ತು, 5 ಸಾವಿರ ರೂಪಾಯಿಯಲ್ಲಿ ಬದುಕುವುದಕ್ಕೂ ಗೊತ್ತು. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ, ಯಾವುದೇ ಪಕ್ಷದ ಸಿದ್ಧಾಂತಕ್ಕೂ ಬದ್ದನಾಗಿಲ್ಲ. ಸಂವಿಧಾನಕ್ಕೆ ಮಾತ್ರ ನಾನು ಬದ್ಧನಾಗಿದ್ದೇನೆ ಎಂದು ನ್ಯಾಯಮೂರ್ತಿಗಳು ಕಟುವಾಗಿ ನುಡಿದರು.

ಬೇಲಿಯೇ ಎದ್ದು ಹೊಲ ಮೇಯ್ದಂತೆ

ʼಬಿʼ ರಿಪೋರ್ಟ್‌ ಕುರಿತು ಮಾಹಿತಿ ಒದಗಿಸದ ಹಿನ್ನೆಲೆಯಲ್ಲಿ ಎಸಿಬಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪೀಠವು “ನೀವು ಸಾರ್ವಜನಿಕರನ್ನು ರಕ್ಷಿಸುತ್ತಿದ್ದೀರಾ ಅಥವಾ ಕಳಂಕಿತರನ್ನು ರಕ್ಷಿಸುತ್ತಿದ್ದೀರಾ? ಭ್ರಷ್ಟಾಚಾರ ಕ್ಯಾನ್ಸರ್‌ನಂತಾಗಿದೆ. ಅದನ್ನು ಮೊದಲ ಅಥವಾ ಎರಡನೇ ಹಂತದಲ್ಲಿರುವಾಗಲೇ ಗುಣಪಡಿಸಬೇಕು. 4ನೇ ಹಂತಕ್ಕೆ ಹೋಗಲು ಬಿಡಬಾರದು. ಆದರೆ, ಬೇಲಿಯೇ ಎದ್ದು ಹೊಲ ಮೇಯ್ದರೆ ನಾವೇನು ಮಾಡುವುದು. ಭ್ರಷ್ಟಾಚಾರಿಗಳ ವಿರುದ್ಧ ಶೋಧನಾ ವಾರಂಟ್ ಹೊರಡಿಸಿ, ನಂತರ ಅದನ್ನು ಮುಂದಿಟ್ಟುಕೊಂಡು ವಸೂಲಿ ಮಾಡಲಾಗುತ್ತಿದೆ. ಆದರೆ, ಶೋಧನಾ ವಾರಂಟ್ ಅನ್ನು ಕಾರ್ಯರೂಪಕ್ಕೆ ತರುವುದೇ ಇಲ್ಲ. ರೆಡ್ ಹ್ಯಾಂಡೆಡ್ ಆಗಿ ಸಿಕ್ಕಬಿದ್ದವರಿಗೂ ಬಿ ರಿಪೋರ್ಟ್ ಹಾಕಲಾಗಿದೆ. ದಾಳಿ ವೇಳೆ ಲಂಚದ ಹಣ ಸಿಕ್ಕ ಪ್ರಕರಣಗಳಲ್ಲೂ ವಿಚಾರಣೆ ನಡೆಸದೆ ಬಿ ವರದಿ ಹಾಕಲು ಹೇಗೆ ಸಾಧ್ಯ ಎಂದು ಪೀಠ ಪ್ರಶ್ನಿಸಿತು.

ಅಡ್ವೊಕೇಟ್‌ ಜನರಲ್‌ ಮಧ್ಯಪ್ರವೇಶ:

ಎಸಿಬಿ ಸಲ್ಲಿಸಿರುವ ಬಿ ವರದಿಗಳ ಮಾಹಿತಿ ನೀಡಿಲ್ಲವೇಕೆ, ಮಾಹಿತಿ ನೀಡಲು ಏಕೆ ಹಿಂಜರಿಯುತ್ತಿದ್ದೀರಿ. ಎಸಿಬಿ ಎಡಿಜಿಪಿಯ ಸರ್ವೀಸ್ ರೆಕಾರ್ಡ್ ಏಕೆ ಹಾಜರುಪಡಿಸಿಲ್ಲ. ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ವ್ಯಕ್ತಿ ಗುತ್ತಿಗೆ ನೌಕರನಾಗಿದ್ದಾನೆ. ಆತನನ್ನು ಯಾರು ನೇಮಕ ಮಾಡಿದ್ದು ಎಂಬ ಬಗ್ಗೆ ವಿವರ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ ಪೀಠವು ಎಸಿಬಿ ಎಡಿಜಿಪಿ ಸರ್ವೀಸ್ ರೆಕಾರ್ಡ್ ಹಾಜರುಪಡಿಸಲು ಡಿಪಿಎಎಆರ್ ಕಾರ್ಯದರ್ಶಿ ಮಧ್ಯಾಹ್ನ 2.30ಕ್ಕೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿತು.

ಮಧ್ಯಾಹ್ನ ವಿಚಾರಣೆಗೆ ಹಾಜರಾದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಎಸಿಬಿ ಎಡಿಜಿಪಿಯ ವಿವರ ನೀಡಿ, ಸಂಜೆಯೊಳಗೆ ಸರ್ವೀಸ್ ರೆಕಾರ್ಡ್ ನೀಡುವುದಾಗಿ ತಿಳಿಸಿದರು. ಡಿಸಿ ಕಚೇರಿಯ ಗುತ್ತಿಗೆ ನೌಕರನ ನೇಮಕಾತಿಗೆ ಸಂಬಂಧಿಸಿದ ಮಾಹಿತಿ ಏನಿದೆ? ಇಲ್ಲಿ ಏನು ನಡೆಯುತ್ತಿದೆ ಅಡ್ವೊಕೇಟ್ ಜನರಲ್ ಅವರೇ. ದುಡ್ಡು ವಸೂಲಿ ಮಾಡಲು ಖಾಸಗಿ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ. ಫೋನ್‌ನಲ್ಲಿ ನಡೆಸಿರುವ ಸಂಭಾಷಣೆ ಕೂಡಾ ರೆಕಾರ್ಡ್ ಆಗಿದೆ. ಜಿಲ್ಲಾಧಿಕಾರಿ ಒಪ್ಪಿಗೆ ಇಲ್ಲದೆ ಆತ 5 ಲಕ್ಷ ರೂಪಾಯಿ ಲಂಚ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿತು.

ಅದಕ್ಕೆ ಉತ್ತರಿಸಿದ ಅಡ್ವೊಕೇಟ್‌ ಜನರಲ್‌ ಅವರು ಎಸಿಬಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಒದಗಿಸುತ್ತೇವೆ. ಬಿ ವರದಿಗಳ ಕುರಿತ ಸಂಪೂರ್ಣ ಮಾಹಿತಿ ನೀಡುತ್ತೇವೆ. ನ್ಯಾಯಾಲಯದ ಆದೇಶವನ್ನು ಸರ್ಕಾರ ಚಾಚೂ ತಪ್ಪದೆ ಪಾಲಿಸಲಿದೆ. ನನ್ನ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಳ್ಳಬಹುದು ಎಂದು ಪೀಠಕ್ಕೆ ಭರವಸೆ ನೀಡಿದರು. ಅದನ್ನು ದಾಖಲಿಸಿಕೊಂಡ ಪೀಠವು ಎಸಿಬಿ ಸ್ಥಾಪನೆಗೊಂಡ ದಿನದಿಂದ ಈವರೆಗೆ ಸಲ್ಲಿಸಿರುವ ಬಿ ರಿಪೋರ್ಟ್‌ಗಳೆಷ್ಟು, ಎಷ್ಟು ವರದಿಗಳು ಅಂಗೀಕೃತಗೊಂಡಿವೆ ಎಂಬ ಮಾಹಿತಿಯನ್ನು ಜುಲೈ 7ರೊಳಗೆ ಸಲ್ಲಿಸಬೇಕು ಎಂದು ಎಸಿಬಿಗೆ ತಾಕೀತು ಮಾಡಿ ವಿಚಾರಣೆ ಮುಂದೂಡಿತು.

ಜನರ ರಕ್ತ ಹೀರುತ್ತಾರೆ

ಅರ್ಜಿ ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿದಾಗ ಸರ್ಕಾರಿ ವಕೀಲರು, ಪಿಎಸ್‌ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದ ಪ್ರಕರಣವೂ ಅಂದೇ ವಿಚಾರಣೆಗೆ ನಿಗದಿಯಾಗಿದೆ ಎಂದು ನ್ಯಾಯಮೂರ್ತಿಗಳ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಎರಡೂ ಅರ್ಜಿಗಳು ಒಟ್ಟಿಗೇ ವಿಚಾರಣೆಗೆ ಬರಲಿ ಬಿಡಿ. ಆ ಪ್ರಕರಣದಲ್ಲೂ ಒಎಂಆರ್ ಶೀಟ್ ಮತ್ತು ಎಫ್‌ಎಸ್‌ಎಲ್ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಆ ವರದಿಗಳು ಸಲ್ಲಿಕೆಯಾಗಲಿ ಎಂದರು.

ಸರ್ಕಾರದ ಪರ ವಕೀಲರು, ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಎಡಿಜಿಪಿ ಅಮೃತ್ ಪೌಲ್ ಅವರನ್ನು ಇಂದು ಬಂಧಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆಗ ಪೀಠವು 545 ಪಿಐಎಸ್ ಹುದ್ದೆಗಳಲ್ಲಿ ಕನಿಷ್ಠ 400 ಹುದ್ದೆಗಳು ಮಾರಾಟವಾಗಿವೆ. ಇವರೆಲ್ಲ ಪಿಎಸ್‌ಐಗಳಾಗಿ ಏನು ಮಾಡುತ್ತಾರೆ. ಹಣ ಹೂಡಿಕೆ ಮಾಡಿ ಹುದ್ದೆ ಪಡೆದವರು ಮುಂದೆ ಆ ಹಣ ವಸೂಲಿ ಮಾಡಲು ಜನರ ರಕ್ತ ಹೀರುತ್ತಾರಷ್ಟೆ. ಇದೇ ಕಾರಣಕ್ಕೆ ಹೇಳುತ್ತಿದ್ದೇನೆ. ಭ್ರಷ್ಟಾಚಾರ ಕ್ಯಾನ್ಸರ್‌ನಂತೆ ಹರಡುತ್ತಿದೆ. ನಾಲ್ಕನೇ ಹಂತ ತಲುಪಲು ಬಿಡಬಾರದು ಎಂದು ಮಾರ್ಮಿಕವಾಗಿ ನುಡಿದರು.

ಅಧಿಕಾರಿಗಳದ್ದೇ ದರ್ಬಾರ್

ಐಎಎಸ್ ಅಧಿಕಾರಿಯ ಲಾಬಿ ಬಗ್ಗೆ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ಐಎಎಸ್ ಅಧಿಕಾರಿಯೊಬ್ಬರ ಮೇಲೆ ನಡೆಸಿದ ದಾಳಿಯಲ್ಲಿ ನಾಲ್ಕೂವರೆ ಕೋಟಿ ಹಣ ಮತ್ತು 6 ಕೆ.ಜಿ. ಚಿನ್ನ ಸಿಕ್ಕಿತ್ತು. ಆದರೆ, ಎಸಿಬಿ ಮಾತ್ರ ಆ ಕೇಸಿನಲ್ಲಿ ಬಿ ರಿಪೋರ್ಟ್ ಹಾಕಿದೆ. ಬಿ ರಿಪೋರ್ಟ್ ಹಾಕಿದ್ದೇಕೆ ಎಂದು ಪ್ರಶ್ನಿಸಿದ ನ್ಯಾಯಾಧೀಶರನ್ನೇ ವರ್ಗಾಯಿಸಲಾಗಿದೆ. ಬೇರೆ ನ್ಯಾಯಾಧೀಶರು ಬಂದ ನಂತರ ಬಿ ರಿಪೋರ್ಟ್ ಅಂಗೀಕರಿಸಲಾಗಿದೆ. ಇದನ್ನೆಲ್ಲಾ ನೋಡಿ ಕಣ್ಮುಚ್ಚಿ ಕೂರುವುದಾದರೂ ಹೇಗೆ, ವರ್ಗಾವಣೆ ಬೆದರಿಕೆ ಬಗ್ಗೆ ಹೇಳಿದವರ ಹೆಸರನ್ನೂ ಬಹಿರಂಗಪಡಿಸುತ್ತೇನೆ. ಎಸಿಬಿಯ ಹಾಲಿ ಎಡಿಜಿಪಿ ಬಂದ ನಂತರ ಎಷ್ಟು ಬಿ ರಿಪೋರ್ಟ್ ಆಗಿದೆ. ಐಎಎಸ್, ಐಪಿಎಸ್ ಲಾಬಿಗೆ ಒಳಗಾಗುತ್ತಿದೆ. ರಾಜ್ಯಕ್ಕೆ ಅವಮಾನವಾಗುತ್ತಿದ್ದರೂ ಕಳಂಕಿತ ಡಿಸಿಯನ್ನು ರಕ್ಷಿಸಲಾಗುತ್ತಿದೆ. ರಾಜ್ಯದಲ್ಲಿ ಅಧಿಕಾರಿಗಳಿಗೇ ದರ್ಬಾರ್ ನಡೆಸಲು ಬಿಡಲಾಗಿದೆ. ಆ ಮೂಲಕ ಸರ್ಕಾರವೂ ಅಪರಾಧದ ಭಾಗವಾಗಿರುವಂತಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿತು.